ರಾಮನಗರ: ರಾಜ್ಯದ ಕೆಲವಷ್ಟೇ ಪ್ರದೇಶಗಳಲ್ಲಿ ಸೀಮಿತವಾಗಿದ್ದ ಡೊಳ್ಳು ಕಲೆ ಇಂದು ರಾಜ್ಯ ಸೇರಿದಂತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆಯ ಕಲೆಯಾಗಿದೆ. ಇದಕ್ಕೆ ಖ್ಯಾತಿ ತಂದುಕೊಟ್ಟ ಶ್ರೇಯ ಕಲಾವಿದ ಶ್ರೀನಿವಾಸ್ ಅವರಿಗೆ ಸಲ್ಲುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಸತೀಶ್ ಬಣ್ಣಿಸಿದರು.

ನಗರದ ಜಾನಪದ ಲೋಕದಲ್ಲಿ ಡಾ. ಎಚ್.ಎಲ್.ನಾಗೇಗೌಡರ ಸ್ಮರಣಾರ್ಥ ಪ್ರತಿ ತಿಂಗಳು ನಡೆಯುವ ತಿಂಗಳ ಅತಿಥಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಡೊಳ್ಳು ಕಲಾವಿದರಾದ ಶ್ರೀನಿವಾಸ್ ಅವರ ನಿಸ್ವಾರ್ಥ ಕೊಡುಗೆಯಿಂದ ಇಂದು ಶುಭ ಸಮಾರಂಭಗಳಿಗೆ ಡೊಳ್ಳು ಕಲೆ ವಾಣಿಜ್ಯ ಕಲೆಯಾಗಿ ಬೆಳೆದಿದೆ. ಇವರ ಮಗ ಚಂದ್ರು ಐಪಿಎಸ್, ಐಎಎಸ್ ಅಧಿಕಾರಿಗಳಿಗೆ ತರಬೇತಿ ನೀಡುವ ಅವಕಾಶ ಪಡೆದಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ನಡೆಯುವ ಅನೇಕ ಕಾರ್ಯಕ್ರಮಗಳಲ್ಲಿ ಈ ರೀತಿಯ ಜನಪದ ಕಲಾವಿದರಿಗೆ ಗೌರವವನ್ನು ನೀಡುತ್ತಾ ಬಂದಿದೆ ಎಂದು ಹೇಳಿದರು.

ಕರ್ನಾಟಕ ಜಾನಪದ ಪರಿಷತ್‌ ತಾಲೂಕು ಘಟಕದ ಅಧ್ಯಕ್ಷ ಡಾ.ವಿಜಯ ರಾಂಪುರ ಮಾತನಾಡಿ, ಕರ್ನಾಟಕದ ಗಂಡು ಕಲೆ ಜನಪ್ರಿಯ ಕಲೆ ಶಕ್ತಿಯುತವಾದ ಕಲೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದೆ. ಯಾವುದೇ ಕಲೆ ಹುಟ್ಟಬೇಕಾದರೆ ಆರಾಧನೆ ಅಥವಾ ಮನರಂಜನಾ ಕಲೆಯಿಂದ ಹುಟ್ಟಿಕೊಳ್ಳುತ್ತದೆ. ಆದರೆ, ಡೊಳ್ಳು ಕುಣಿತ ಆರಾಧನೆ ಕಲೆ. ಧಾರ್ಮಿಕ ಮತ್ತು ಸಾಂಸ್ಕೃತಿಕ ಜೊತೆಗೆ ಪೌರಾಣಿಕ ಹಿನ್ನೆಲೆಯಲ್ಲಿ ಇದೆ ಎಂದು ತಿಳಿಸಿದರು.

ಅಂತಾರಾಷ್ಟ್ರೀಯ ಮಟ್ಟದ ಗಾಯಕ ಶಿವಕುಮಾರ್ ಬ್ಯಾಡ್ರಳ್ಳಿ ಮಾತನಾಡಿ, ಕಲೆಯನ್ನು ಪ್ರೇಕ್ಷಕರು ಅಂತರಂಗದಿಂದ ಕಾಪಾಡಬೇಕು, ಜಿಲ್ಲೆಯಲ್ಲಿ ಡೊಳ್ಳು ಕಲೆಗೆ ಶ್ರೀನಿವಾಸ್ ಬುನಾದಿ ಹಾಕಿಕೊಟ್ಟರು.ಇವರ ಮೂಲ ಸೌಕರ್ಯದ ಕೊರತೆಯ ನಡುವೆಯೂ ಜಾನಪದ ಲೋಕದಲ್ಲಿ ಈ ಕಲೆಯನ್ನು ಉಳಿಸಿ ಬೆಳೆಸಿ ಸಮೃದ್ಧಿಗೊಳಿಸಿದ್ದಾರೆ. ಗಂಡು ಕಲೆ ಇಂದು ಕೇವಲ ಗಂಡು ಕಲೆಯಾಗಿ ಇರದೆ ಹೆಣ್ಣು ಮಕ್ಕಳು ಕಲಿಯುತ್ತಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡೊಳ್ಳು ಕುಣಿತ ಕಲಾವಿದರಾದ ಶ್ರೀನಿವಾಸ್ ಅವರನ್ನು ಗೌರವಿಸಲಾಯಿತು. ನಂತರ ನಡೆದ ಸಂವಾದದಲ್ಲಿ ಕಲೆ ಮತ್ತು ತಾವು ಕಲಿತ ಆಸಕ್ತಿ ಬಗ್ಗೆ ವಿವರಿಸಿದರು ಹಾಗೂ ಡೊಳ್ಳು ತಂಡದವರು ಕಲಾಪ್ರದರ್ಶನ ನಡೆಸಿಕೊಟ್ಟರು.


ಜಾನಪದ ಲೋಕದ ಕ್ಯೂರೇಟರ್ ಡಾ. ರವಿ ಯು.ಎಂ, ಸಂಚಾಲಕ ಡಾ. ಸಂದೀಪ್ ಕೆ.ಎಸ್, ಡಿಪ್ಲೊಮಾ ವಿದ್ಯಾರ್ಥಿಗಳು, ಲೋಕದ ಸಿಬ್ಬಂದಿ, ಸಾರ್ವಜನಿಕರು ಉಪಸ್ಥಿತರಿದ್ದರು.

12ಕೆಆರ್ ಎಂಎನ್ 2.ಜೆಪಿಜಿ

ರಾಮನಗರದ ಜಾನಪದ ಲೋಕದಲ್ಲಿ ಡಾ. ಎಚ್.ಎಲ್.ನಾಗೇಗೌಡರ ಸ್ಮರಣಾರ್ಥ ಪ್ರತಿ ತಿಂಗಳು ನಡೆಯುವ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಕಲಾವಿದ ಶ್ರೀನಿವಾಸ್ ಅವರನ್ನು ಸನ್ಮಾನಿಸಿದರು.