ಸಾರಾಂಶ
ಪ್ರತಿಯೊಬ್ಬರೂ ಯಾವುದೇ ವಸ್ತುಗಳನ್ನು ಕೊಂಡ ನಂತರ ಸಂಬಂಧಿಸಿದ ಬಿಲ್(ರಸೀತಿ) ಪಡೆಯುವುದನ್ನು ಮರೆಯಬಾರದು ಎಂದು ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ. ಎಸ್. ಮಹೇಶ್ ತಿಳಿಸಿದರು.ಗ್ರಾಹಕರು ವಸ್ತುಗಳನ್ನು ಕೊಂಡ ನಂತರ ವ್ಯಾಪಾರಿಗೆ ಹಣ ಸಂದಾಯ ಮಾಡುತ್ತಾರೆ. ಆದರೆ ತಕ್ಕ ಬಿಲ್ ಪಡೆಯುವುದನ್ನು ಮರೆಯುತ್ತಿದ್ದಾರೆ. ವಸ್ತುಗಳು ಲೋಪದಿಂದ ಕೂಡಿದಾಗ ಗ್ರಾಹಕರ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲು ಅಗತ್ಯ ಬಿಲ್ ಹಾಜರುಪಡಿಸಬೇಕು. ಇಲ್ಲದಿದ್ದರೆ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಲು ಸಾಧ್ಯವಾಗುವುದಿಲ್ಲ.
ಕನ್ನಡಪ್ರಭ ವಾರ್ತೆ ಆಲೂರು
ಪ್ರತಿಯೊಬ್ಬರೂ ಯಾವುದೇ ವಸ್ತುಗಳನ್ನು ಕೊಂಡ ನಂತರ ಸಂಬಂಧಿಸಿದ ಬಿಲ್(ರಸೀತಿ) ಪಡೆಯುವುದನ್ನು ಮರೆಯಬಾರದು ಎಂದು ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ. ಎಸ್. ಮಹೇಶ್ ತಿಳಿಸಿದರು.ಪಟ್ಟಣದ ಬಿಕ್ಕೋಡು ರಸ್ತೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಮತ್ತು ತಾಲೂಕು ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಗ್ರಾಹಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಬಹುತೇಕ ಗ್ರಾಹಕರು ವಸ್ತುಗಳನ್ನು ಕೊಂಡ ನಂತರ ವ್ಯಾಪಾರಿಗೆ ಹಣ ಸಂದಾಯ ಮಾಡುತ್ತಾರೆ. ಆದರೆ ತಕ್ಕ ಬಿಲ್ ಪಡೆಯುವುದನ್ನು ಮರೆಯುತ್ತಿದ್ದಾರೆ. ವಸ್ತುಗಳು ಲೋಪದಿಂದ ಕೂಡಿದಾಗ ಗ್ರಾಹಕರ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲು ಅಗತ್ಯ ಬಿಲ್ ಹಾಜರುಪಡಿಸಬೇಕು. ಇಲ್ಲದಿದ್ದರೆ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಲು ಸಾಧ್ಯವಾಗುವುದಿಲ್ಲ.ಸೇವಾ ನ್ಯೂನತೆಯಾದಲ್ಲಿ ವ್ಯತ್ಯಾಸ ಕಂಡುಬಂದಾಗ, ವಸ್ತುಗಳನ್ನು ಸರಿಪಡಿಸಿಕೊಡುವುದು ಅಥವಾ ಬದಲಾಯಿಸಿಕೊಡುವುದು ವ್ಯಾಪಾರಿಯ ಹಕ್ಕು. ಇದಕ್ಕೆ ಒಪ್ಪದಿದ್ದಾಗ ಗ್ರಾಹಕರ ವ್ಯಾಜ್ಯ ನ್ಯಾಯಾಲಯದಲ್ಲಿ ಪ್ರಕರಣವನ್ನು ವೈಯಕ್ತಿಕವಾಗಿ ಅಥವಾ ವಕೀಲರ ಮೂಲಕ ಪ್ರಕರಣ ದಾಖಲಿಸಲು ಅವಕಾಶವಿದೆ. ನ್ಯಾಯಾಲಯ ಪ್ರಕರಣವನ್ನು ಇತ್ಯರ್ಥಗೊಳಿಸಿದ ನಂತರ ವ್ಯಾಪಾರಿಗೆ ದಂಡ ವಿಧಿಸಲು ಅಥವಾ ಗ್ರಾಹಕರಿಗೆ ಪರಿಹಾರ ಕೊಡಿಸಲು ಅವಕಾಶವಿದೆ. ಆದ್ದರಿಂದ ಪ್ರತಿಯೊಬ್ಬರೂ ವಸ್ತುಗಳನ್ನು ಕೊಳ್ಳುವಾಗ ತಪ್ಪದೇ ಬಿಲ್ ಪಡೆಯಬೇಕು ಎಂದರು.
ಕಾರ್ಯಕ್ರಮವನ್ನುದ್ದೇಶಿಸಿ ವಕೀಲ ಬಿ. ಮಂಜೇಗೌಡ, ಮೊರಾರ್ಜಿ ವಸತಿ ಶಾಲೆ ಪ್ರಾಂಶುಪಾಲ ಬಿ. ಪ್ರಕಾಶ್ ಮಾತನಾಡಿದರು. ಸಮಾರಂಭದಲ್ಲಿ ವಕೀಲರಾದ ಸೌಮ್ಯ, ಎಂ. ಮೊನಿಷಾ, ಶಿಕ್ಷಕರಾದ ಮಹೇಶ್, ಸುಬ್ರಹ್ಮಣ್ಯ ನಾಯಕ್, ಅಪ್ಪಣ್ಣ ಉಪಸ್ಥಿತರಿದ್ದರು.