ಸಾರಾಂಶ
ತಾಲೂಕಿನ ಸಾರ್ಥವಳ್ಳಿ ಗ್ರಾಮದ ರೈತ ಮುರುಳಿ ಎಂಬುವವರ ಮಲೆನಾಡ ಗಿಡ್ಡ ಹಸುವು ಒಂದು ವಾರದಿಂದ ಹೊಟ್ಟೆ ಉಬ್ಬರಿಸಿಕೊಂಡು ಸಗಣಿ ಇಡಲಾರದೇ ಪರಿತಪಿಸುತ್ತಿದ್ದಾಗ ನೊಣವಿನಕೆರೆ ಹಿರಿಯ ಪಶುವೈದ್ಯಾಧಿಕಾರಿ ಡಾ. ಎಸ್.ಪಿ. ಮಂಜುನಾಥ್ ಸ್ಥಳಕ್ಕೆ ಆಗಮಿಸಿ ಶಸ್ತ್ರಚಿಕಿತ್ಸೆ ನಡೆಸಿ ಹಸುವನ್ನು ಪ್ರಾಣಾಪಾಯದಿಂದ ಕಾಪಾಡಿದ್ದಾರೆ.
ಕನ್ನಡಪ್ರಭ ವಾರ್ತೆ ತಿಪಟೂರು
ತಾಲೂಕಿನ ಸಾರ್ಥವಳ್ಳಿ ಗ್ರಾಮದ ರೈತ ಮುರುಳಿ ಎಂಬುವವರ ಮಲೆನಾಡ ಗಿಡ್ಡ ಹಸುವು ಒಂದು ವಾರದಿಂದ ಹೊಟ್ಟೆ ಉಬ್ಬರಿಸಿಕೊಂಡು ಸಗಣಿ ಇಡಲಾರದೇ ಪರಿತಪಿಸುತ್ತಿದ್ದಾಗ ನೊಣವಿನಕೆರೆ ಹಿರಿಯ ಪಶುವೈದ್ಯಾಧಿಕಾರಿ ಡಾ. ಎಸ್.ಪಿ. ಮಂಜುನಾಥ್ ಸ್ಥಳಕ್ಕೆ ಆಗಮಿಸಿ ಶಸ್ತ್ರಚಿಕಿತ್ಸೆ ನಡೆಸಿ ಹಸುವನ್ನು ಪ್ರಾಣಾಪಾಯದಿಂದ ಕಾಪಾಡಿದ್ದಾರೆ. ಹಸುವಿನ ಎಡ ಭಾಗದ ಉದರ ತೆರೆಯುವ ಶಸ್ತ್ರಚಿಕಿತ್ಸೆ ನಡೆಸಿ ಹಸುವಿನ ಹೊಟ್ಟೆಯ ನಾಲ್ಕನೇ ಭಾಗವಾದ ಅಬೋಮೇಸಮ್ನಿಂದ ಎರಡು ಉಂಡೆಯಂತಿದ್ದ ಫೈಟೋಬೆಜಾರ್ (ಮೇವಿನ ಎಳೆಗಳ ಉಂಡೆ)ಗಳನ್ನು ತೆಗೆಯಲಾಯಿತು. ರೋಗ ಪತ್ತೆ ಹಚ್ಚುವುದು ಮತ್ತು ಅದನ್ನು ಸರಿಪಡಿಸುವುದೆರಡೂ ಅತ್ಯಂತ ಸವಾಲಿನದ್ದು, ರೈತರ ಮನೆ ಬಾಗಿಲಲ್ಲೇ ಎಕ್ಸರೇ ಸ್ಕ್ಯಾನಿಂಗ್ಗಳಿಲ್ಲದ ಸ್ಥಿತಿಯಲ್ಲೂ ರೋಗ ಪತ್ತೆಹಚ್ಚಿ ಸುಮಾರು ನಾಲ್ಕು ಗಂಟೆಗಳ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಹಸುವಿನ ಪ್ರಾಣ ಕಾಪಾಡಲಾಯಿತು. ಈ ವೇಳೆ ಡಾ. ಮಂಜುನಾಥ್ ಮಾತನಾಡಿ ಹಸುಗಳು ಕೆಲವು ರೀತಿಯ ಮೇವನ್ನು ತಿಂದ ನಂತರ ಅದು ಹಸುವಿನ ಹೊಟ್ಟೆಯಲ್ಲಿ ರೋಮದಂತಿರುವ ಮೇವಿನ ಕಡ್ಡಿಗಳ ಉಂಡೆಯಾಗಿ ಮಾರ್ಪಾಟಾಗಿ ಕರುಳಿನಲ್ಲಿ ಸಿಕ್ಕಿಕೊಳ್ಳುತ್ತದೆ. ಈ ಹಸುವಿನಲ್ಲಿ ಅಡಿಕೆ ಪಟ್ಟೆಯಿಂದ ಈ ರೀತಿ ಆಗಿರಬಹುದು. ಜಾನುವಾರುಗಳ ಮಾಲೀಕರು ತಮ್ಮ ಹಸುಗಳಿಗೆ ಸದಾ ಕಾಲ ನೀರಿನ ಸೌಲಭ್ಯ ಒದಗಿಸುವುದರಿಂದ ಈ ರೀತಿಯ ಸ್ಥಿತಿ ಬರುವುದನ್ನು ತಡೆಯಬಹುದು. ಇಂತಹ ಕ್ಲಿಷ್ಟಕರ ಚಿಕಿತ್ಸೆಗಳನ್ನು ಮನೆ ಬಾಗಿಲಲ್ಲೇ ಮಾಡಬಹುದಾಗಿದ್ದು, ರೈತರು ಮನಸ್ಸು ಮಾಡಬೇಕು ಎಂದರು. -----------------ಫೋಟೋ 17-ಟಿಪಿಟಿ1ರಲ್ಲಿ ಕಳುಹಿಸಲಾಗಿದೆ. ಶೀರ್ಷಿಕೆ : ಶಸ್ತ್ರಚಿಕಿತ್ಸೆಗೊಳಗಾದ ಹಸುವಿನೊಂದಿಗೆ ಡಾ. ಮಂಜುನಾಥ್