ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಕೆಆರ್ ಎಸ್ ಸುತ್ತಮುತ್ತ ಗಣಿಗಾರಿಕೆ ನಿಷೇಧಿಸಲಾಗಿದೆ. ಹೀಗಾಗಿ, ಕೆಆರ್ ಎಸ್ ಬಳಿ ಪ್ರಾಯೋಗಿಕ ಬ್ಲಾಸ್ಟ್ ನಡೆಸದಂತೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.ಕೆಆರ್ ಎಸ್ ಸುತ್ತಮುತ್ತ ಗಣಿಗಾರಿಕೆ ನಿಷೇಧಿಸಲು ರಾಜ್ಯ ರೈತ ಸಂಘವು ಸತತ ಹೋರಾಟ ನಡೆಸಿತ್ತು. ಈಗ ನ್ಯಾಯಾಲಯ ಅದೇಶಿಸಿದೆ ಎಂಬ ಕಾರಣ ನೀಡಿ ಇಲ್ಲಿ ಟ್ರಯಲ್ ಬ್ಲಾಸ್ಟ್ ಮಾಡಲು ಅಧಿಕಾರಿ ವರ್ಗ ಸಿದ್ಧತೆ ನಡೆಸಿದ್ದು, ಇದಕ್ಕೆ ರೈತ ಸಂಘ ಅವಕಾಶ ಕೊಡುವುದಿಲ್ಲ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
ಇದೇ ವೇಳೆ ಹೈಕೋರ್ಟ್ ಸಹ ಗಣಿಗಾರಿಕೆಗಿಂತ ಜಲಾಶಯ ಮುಖ್ಯ ಎಂದು ಹೇಳಿದೆ. ಆದರೆ, ವೈಜ್ಞಾನಿಕ ಕಾರಣಕ್ಕಾಗಿ ಪ್ರಾಯೋಗಿಕವಾಗಿ ಸ್ಫೋಟ ನಡೆಸುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಈ ರೀತಿಯ ಪ್ರಯತ್ನಗಳಿಗೆ ರೈತರು ವಿರೋಧ ವ್ಯಕ್ತಪಡಿಸಿ ವಾಪಸ್ ಕಳುಹಿಸಿದ್ದರು. ಈಗಲೂ ಮತ್ತೆ ಇದಕ್ಕಾಗಿ ಬರುವ ಸೂಚನೆಯಿದ್ದು, ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.ಟ್ರಯಲ್ ಬ್ಲಾಸ್ಟ್ ಕಂಪನದಿಂದ ಈಗಲ್ಲದಿದ್ದರೂ ಮುಂದೆಂದಾದರೂ ಜಲಾಶಯಕ್ಕೆ ಅಪಾಯ ಒದಗಬಹುದಾಗಿದೆ. ಆದ್ದರಿಂದ ಸರ್ಕಾರ ಜನರ ಅಭಿಪ್ರಾಯವನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಬೇಕು. ಇನ್ನೂ ಟ್ರಯಲ್ ಬ್ಲಾಸ್ಟ್ ನಡೆಸಬೇಕೆಂಬ ಸರ್ಕಾರದ ನಿರ್ಧಾರದ ಹಿಂದೆ ತಮಗೆ ಅನುಮಾನವಿದೆ. ವ್ಯತಿರಿಕ್ತ ವರದಿ ಪಡೆದು ಗಣಿಗಾರಿಕೆಗೆ ಅವಕಾಶ ದೊರಕಿಸುವ ಹುನ್ನಾರ ಇದೆ ಎಂಬ ಶಂಕೆ ಕಾಡುತ್ತಿದೆ ಎಂದು ಅವರು ಆರೋಪಿಸಿದರು.
ಸರ್ಕಾರಗಳ ಜನವಿರೋಧಿ ನೀತಿ ವಿರುದ್ಧ ಚಳವಳಿ ಗಟ್ಟಿಗೊಳಿಸಲು ಜು.10 ರಂದು ದೆಹಲಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಕರೆದಿರುವ ಸಭೆಯಲ್ಲಿ ತಾವು ಭಾಗವಹಿಸಿತ್ತಿದ್ದೇವೆ. ಇನ್ನೂ ರಾಜ್ಯದಲ್ಲಿ ರೈತ ಸಂಘಟನೆ ಬಲಗೊಳಿಸಲು ಮನಗೊಬ್ಬ ಸದಸ್ಯ, ಊರಿಗೊಬ್ಬ ಕಾರ್ಯಕರ್ತ ಎಂಬ ಅಭಿಯಾನ ಆರಂಭಿಸಿ, ಮುಂದಿನ ಎರಡು ವರ್ಷದಲ್ಲಿ ಸುಮಾರು ಎರಡು ಕೋಟಿ ಸದಸ್ಯರನ್ನು ಹೊಂದುವ ಗುರಿ ಇದೆ ಎಂದರು.ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಮುಖಂಡರಾದ ಪ್ರಸನ್ನ ಎನ್. ಗೌಡ, ನಾಗನಹಳ್ಳಿ ವಿಜೇಂದ್ರ, ಮಂಡಕಳ್ಳಿ ಮಹೇಶ್ ಮೊದಲಾದವರು ಇದ್ದರು.