ಪಾಶ್ಚಾತ್ಯ ಸಂಸ್ಕೃತಿ ಮನೆಯೊಳಗೆ ನುಸುಳಲು ಬಿಡಬೇಡಿ

| Published : Jun 20 2025, 12:34 AM IST

ಸಾರಾಂಶ

ಕಳೆದ ಮೂರ್ನಾಲ್ಕು ವರ್ಷಗಳಿಂದ ಜನ ಸೇವೆ ಮಾಡುತ್ತಿರುವ ಇನ್ನರ್ ವ್ಹೀಲ್ ಕ್ಲಬ್ ಆಫ್ ಸಂಕಲ್ಪ ತನ್ನ ಸಂಸ್ಥಾಪನಾ ದಿನಾಚರಣೆ ಮತ್ತು ಸಮಾರೋಪ ಸಮಾರಂಭದಲ್ಲೂ ಹಲವಾರು ಸಾಮಾಜಿಕ ಸೇವೆಗಳನ್ನು ಮಾಡುವ ಮೂಲಕ ಸಾರ್ಥಕತೆ ಮೆರೆದಿದೆ ಎಂದು ಗ್ಲೋಬಲ್ ಎಂಬಸಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಗಂಗಾಧರ ದೇವರಮನೆ ಹೇಳಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಕಳೆದ ಮೂರ್ನಾಲ್ಕು ವರ್ಷಗಳಿಂದ ಜನ ಸೇವೆ ಮಾಡುತ್ತಿರುವ ಇನ್ನರ್ ವ್ಹೀಲ್ ಕ್ಲಬ್ ಆಫ್ ಸಂಕಲ್ಪ ತನ್ನ ಸಂಸ್ಥಾಪನಾ ದಿನಾಚರಣೆ ಮತ್ತು ಸಮಾರೋಪ ಸಮಾರಂಭದಲ್ಲೂ ಹಲವಾರು ಸಾಮಾಜಿಕ ಸೇವೆಗಳನ್ನು ಮಾಡುವ ಮೂಲಕ ಸಾರ್ಥಕತೆ ಮೆರೆದಿದೆ ಎಂದು ಗ್ಲೋಬಲ್ ಎಂಬಸಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಗಂಗಾಧರ ದೇವರಮನೆ ಹೇಳಿದರು.ಪಟ್ಟಣದಲ್ಲಿ ಇನ್ನರ್ ವ್ಹೀಲ್ ಕ್ಲಬ್ ಆಫ್ ಸಂಕಲ್ಪದ ವತಿಯಿಂದ ಜರುಗಿದ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಈಗಿನ ಅಧ್ಯಕ್ಷೆ ನೇತ್ರಾವತಿ ಸಿದ್ದಲಿಂಗಸ್ವಾಮಿಯವರ ನೇತೃತ್ವದಲ್ಲಿ ಸುಮಾರು 50 ಕ್ಕೂ ಹೆಚ್ಚು ಕಾರ್ಯಕ್ರಮಗಳು ನಡೆದಿರುವುದು ಶ್ಲಾಘನೀಯವಾದ ಕಾರ್ಯ. ಮಹಿಳಾ ಸದಸ್ಯರು ತಮ್ಮ ಕುಟುಂಬದ ಜವಾಬ್ದಾರಿಯೊಂದಿಗೆ ಸಮಾಜದ ಕೆಲಸವನ್ನೂ ಮಾಡಿರುವುದು ಇತರರರಿಗೆ ಮಾದರಿಯಾಗಿದೆ ಎಂದರು.

ಡಾ.ಚೌದ್ರಿ ನಾಗೇಶ್ ಮಾತನಾಡಿ ಎಲ್ಲಾ ಸಂಘ ಸಂಸ್ಥೆಗಳು ಆರೋಗ್ಯ, ಶಿಕ್ಷಣಕ್ಕೆ ಒತ್ತು ನೀಡಬೇಕು. ಆರೋಗ್ಯವೆಂಬುದು ಅತ್ಯಮೂಲ್ಯವಾದ ಅಂಶವಾಗಿದೆ. ಆರೋಗ್ಯವೇ ಐಶ್ವರ್ಯವಾಗಿದೆ. ಎಲ್ಲರೂ ಮೊದಲು ಆರೋಗ್ಯಕ್ಕೆ ಗಮನ ನೀಡಬೇಕು. ದೈನಂದಿನ ಜೀವನ ನಿರ್ವಹಣೆ ಹೇಗೆ ಮಾಡಬೇಕೆಂಬ ಅರಿವನ್ನು ಎಲ್ಲರಿಗೂ ನೀಡಬೇಕಾಗಿದೆ ಎಂದರು. ಇನ್ನರ್ ವ್ಹೀಲ್ ಕ್ಲಬ್ ಆಫ್ ಸಂಕಲ್ಪದ ಅಧ್ಯಕ್ಷೆ ನೇತ್ರಾ ಸಿದ್ದಲಿಂಗಸ್ವಾಮಿ ಮಾತನಾಡಿ, ಮಹಿಳೆಯರು ಕೇವಲ ಮನೆಗೆ ಸೀಮಿತವಲ್ಲ. ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡಿರುವುದು ನನಗೆ ಸಂತಸ ತಂದಿದೆ. ಇದೇ ಸಂಧರ್ಭದಲ್ಲಿ ನಮ್ಮ ತಂದೆ ತಾಯಿ, ಅತ್ತೆ, ಮಾವನವರ ಹೆಸರಿನಲ್ಲಿ ಪ್ರಯಾಣಿಕರಿಗೆಂದು ನಿರ್ಮಾಣ ಮಾಡಿರುವ ತಂಗುದಾಣ ಮನಸ್ಸಿಗೆ ಮುದ ನೀಡಿದೆ. ಮುಂಬರುವ ದಿನಗಳಲ್ಲಿ ಸಂಸ್ಥೆಯ ಮುಂದಾಳತ್ವವನ್ನು ತೆಗೆದುಕೊಳ್ಳುವವರು ನನಗಿಂತಲೂ ಹೆಚ್ಚಿನ ಸೇವೆ ಮಾಡಲಿ ಎಂದು ಹಾರೈಸಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ರಂಗನಾಥ್ ಮಾತನಾಡಿ ಪಾಶ್ಚಾತ್ಯ ಸಂಸ್ಕೃತಿ ನಮಗರಿವಿಲ್ಲದಂತೆ ಮನೆಯೊಳಗೆ ನುಸುಳಿದೆ. ಅದನ್ನು ಮಹಿಳೆಯರು ಜಾಗೃತೆ ವಹಿಸಿದರೆ ತಡೆಗಟ್ಟಲು ಸಾಧ್ಯವಾಗಲಿದೆ. ತಪ್ಪಿದಲ್ಲಿ ಮುಂದೆ ನಮ್ಮ ಮಕ್ಕಳ ಜೀವನದಲ್ಲಿ ಭಾರಿ ಬೆಲೆ ತರಬೇಕಾದೀತು. ಆದ್ದರಿಂದ ಅದನ್ನು ಮನೆಯೊಳಗೆ ಬಿಟ್ಟುಕೊಳ್ಳಬೇಡಿ ಎಂದು ಎಚ್ಚರಿಸಿದರು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷೆ ಗೀತಾ ಸುರೇಶ್ ಮಾತನಾಡಿ ನಮ್ಮ ಸಂಸ್ಥೆ ಮುಖ್ಯವಾಗಿ ಪ್ರಯಾಣಿಕರಿಗೆ ತಂಗುದಾಣ ನಿರ್ಮಿಸುವ ಗುರಿ ಹೊಂದಿದೆ. ಈಗಾಗಲೇ ಪಟ್ಟಣದ ಬಸ್ ನಿಲ್ದಾಣದಲ್ಲಿ ಎರಡು ತಂಗುದಾಣ ನಿರ್ಮಿಸಿದೆ. ಮುಂದೆ ದಂಡಿನಶಿವರದಲ್ಲಿ ತಂಗುದಾಣ ನಿರ್ಮಿಸುವ ಗುರಿ ಇದೆ ಎಂದರು. ಸಮಾರಂಭದಲ್ಲಿ ಗೋಣಿತುಮಕೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಪೋಡಿಯಂ, ಬಿಗನೇನಹಳ್ಳಿ ಶಾಲೆಗೆ ಕಬ್ಬಿಣದ ಬೀರು ನೀಡಲಾಯಿತು. ಪಟ್ಟಣ ಪಂಚಾಯಿತಿಯಲ್ಲಿ ಪೌರಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವ 5 ಮಂದಿ ಮಹಿಳೆಯರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ರೋಟರು ಕ್ಲಬ್ ನ ಅಧ್ಯಕ್ಷ ಸಾ.ಶಿ.ದೇವರಾಜು, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸ್ವಪ್ನಾ ನಟೇಶ್, ಅಖಿಲ ಭಾರತೀಯ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ಎಂ.ಎಸ್.ಕುಮಾರಸ್ವಾಮಿ ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿ ಆನಂದಜಲ ವಾರ್ಷಿಕ ವರದಿ ವಾಚಿಸಿದರು. ಲತಾ ರಾಜಕುಮಾರ್ ಕಾರ್ಯಕ್ರಮ ನಿರೂಪಿಸಿದರು.