ಬಳ್ಳಾರಿ: ಜಾಗತಿಕ ಮಟ್ಟದ ಕ್ರೀಡಾಕೂಟವಾದ ಫಿಫಾ ವಿಶ್ವಕಪ್‌ನ ಆಯೋಜನೆ, ಸಂಘಟನೆ, ಅದರ ನಿಯಮಗಳು ಪ್ರತಿ ಕ್ರೀಡಾಪಟುವಿಗೆ ಕೇವಲ ಕ್ರೀಡಾ ಅನುಭವವನ್ನಷ್ಟೇ ಅಲ್ಲ, ಬದುಕಿನ ಮೌಲ್ಯಯುತ ಪಾಠಗಳನ್ನು ಕಲಿಸುತ್ತವೆ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ವಿ.ಲೋಕೇಶ್ ಅಭಿಪ್ರಾಯಪಟ್ಟರು.

ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ಮತ್ತು ಕ್ರೀಡಾವಿಜ್ಞಾನ ವಿಭಾಗದಿಂದ ಫಿಫಾ ವಿಶ್ವಕಪ್-2026 ಅಂಗವಾಗಿ ಆಯೋಜಿಸಲಾದ ವಿಭಾಗೀಯ ಮಟ್ಟದ ಫುಟ್‌ಬಾಲ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡೆಯು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿದೆ. ಶಿಸ್ತು, ನಾಯಕತ್ವ, ತಂಡದ ಮನೋಭಾವ ಮತ್ತು ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ಬೆಳೆಸುತ್ತದೆ. ಕ್ರೀಡಾಕೂಟಗಳು ಯುವಜನರಿಗೆ ಸ್ಫೂರ್ತಿದಾಯಕವಾಗಿದೆ. ಕ್ರೀಡೆಯ ಮಹತ್ವವನ್ನು ಜಗತ್ತಿನಾದ್ಯಂತ ಸಾರುತ್ತಿವೆ ಎಂದು ತಿಳಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಗುಂತಕಲ್ ರೈಲ್ವೆ ವಿಭಾಗದ ಹಿರಿಯ ತಾಂತ್ರಿಕರು ಹಾಗೂ ಫುಟ್‌ಬಾಲ್ ಕ್ರೀಡಾಪಟು ಚಂದ್ರಮೌಳಿ ಮಾತನಾಡಿ, ಕ್ರೀಡೆಯನ್ನು ಪ್ರತಿಯೊಬ್ಬರು ಧನಾತ್ಮಕ ಮನೋಭಾವದಿಂದ ಸ್ವೀಕರಿಸಬೇಕು. ಕ್ರೀಡಾ ನಿಯಮಗಳನ್ನು ಗೌರವಿಸಿ ಪಾಲಿಸುವುದರ ಮೂಲಕ ನಿಜವಾದ ಕ್ರೀಡಾಸ್ಫೂರ್ತಿ ಪ್ರದರ್ಶಿಸಬೇಕು ಎಂದು ಹೇಳಿದರು.

ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಸ್ಫೂರ್ತಿ ಕೆ.ಜಿ. ಮಾತನಾಡಿ, ನಿರಂತರವಾಗಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ವ್ಯಕ್ತಿತ್ವದಲ್ಲಿ ಪರಿಪೂರ್ಣತೆ ಮೂಡುತ್ತದೆ. ಸೂಕ್ತ ತರಬೇತಿ, ಸಮರ್ಪಣಾ ಮನೋಭಾವದಿಂದ ಉತ್ತಮ ಸಾಧನೆ ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.


ದೈಹಿಕ ಶಿಕ್ಷಣ ಮತ್ತು ಕ್ರೀಡಾವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಸಂಪತಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ. ಶಶಿಧರ ಕೆಲ್ಲೂರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಶ್ ವಂದಿಸಿದರು.

ಕಾರ್ಯಕ್ರಮದಲ್ಲಿ ವಿಭಾಗದ ಅತಿಥಿ ಉಪನ್ಯಾಸಕರು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಎಂ.ಪಿ.ಇಡಿ. ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಅಭಿನವ ಬಿಂದ್ರಾ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿ ಟ್ರೋಫಿ ತನ್ನದಾಗಿಸಿಕೊಂಡಿತು.

ಬಳ್ಳಾರಿ ವಿವಿಯಲ್ಲಿ ಜರುಗಿದ ವಿಭಾಗೀಯ ಮಟ್ಟದ ಫುಟ್‌ಬಾಲ್ ಪಂದ್ಯಾವಳಿಯನ್ನು ಕುಲಸಚಿವ ಪ್ರೊ.ವಿ.ಲೋಕೇಶ್ ಉದ್ಘಾಟಿಸಿದರು.