ಚನ್ನಗಿರಿ: ಪಟ್ಟಣದ ತಾಲೂಕು ಕಚೇರಿ ಮುಂಭಾಗದಲ್ಲಿ ತಾಲೂಕು ದಸ್ತಾವೇಜು ಬರಹಗಾರರ ಸಂಘ ವತಿಯಿಂದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶಾಂತಿಯುತ ಪ್ರತಿಭಟನೆ ಪ್ರಾರಂಭಿಸಲಾಗಿದೆ.
ತಾಲೂಕು ಸಂಘದ ಅಧ್ಯಕ್ಷ ಯು.ಬಸವರಾಜ್ ಮಾತನಾಡಿ, ರಾಜ್ಯ ಕಂದಾಯ ಮಂತ್ರಿ ಕೃಷ್ಣಬೈರೆಗೌಡ ಅವರು ನೋಂದಣಿ ಪದ್ಧತಿಯಲ್ಲಿ ಕಾವೇರಿ 0.2 ತಂತ್ರಾಂಶ ಬದಲಿಗೆ ಪೇಪರ್ ಲೆಸ್ ನೋಂದಣಿ ಕಾರ್ಯಕ್ರಮಕ್ಕೆ ಚಾಮರಾಜನಗರ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಿದ್ದಾರೆ. ಮಂತ್ರಿಗಳು ಪೇಪರ್ ಲೆಸ್ ಸೇವೆ ಉದ್ದೇಶ ವ್ಯವಸ್ಥೆ ಬಗ್ಗೆ ಮೊದಲು ರಾಜ್ಯದ ಯಾವುದೇ ಪತ್ರ ಬರಹಗಾರರಿಗೆ ಮತ್ತು ಸಾರ್ವಜನಿಕರ ಗಮನಕ್ಕೆ ತಾರದೇ ಜಾರಿಗೊಳಿಸಿದ್ದಾರೆ. ಅವೈಜ್ಞಾನಿಕವಾದ ಈ ಪದ್ಧತಿ ಸರಿಯಲ್ಲ ಎಂದರು.ಚಾಮರಾಜನಗರ ಜಿಲ್ಲೆಯಲ್ಲಿ ಮಾತ್ರ ಪೇಪರ್ ಲೆಸ್ ನೋಂದಣಿ ಮಾಡುವುದು ಜಾರಿಯಲ್ಲಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಸಬ್ ರಿಜಿಸ್ಟರ್ ಕಚೇರಿಗಳಲ್ಲಿ ಪೇಪರ್ ಲೆಸ್ ತಂತ್ರಾಂಶ ಅಳವಡಿಸಲಿದ್ದಾರೆ. ಈ ಹಿನ್ನೆಲೆ ತಾಲೂಕಿನಲ್ಲಿರುವ ಪತ್ರಬರಹಗಾರರು ಸೇರಿ ರಾಜ್ಯ ಪತ್ರ ಬರಹಗಾರರ ಸಂಘದ ಒಪ್ಪಿಗೆಯ ಮೇರೆಗೆ ಮೇ 19-20ರಂದು ಎರಡು ದಿನಗಳ ಕಾಲ ಯಾವುದೇ ಪತ್ರವನ್ನು ಬರೆಯದೇ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶಕ್ಕಾಗಿ ನಾವು ಪತ್ರ ಬರೆಯುವುದನ್ನು ನಿಲ್ಲಿಸಿ ಶಾಂತಿಯುತ ಮುಷ್ಕರ ನಡೆಸುತ್ತಿದ್ದೇವೆ ಎಂದರು.
ಪೇಪರ್ ಲೆಸ್ ನೋಂದಣಿ ಎಂಬ ಅವೈಜ್ಞಾನಿಕ ಪದ್ಧತಿಯಲ್ಲಿ ಬಹಳಷ್ಟು ನ್ಯೂನತೆಗಳು ಕಂದಾಯ ಮಂತ್ರಿಗಳಿಗೆ ತಿಳಿದಿದೆ. ಆದರೂ, ಅನಾದಿ ಕಾಲದಿಂದಲೂ ಪತ್ರ ಬರೆಯುವ ವೃತ್ತಿ ಮಾಡಿಕೊಂಡು ಬಂದಿರುವ ದಸ್ತಾವೇಜು ಬರಹಗಾರರ ಸಹಿಯನ್ನೇ ದಾಖಲೆಯಲ್ಲಿ ಬೇಡ ಎನ್ನುವ ನಿರ್ಧಾರಕ್ಕೆ ಸರ್ಕಾರ ಬಂದಿರುವುದು ಸರಿಯಾದ ಕ್ರಮವಲ್ಲ ಎಂದರು.ಹಿರಿಯ ಪತ್ರ ಬರಹಗಾರ ಕೆ.ಆರ್. ಮಂಜುನಾಥ್ ಮಾತನಾಡಿ, ರಾಜ್ಯ ಸರ್ಕಾರ ಪೇಪರ್ ಲೆಸ್ ನೋಂದಣಿ ಕೂಡಲೇ ಕೈ ಬಿಡಬೇಕಾಗಿದೆ. ಪತ್ರ ಬರಹಗಾರರಿಗೆ ಪ್ರತ್ಯೇಕ ಲಾಗಿನ್ ಕೊಡಬೇಕಾಗಿದೆ. ನೋಂದಾಯಿತ ಎಲ್ಲ ದಸ್ತಾವೇಜುದಾರರಿಗೆ ಬಿಕ್ಕಲಂ (ಸಹಿ) ಕಡ್ಡಾಯಗೊಳಿಸಬೇಕು. ಈ ಬೇಡಿಕೆಗಳನ್ನು ಈಡೇರಿಸದೇ ಇದ್ದರೆ ರಾಜ್ಯ ಸರ್ಕಾರದ ವಿರುದ್ಧ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಸಂದರ್ಭ ಪತ್ರ ಬರಹಗಾರರಾದ ಸಿ.ಹಾಲಪ್ಪ, ಎನ್.ಎಚ್. ಶಿವಕುಮಾರ್, ಬಾಲಸುಬ್ರಹ್ಮಣ್ಯ, ಶಿವಮೂರ್ತಿ, ಪಿ.ಆರ್. ಮಲ್ಲಿಕಾರ್ಜುನ್, ಬಿ.ಬಿ.ಮಂಜುನಾಥ್, ಶಂಕರ್ ರಾವ್, ಇಸ್ಮಾಯಿಲ್, ಕೆ.ಪಿ.ಎಂ. ಸ್ವಾಮಿ, ತಿಮ್ಮಯ್ಯ, ಕೆ.ಜಯಪ್ಪ ಮೊದಲಾದವರು ಹಾಜರಿದ್ದರು.
- - -
-19ಕೆಸಿಎನ್ಜಿ1:ಚನ್ನಗಿರಿ ಪಟ್ಟಣದ ತಾಲೂಕು ಕಚೇರಿ ಮುಂಭಾಗದಲ್ಲಿ ತಾಲೂಕು ದಸ್ತಾವೇಜು ಬರಹಗಾರರ ಸಂಘದಿಂದ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಶಾಂತಿಯುತ ಮುಷ್ಕರ ಆರಂಭಿಸಲಾಯಿತು.