ಸಾರಾಂಶ
ಯಾದಗಿರಿ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಮಹಿಳೆಯರ ಮುಟ್ಟಿನ ನಿರ್ವಹಣೆ ವಿಷಯದ ಕುರಿತು ತರಬೇತಿ ಕಾರ್ಯಾಗಾರ ನಡೆಯಿತು
ಕನ್ನಡಪ್ರಭ ವಾರ್ತೆ ಯಾದಗಿರಿ
ಮುಟ್ಟು ಮಹಿಳೆಯರ ನೈಸರ್ಗಿಕ ಪ್ರಕ್ರಿಯೆ. ಇದು ನಮಗೆ ದೇವರಕೊಟ್ಟ ವರ, ಅದು ಶಾಪವಲ್ಲ. ಮುಟ್ಟಿನ ವಿಷಯ ಹಾಗೂ ನಿರ್ವಹಣೆಯಲ್ಲಿ ಸಂಕುಚಿತ ಭಾವನೆ ಬೇಡ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗರೀಮಾ ಪನ್ವಾರ್ ಹೇಳಿದರು.ಇಲ್ಲಿನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾ ಪಂಚಾಯ್ತಿ ಮತ್ತು ಸಹಾಸ್ ಸಂಸ್ಥೆ ಹಾಗೂ ರೈನ್ ಮ್ಯಾಟರ್ ಫೌಂಡೇಷನ್ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯಲ್ಲಿ 56 ಗ್ರಾಪಂಗಳಲ್ಲಿ ಘನ ತ್ಯಾಜ್ಯ ನಿರ್ವಹಣೆ ಚಟುವಟಿಕೆಗೆ ಬೆಂಬಲಿತವಾಗಿರುವ ಗ್ರಾಪಂ ಸ್ವಚ್ಛ ವಾಹಿನಿ ಸಿಬ್ಬಂದಿ, ಎಂಬಿಕೆ, ಎಲ್ಸಿಆರ್ಪಿ ಸಂಬಂಧಿಸಿದಂತೆ ನಡೆದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ನಮ್ಮಲ್ಲಿ ಇನ್ನು ಕೂಡ ಮುಟ್ಟಿನ ನಿರ್ವಹಣೆ ವಿಷಯದಲ್ಲಿ ಸಂಕುಚಿತ ಭಾವನೆ, ಮೂಢನಂಬಿಕೆ ಆಚರಣೆಗಳಿದ್ದು, ಈ ಮನೋಭಾವದಿಂದ ಮಹಿಳೆಯರು ಹೊರಬರಬೇಕು ಎಂದು ತಿಳಿಸಿದರು. ಸ್ವಚ್ಛ ಭಾರತ ಮಿಷನ್ ಮತ್ತು ಎನ್ಆರ್ಎಲ್ಎಂ ಯೋಜನೆ ನೋಡಲ್ ಅಧಿಕಾರಿ ಬಿ.ಎಸ್ ರಾಠೋಡ, ಸುಸ್ಥಿರ-ಶುಚಿತ್ವ ನಿರ್ವಹಣೆ ಕುರಿತು ಮಾಹಿತಿ ಹಂಚಿಕೊಂಡು ಜಾಗೃತಿ ಮೂಡಿಸಲು ತಿಳಿಸಿದರು.ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ರಿಜ್ವನ್ ಅಫ್ರೀನ್ ಮಾತನಾಡಿದರು. ಮನೋರೋಗ ತಜ್ಞರಾದ ಶೀಬಾ ರಾಣಿ ಅವರು ಮಾನಸಿಕತೆ ಕುರಿತು ಮಾಹಿತಿ ನೀಡಿದರು. ನಿವೃತ್ತ ಕೆನರಾ ಬ್ಯಾಂಕಿನ ವ್ಯವಸ್ಥಾಪಕ ರತಿಕಾಂತ ಅವರು, ಸ್ವಾಲಂಬನೆ ಆರ್ಥಿಕ ಬಲವರ್ಧನೆಗೆ ಇರುವ ಬ್ಯಾಂಕಿನ ಸೌಲಭ್ಯ ಕುರಿತು ಮಾಹಿತಿ ನೀಡಿದರು.
ಸ್ವಚ್ಛ ಭಾರತ ಮಿಷನ್ ಐಇಸಿ ಸಮಾಲೋಚಕ ಶಿವಕುಮಾರ ಸ್ವಾಗತಿಸಿದರು. ಯೋಜನೆ ವ್ಯವಸ್ಥಾಪಕ ಕಾಶಿನಾಥ, ಗಿರಿಶ್, ನಾರಾಯಣ, ಸಹಾಸ್ ಸಂಸ್ಥೆ ವಿನೋದ, ರವಿ, ಬಾಲು, ಆನಂದ ಸೇರಿ ಇತರರಿದ್ದರು.