ಸಾರಾಂಶ
ಕನ್ನಡಪ್ರಭ ವಾರ್ತೆ ಗೋಕಾಕ
ರೈತ ಬಾಂಧವರು ಸಾಲಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾಗದೇ ಧೈರ್ಯದಿಂದ ಎದುರಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.ನಗರದ ಎನ್ಎಸ್ಎಫ್ ಅತಿಥಿಗೃಹದಲ್ಲಿ ಕೃಷಿ ಇಲಾಖೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಕ್ಕೆ ಸರ್ಕಾರದ ಸಹಾಯಧನದ ಮಂಜೂರಾತಿ ಆದೇಶ ಪತ್ರಗಳನ್ನು ವಿತರಿಸಿ ಮಾತನಾಡಿದ ಅವರು, ರೈತರು ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಿ ನಿಮ್ಮೊಂದಿಗೆ ನಾವಿದ್ದೇವೆ. ಸಮಸ್ಯೆಗಳು ಎಲ್ಲರಿಗೂ ಸರ್ವೆ ಸಾಮಾನ್ಯ ಮನೆಯ ಯಜಮಾನ ಆತ್ಮಹತ್ಯೆ ಮಾಡಿಕೊಂಡರೇ ಇಡೀ ಕುಟುಂಬವು ಬೀದಿಗೆ ಬರುತ್ತದೆ. ಆತ್ಮಹತ್ಯೆಯಂತಹ ಕ್ರೂರ ಕೃತ್ಯಕ್ಕೆ ಬಲಿಯಾಗಬೇಡಿ. ಸರ್ಕಾರಗಳ ಎಲ್ಲ ಸೌಲಭ್ಯಗಳನ್ನು ಕ್ಷೇತ್ರದ ಎಲ್ಲ ರೈತರಿಗೆ ತಲುಪಿಸುವುದರೊಂದಿಗೆ ಅವರ ಸಮಸ್ಯೆಗಳಿಗೆ ಸದಾ ನಾವು ಸ್ಪಂದಿಸುತ್ತಿದ್ದೇವೆ ಎಂದು ಭರವಸೆ ನೀಡಿದರು.ಇದೇ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡ ಅರಬಾವಿ ಕ್ಷೇತ್ರದ ನಲ್ಲಾನಟ್ಟಿ ಗ್ರಾಮದ ರಾಜೇಂದ್ರ ಕುಳ್ಳೂರ, ಕುಲಗೋಡ ಗ್ರಾಮದ ಸುಭಾಶ ದಾಸರೆಡ್ಡಿ, ದುರದುಂಡಿಯ ಸಿದ್ದಪ್ಪ ಅಂತರಗಟ್ಟಿ ಕುಟುಂಬಗಳಿಗೆ ತಲಾ ₹5 ಲಕ್ಷದಂತೆ ₹15 ಲಕ್ಷ ಮಂಜೂರಾತಿ ಆದೇಶ ಪತ್ರವನ್ನು ಶಾಸಕರು ವಿತರಿಸಿದರು.ಈ ಸಂದರ್ಭದಲ್ಲಿ ಟಿಎಪಿಸಿಎಮ್ಎಸ್ ಅಧ್ಯಕ್ಷ ಅಶೋಕ ನಾಯಿಕ ಮುಖಂಡರುಗಳಾದ ಮುತ್ತೇಪ್ಪ ಕುಳ್ಳೂರ, ಸಿದ್ರಾಮ ಕುಳ್ಳೂರ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಎಂ.ನದಾಫ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.