ಪೋಲಿ ಎಂದು ಶಾಲೆಯಿಂದ ಡಿ.ಕೆ. ಶಿವಕುಮಾರ್‌ ಅಮಾನತು!

| N/A | Published : Sep 06 2025, 01:00 AM IST / Updated: Sep 06 2025, 08:38 AM IST

Dk Shivakumar

ಸಾರಾಂಶ

ನಮ್ಮ ಅಪ್ಪ ನನ್ನನ್ನು ಎಂಜಿನಿಯರ್‌ ಮಾಡಬೇಕೆಂಬ ಕನಸು ಹೊಂದಿದ್ದರು. ಆದರೆ, ನಾನು ವಿದ್ಯೆ ಕಲಿಯಲಿಲ್ಲ ಎಂದು ಉಪ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

 ಬೆಂಗಳೂರು :  ನಮ್ಮ ಅಪ್ಪ ನನ್ನನ್ನು ಎಂಜಿನಿಯರ್‌ ಮಾಡಬೇಕೆಂಬ ಕನಸು ಹೊಂದಿದ್ದರು. ಆದರೆ, ನಾನು ವಿದ್ಯೆ ಕಲಿಯಲಿಲ್ಲ ಎಂದು ಉಪ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಈ ವೇಳೆ ತಮ್ಮ ಬಾಲ್ಯದ ದಿನಗಳನ್ನು ಅವರು ನೆನೆದರು. ಎಸ್ಸೆಸ್ಸೆಲ್ಸಿಯಲ್ಲಿ 287 ಅಂಕಗಳನ್ನು ಪಡೆದಿದ್ದೆ. ಎನ್‌ಪಿಎಸ್‌ ಶಾಲೆಯಲ್ಲಿ ಶಿಕ್ಷಕರಾಗಿದ್ದ ಡಾ. ಗೋಪಾಲಕೃಷ್ಣ ಅವರು ಇವನು ಸರಿಯಿಲ್ಲ, ಪೋಲಿ ಎಂದು ಶಾಲೆಯಿಂದ ಡಿಸ್ಮಿಸ್‌ ಮಾಡಿದ್ದರು. ಆನಂತರ ಅವರೇ ನಾನು ಶಾಲೆ ಕಟ್ಟಲು ಸಹಕಾರ ನೀಡಿದರು ಎಂದು ತಿಳಿಸಿದರು.

ಶಿಕ್ಷಣ ಕ್ಷೇತ್ರ ಚುನಾವಣೆಗೆ ಈಗಲೇ ಅಭ್ಯರ್ಥಿ ಆಯ್ಕೆ:

ಮುಂದಿನ ವರ್ಷ ನಡೆಯಲಿರುವ ವಿಧಾನಪರಿಷತ್‌ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರಗಳ ಚುನಾವಣೆಗೆ ಇನ್ನೊಂದು ತಿಂಗಳಲ್ಲಿ ಆಕಾಂಕ್ಷಿಗಳಿಂದ ಅರ್ಜಿ ಸ್ವೀಕರಿಸಿ, ಶೀಘ್ರದಲ್ಲಿ ಅಭ್ಯರ್ಥಿಗಳನ್ನೂ ಘೋಷಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಶಿಕ್ಷಣ ಕ್ಷೇತ್ರದ ವಿಧಾನಪರಿಷತ್‌ ಚುನಾವಣೆ ಮುಂದಿನ ವರ್ಷ ನಡೆಯಲಿದೆ. ನಾಲ್ಕು ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ಅದಕ್ಕೆ ಈಗಲೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಅದಕ್ಕಾಗಿ ಮುಂದಿನ ಒಂದು ತಿಂಗಳಲ್ಲಿ ಆಕಾಂಕ್ಷಿಗಳಿಂದ ಅರ್ಜಿ ಸ್ವೀಕರಿಸಲಾಗುವುದು. ಅದನ್ನು ಪರಿಶೀಲನೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಅದರಿಂದ ಆ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಈಗಿನಿಂದಲೇ ಕೆಲಸ ಮಾಡಲು ಅನುಕೂಲವಾಗಲಿದೆ ಎಂದರು.

ನನ್ನ ಮೇಲೆ ಗದೆ ಎತ್ತಿಕೊಂಡು ಬಂದ್ರು:

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮುಂದಾಗದ ಶಿಕ್ಷಣ ಸಂಸ್ಥೆಗಳನ್ನು ಸರಿದಾರಿಗೆ ತರುವುದು ಗೊತ್ತಿದೆ ಎಂದು ಹೇಳುತ್ತಲೇ ಹಿಂದಿನ ತಮ್ಮ ಹೇಳಿಕೆಗಳಿಂದಾದ ವಿವಾದಗಳನ್ನು ನೆನಪು ಮಾಡಿಕೊಂಡ ಡಿ.ಕೆ.ಶಿವಕುಮಾರ್‌, ನಾನು ಈ ರೀತಿಯ ಹೇಳಿಕೆ ನೀಡುವುದನ್ನೇ ಮಾಧ್ಯಮದವರು ಕಾಯುತ್ತಿರುತ್ತಾರೆ. ಕಳೆದ ವಿಧಾನಮಂಡಲ ಅಧಿವೇಶನದಲ್ಲಿ ಬಿಜೆಪಿಗರಿಗೆ ನಿಮ್ಮ ಪಕ್ಷದ ನಿಮಗಿಂತ ನನಗೆ ಹೆಚ್ಚು ತಿಳಿದಿದೆ ಎಂದು ಹೇಳಿದ್ದಕ್ಕೆ ಗದೆ ಎತ್ತಿಕೊಂಡು ಬಂದರು. ಅದರಿಂದ ತಪ್ಪಿಸಿಕೊಳ್ಳೋದು ಕಷ್ಟವಾಯಿತು ಎಂದು ಹೇಳಿದರು.

Read more Articles on