ಜಿಲ್ಲಾದ್ಯಂತ ದೀಪಾವಳಿ ಶ್ರದ್ಧಾಭಕ್ತಿಯಿಂದ ಆಚರಣೆ

| Published : Nov 01 2024, 12:03 AM IST

ಸಾರಾಂಶ

ಶಿವಮೊಗ್ಗ ನಗರದಲ್ಲಿ ದೀಪಾವಳಿ ಹಬ್ಬಕ್ಕೆ ಮಹಿಳೆಯರು ಹಣತೆ ಖರೀದಿಸುತ್ತಿರುವುದು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕತ್ತಲಿನಿಂದ ಬೆಳಕಿನಡೆಗೆ, ಅಜ್ಞಾನದಿಂದ ಸುಜ್ಞಾನದ ಕಡೆಗೆ ಕೊಂಡೊಯ್ಯುವ ಭಾರತೀಯ ಪರಂಪರೆಯ ಬಹುದೊಡ್ಡ ಹಬ್ಬ ದೀಪಾವಳಿಯನ್ನು ಶಿವಮೊಗ್ಗ ಸೇರಿದಂತೆ ಜಿಲ್ಲೆಯಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ದೇವಾಲಯಗಳಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಭಕ್ತರು ಕುಟುಂಬ ಸಮೇತರಾಗಿ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ದೀಪಾವಳಿ ಎಂದರೆ ಕತ್ತಲೆಯಿಂದ ಬೆಳಕಿನೆಡೆ ಸಾಗುವುದನ್ನು ಸಂಕೇತಿಸುವ ಆಚರಣೆಯೇ ಬದುಕಿನ ಧ್ಯೇಯವಾಗಿರಬೇಕು ಎಂದು ಪುರಾಣ ಪರ್ವದ ಅನಾದಿಕಾಲದ ಉಪನಿಷತ್ತಿನ ಆಶಯವಾಗಿದೆ.

*ಅಂಗಡಿಗಳಿಗೆ ವಿಶೇಷ ಅಲಂಕಾರ:

ಗುರುವಾರ ಮತ್ತು ಶುಕ್ರವಾರ ಅಮಾವಾಸ್ಯೆ ಇರುವುದರಿಂದ ಕೆಲವು ಅಂಗಡಿ ಹಾಗೂ ಕಚೇರಿಗಳಲ್ಲಿ ಗುರುವಾರವೇ ಲಕ್ಷ್ಮೀ ಪೂಜೆಯನ್ನು ನೆರವೇರಿಸಲಾಯಿತು. ವರ್ತಕರು ದೀಪಾವಳಿ ಅಮವಾಸ್ಯೆಯ ದಿನ ಹೊಸ ಲೆಕ್ಕಾಪುಸ್ತಕಗಳಿಗೆ ಪೂಜೆ ಮಾಡುವ ಪರಿ ಪಾಠವಿದ್ದು, ವಿಶೇಷವಾಗಿ ವರ್ತಕರು ಅಂಗಡಿಗಳನ್ನು ಅಲಂಕರಿಸಿ, ಲಕ್ಷ್ಮೀ ಪೂಜೆ ಮಾಡಿ, ಸಿಹಿ ಹಂಚಿದರು.

*ಪಟಾಕಿ ಖರೀದಿ ಜೋರು: ಬೆಳಕಿನ ಹಬ್ಬ ದೀಪಾವಳಿ ಬಂತೆಂದರೆ ಹೊಸ ಬಟ್ಟೆ ಜೊತೆಗೆ ಪಟಾಕಿ ಖರೀದಿ ಬಲು ಜೋರಾಗಿರುತ್ತದೆ. ಈಗಾಗಲೇ ಪಟಾಕಿ ಅಂಗಡಿಗಳಲ್ಲಿ ಮಾರಾಟ ಜೋರಾಗಿ ಸಾಗಿದೆ. ಪಟಾಕಿ ಬೆಲೆಯಲ್ಲಿ ಅಲ್ಪ ಏರಿಕೆ ಕಂಡಿದೆ. ಬೆಲೆ ಏರಿಕೆ ನಡುವೆಯೇ ಪಟಾಕಿ ಮಾರಾಟ ಜೋರಾಗಿಯೇ ಸಾಗಿದೆ. ಗ್ರಾಹಕರು ಚೌಕಾಸಿ ಮಾಡಿ ತಮಗೆ ಇಷ್ಟವಾದ ಪಠಾಕಿಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ನಗರದ ಪ್ರಮುಖ ಮಾರುಕಟ್ಟೆ ಹಾಗೂ ವಾಣಿಜ್ಯ ಪ್ರದೇಶಗಳಲ್ಲಿ ವ್ಯಾಪಾರ ವಹಿವಾಟು ಭರ್ಜರಿಯಾಗಿ ಸಾಗಿದೆ. ಬಟ್ಟೆ, ದಿನಸಿ ಸಾಮಗ್ರಿ ಹಾಗೂ ಗೃಹಪಯೋಗಿ ವ್ಯಾಪಾರ ಮಳಿಗೆಗಳಲ್ಲಿ ವ್ಯಾಪಾರ ಬಲು ಜೋರಾಗಿ ನಡೆದಿದೆ. ಗ್ರಾಹಕರನ್ನು ಆಕರ್ಷಿಸಲು ಕೆಲವು ಮಾರಾಟ ಮಳಿಗೆಗಳಲ್ಲಿ ರಿಯಾಯಿತಿ ದರದಲ್ಲಿ ಮಾರಾಟ ನಡೆಸುತ್ತಿದ್ದಾರೆ.

*ಹೂವು-ಹಣ್ಣು ದುಬಾರಿ:

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಹೂವು ಹಾಗೂ ಹಣ್ಣುಗಳ ಬೆಲೆ ಏರಿಕೆ ಕಂಡಿದೆ. ಸೇಬು ಹಣ್ಣು ಕೆಜಿಗೆ ₹140 ರು. ಮುಸಂಬಿ 100ರು, ಸಪೋಟ 100, ಬಾಳೇಹಣ್ಣು 80, ದಾಳಿಂಬೆ 250 ರು. ಇದೆ. ಹಾಗೆಯೆ ಹೂವಿನ ದರದಲ್ಲೂ ಅಲ್ಪ ಏರಿಕೆ ಕಂಡಿದೆ. ಮಾರು ಸೇವಂತಿಗೆ 60 ರು. ಮಲ್ಲಿಗೆ 120 ರು. ಚೆಂಡು ಹೂ 100 ರು. ಇದೆ ಮಾರುಕಟ್ಟೆಯಲ್ಲಿ ಬಾಳೆಕಂದು, ಮಾವಿನ ಸೊಪ್ಪು, ಆಕಾಶಬುಟ್ಟಿ, ಹಣತೆ ಸೇರಿದಂತೆ ಪೂಜಾ ಸಾಮಗ್ರಿಗಳ ಮಾರಾಟ ಕೂಡ ಭರ್ಜರಿಯಾಗಿ ನಡೆದಿದೆ.