ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಸಮಾಜದಲ್ಲಿ ಪ್ರತಿಯೊಬ್ಬರಿಗೂ ಮುಕ್ತ ಹಾಗೂ ಸ್ವತಂತ್ರವಾಗಿ ಬದುಕುವ ಹಕ್ಕಿದೆ. ಎಚ್ಐವಿ ಬಾದಿತ ವ್ಯಕ್ತಿಯನ್ನು ಒಡನಾಟದಿಂದ ದೂರವಿಡದೆ ಎಲ್ಲರಂತೆ ಭಾವಿಸುವುದು ಉತ್ತಮ ನಾಗರೀಕನ ಕರ್ತವ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ವಿ. ಹನುಮಂತಪ್ಪ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಇತರೆ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಭಾರತದ ಸಂವಿಧಾನವು ದೇಶದ ಪ್ರತಿ ಪ್ರಜೆಗಳಿಗೆ ವ್ಯಕ್ತಿ ಗೌರವ ಹಾಗೂ ಏಕತೆ ಮನೋಭಾವದಿಂದ ಸ್ವತಂತ್ರವಾಗಿ ಜೀವಿಸುವ ಹಕ್ಕನ್ನು ನೀಡಿದೆ. ಯಾವುದೇ ಖಾಯಿಲೆಗಳಿಗೆ ಒಳಗಾಗಿ ಸಮುದಾಯದೊಂದಿಗೆ ಜೀವಿಸುತ್ತಿರುವ ವ್ಯಕ್ತಿಯನ್ನು ಅಥವಾ ಅಂಗವೈಕಲ್ಯದಿಂದ ಬಳಲುತ್ತಿರುವ ವಿಶೇಷ ಚೇತನರನ್ನು ಅಗೌರವಿಸದೆ ಮತ್ತು ಅಪಮಾನ ಮಾಡದಂತೆ ಸಮಾನತೆಯಿಂದ ಬದುಕುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಎಚ್ಐವಿ ಹಾಗೂ ಇತರೆ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ಸಮುದಾಯದವರೊಂದಿಗೆ ತಮ್ಮ ಬದುಕನ್ನು ನಿರ್ವಹಿಸುತ್ತಿರುವ ವ್ಯಕ್ತಿಯು ಸಮಾಜದಲ್ಲಿ ಗೌರವಯುತವಾಗಿ ಜೀವನವನ್ನು ನಡೆಸಲು ಅನುಕೂಲವಾಗುವಂತೆ ಹಾಗೂ ಅವರ ರಕ್ಷಣೆಗಾಗಿ ಅನೇಕ ಕಾಯ್ದೆ ಕಾನೂನುಗಳನ್ನು ಜಾರಿ ಮಾಡಿದೆ. ಎಚ್ಐವಿ ಬಾದಿತ ವ್ಯಕ್ತಿಗಳಿಗೆ ಕರ್ತವ್ಯ ನಿರ್ವಹಿಸುವ ಸ್ಥಳಗಳಲ್ಲಿ ನಿಂದಿಸುವ ಹಾಗೂ ಅಪಮಾನ ಮಾಡುವವರ ವಿರುದ್ಧ ಜುಲ್ಮಾನೆಯೊಂದಿಗೆ ಜೈಲುವಾಸ ಶಿಕ್ಷೆಯನ್ನು ನೀಡಲಾಗುವುದು ಎಂದು ಹೇಳಿದರು.ಸಮಾಜದ ದುರ್ಬಲರು, ದಮನಿತರು ಹಾಗೂ ಶೋಷಿತ ವರ್ಗದವರ ರಕ್ಷಣೆಯೇ ಕಾನೂನು ರೂಪಿಸುವ ಉದ್ದೇಶವಾಗಿದೆ. ಎಚ್ಐವಿ ಬಾದಿತರನ್ನು ಸಮಾನತೆಯಿಂದ ಅವರ ಹಕ್ಕುಗಳನ್ನು ರಕ್ಷಣೆ ಮಾಡಿ ಬಾಧಿತರನ್ನು ಇನ್ನಷ್ಟು ನೋಯಿಸದೆ ಮನೋಸ್ಥೈರ್ಯ ತುಂಬಿ ನಿರ್ಭಯದಿಂದ ಜೀವಿಸುವಂತೆ ಪ್ರೇರೇಪಿಸಬೇಕು ಎಂದ ಅವರು, ಎಚ್ಐವಿ ಸೋಂಕಿತ ವ್ಯಕ್ತಿಗಳು ಯಾವುದೇ ಭಯವಿಲ್ಲದೇ ವೈದ್ಯರು ನೀಡುವ ಸಲಹೆ ಸೂಚನೆಗಳನ್ನು ಚಾಚು ತಪ್ಪದೆ ಪಾಲಿಸಿ ಸುರಕ್ಷಿತವಾಗಿರಿ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕ ಜಿಲ್ಲಾ ಕಾರ್ಯಕ್ರಮಾಧಿಕಾರಿ ಡಾ. ಹರೀಶ್ ಬಾಬು ಮಾತನಾಡಿ, ಎಚ್ಐವಿ ಸೋಂಕಿಗೆ ಒಳಗಾಗಿರುವ ವ್ಯಕ್ತಿಯನ್ನು ಪರೀಕ್ಷಾ ಕೇಂದ್ರಗಳಲ್ಲಿ ಸ್ನೇಹಪರ ಆಪ್ತ ಸಮಾಲೋಚನೆ ನಡೆಸಿ ಉಚಿತ ಪರೀಕ್ಷೆ ನಡೆಸಿ ಸ್ಥಳದಲ್ಲೆ ಫಲಿತಾಂಶ ನೀಡಿ ಎಚ್ಐವಿ ಖಚಿತಗೊಂಡಲ್ಲಿ ಮಾಹಿತಿಯನ್ನು ಗೌಪ್ಯವಾಗಿ ಇರಿಸಿ ಚಿಕಿತ್ಸೆ ನೀಡಲಾಗುವುದು ಎಂದರು.ಬಹು ಸಂಗಾತಿಯೊಂದಿಗೆ ಅಸುರಕ್ಷಿತ ಲೈಂಗಿಕ ಸಂಪರ್ಕ, ಎಚ್ಐವಿ ಸೋಕಿತರ ರಕ್ತವನ್ನು ಪರೀಕ್ಷೆ ಮಾಡದೆ ಪಡೆಯುವುದು, ಸಂಸ್ಕರಣೆ ಮಾಡದ ಸೂಜಿ, ಸಿರಿಂಜ್ ಬಳಸುವುದರಿಂದ ಹಾಗೂ ಹೆಚ್ಐವಿ ಸೋಂಕಿತ ತಾಯಿಯಿಂದ ಮಗುವಿಗೆ ಗರ್ಭಾವಸ್ಥೆಯಲ್ಲಿ, ಹೆರಿಗೆ ಸಮಯದಲ್ಲಿ ಅಥವಾ ಎದೆ ಹಾಲೂಣಿಸುವ ಮೂಲಕ ಹೆಚ್ಐವಿ ಹರಡುತ್ತದೆ ಎಂದ ಅವರು, ಸಾಂಕ್ರಮಿಕ ರೋಗಗಳಿಂದ ದೂರವಿರಲು ವೈದ್ಯರ ಸಲಹೆಗಳನ್ನು ಪಡೆದು ಮುನ್ನೆಚ್ಚರಿಕೆ ಕ್ರಮವನ್ನು ಅನುಸರಿಸಿ ಎಂದು ಸಲಹೆ ನೀಡಿದರು. ಜಿಲ್ಲಾ ಸರ್ಜನ್ ಡಾ. ಮೋಹನ್ ಕುಮಾರ್ ಮಾತನಾಡಿ, ಎಚ್ಐವಿ ಸೋಂಕು ಇರುವ ಮಹಿಳೆ ಗರ್ಭ ಧರಿಸಿದರೆ ಮಗುವಿಗೆ ಸೋಂಕು ತಗಲುವ ಸಾಧ್ಯತೆ ಇದೆ. ಪಿಪಿಟಿಸಿಟಿ ಸೇವೆಯಿಂದ ತಂದೆ, ತಾಯಿಯ ಮೂಲಕ ಮಗುವಿಗೆ ಸೋಂಕು ಹರಡುವುದನ್ನು ತಡೆಗಟ್ಟಬಹುದಾಗಿದೆ. ಎಲ್ಲಾ ಗರ್ಭಿಣಿಯರು ತಪ್ಪದೇ ಎಚ್ಐವಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕಡ್ಡಾಯವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಆಗಬೇಕು. ವೈದ್ಯರ ಸಲಹೆಯಂತೆ ಸೂಕ್ತ ಔಷಧೋಪಚಾರ ಪಡೆದು ಹುಟ್ಟುವ ಮಗುವನ್ನು ಎಚ್ಐವಿ ಯಿಂದ ರಕ್ಷಿಸಿ ಎಂದು ಮನವಿ ಮಾಡಿದರು.ಸಾಮಾಜಿಕ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಅಧ್ಯಕ್ಷ ರಾಜು ನರಸಯ್ಯ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಡಾ. ಗೀತಾ, ಕುಟುಂಬ ಕಲ್ಯಾಣಾಧಿಕಾರಿ ಡಾ. ಶಶಿಕಲಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಲಲಿತಾ, ಜಲಜಾಕ್ಷಿ ಉಪಸ್ಥಿತರಿದ್ದರು.