ವಿಜಯಪುರ: ಅತಿ ಹೆಚ್ಚು ಇಳುವರಿ ಪಡೆಯಬೇಕೆಂಬ ದುರಾಸೆಯಿಂದ ಅತಿಯಾದ ರಾಸಾಯನಿಕಗಳ ಹೆಸರಲ್ಲಿ ವಿಷವನ್ನು ಭೂತಾಯಿಯ ಒಡಲಿಗೆ ಸುರಿಯುವುದು ಬಿಟ್ಟು, ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳಿ ಎಂದು ದೇವನಹಳ್ಳಿ ಮಂಡಲ ಬಿಜೆಪಿ ಅಧ್ಯಕ್ಷರಾದ ನೀಲೇರಿ ಎಲ್.ಎನ್.ಅಂಬರೀಶ್ಗೌಡ ತಿಳಿಸಿದರು.
ಪಟ್ಟಣದ ವಿನಾಯಕ ದೇವಾಲಯದ ಆವರಣದಲ್ಲಿರುವ ಸಾವಯವ ಮಾರುಕಟ್ಟೆಯಲ್ಲಿ ಬಿಜೆಪಿ ಏರ್ಪಡಿಸಿದ್ದ, ಸಾವಯವ ತರಕಾರಿ ಬೆಳೆದು ತಂದು ಮಾರಾಟ ಮಾಡುವ ಪ್ರಗತಿಪರ ರೈತರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಆರೋಗ್ಯದಾಯಕ ಆಹಾರಕ್ಕಾಗಿ ಸಾವಯವ ಕೃಷಿಯ ಮೊರೆ ಹೋಗಬೇಕು. ರೈತರು ತೋಟ-ಕಚೇರಿಗಳಲ್ಲಿಯೇ ದೊರೆಯುವ ಕೊಟ್ಟಿಗೆ ಗೊಬ್ಬರ, ಸಾವಯವ ಗೊಬ್ಬರಗಳನ್ನೇ ಬೇಸಾಯಕ್ಕೆ ಬಳಸಬೇಕು. ಇದರಿಂದ ಆರಂಭದಲ್ಲಿ ಫಸಲು ಸ್ವಲ್ಪ ಕಡಿಮೆ ಬಂದರೂ, ಗುಣಮಟ್ಟದ ಹಾಗೂ ಆರೋಗ್ಯದಾಯಕ ಆಹಾರ ನಮ್ಮದಾಗುತ್ತದೆ ಎಂದರು.ಇದೇ ವೇಳೆ ಸಾವಯವ ಮಾರುಕಟ್ಟೆಯಲ್ಲಿ ರಾಸಾಯನಿಕ ಮುಕ್ತ ತರಕಾರಿ ಮಾರಾಟ ಮಾಡಿ ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಶ್ರಮಿಸುತ್ತಿರುವ ರೈತರನ್ನುಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಕಾರ್ಯದರ್ಶಿ ಅನಿಲ್, ಟೌನ್ ಬಿಜೆಪಿ ಅಧ್ಯಕ್ಷ ವೆಂಕಟೇಶ ಪ್ರಭು, ಕಾರ್ಯದರ್ಶಿ ಶಾಮಣ್ಣ, ತಾಲೂಕು ಮಾಜಿ ಕಾರ್ಯದರ್ಶಿ ರವಿಕುಮಾರ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಾಗವೇಣಿ, ಉಪಾಧ್ಯಕ್ಷರಾದ ರಾಮಕೃಷ್ಣ ಹೆಗಡೆ, ರಾಮು, ಭಗವಾನ್, ಮಹಿಳಾ ಮೋರ್ಚಾದ ವೀಣಾ, ಭಾಗ್ಯಮ್ಮ, ಪ್ರೇಮಾ ದೇವರಾಜ್ ಹಾಗೂ ಸಾವಯವ ಮಾರುಕಟ್ಟೆ ದಿನೇಶ್, ವೆಂಕಟರೆಡ್ಡಿ, ಅವತಿ ಅನಿಲ್ ಕುಮಾರ್ ಇತರರು ಭಾಗವಹಿಸಿದ್ದರು.(ಫೋಟೊ ಕ್ಯಾಫ್ಞನ್)
ವಿಜಯಪುರದ ಸಾವಯವ ಕೃಷಿ ಆಧಾರಿತ ತರಕಾರಿ ಮಾರುಕಟ್ಟೆಯಲ್ಲಿ ಪ್ರಗತಿಪರ ರೈತರನ್ನು ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಎಲ್.ಎನ್ ಅಂಬರೀಶ್ ಗೌಡ ಸನ್ಮಾನಿಸಿದರು.