ಮೌಢ್ಯ ಕಂದಾಚಾರಗಳಿಗೆ ಮಕ್ಕಳ ಬಾಲ್ಯ ಬಲಿ ಕೊಡದಿರಿ

| Published : Aug 30 2024, 01:02 AM IST

ಮೌಢ್ಯ ಕಂದಾಚಾರಗಳಿಗೆ ಮಕ್ಕಳ ಬಾಲ್ಯ ಬಲಿ ಕೊಡದಿರಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯ ಗೊಲ್ಲರಹಟ್ಟಿಗಳಲ್ಲಿ ಇನ್ನೂ ಮೌಢ್ಯ ಹಾಗೂ ಕಂದಾಚಾರಗಳು ಇರುವುದು ಬೇಸರದ ಸಂಗತಿಯಾಗಿದೆ. ಪೋಷಕರು ಇಂತಹ ಮೌಢ್ಯ ಹಾಗೂ ಕಂದಾಚಾರಗಳ ಪ್ರಭಾವಕ್ಕೆ ಒಳಗಾಗಿ ಬಾಲ್ಯ ವಿವಾಹ ಮಾಡಬಾರದು. ಮಕ್ಕಳ ಬಾಲ್ಯ ಬಲಿ ಕೊಡಬಾರದು ಎಂದು ಭರಮಸಾಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಧಾ ಮನವಿ ಹೇಳಿದರು.

ಕನ್ನಡಪ್ರಭ ವಾರ್ತೆ ಸಿರಿಗೆರೆ

ಜಿಲ್ಲೆಯ ಗೊಲ್ಲರಹಟ್ಟಿಗಳಲ್ಲಿ ಇನ್ನೂ ಮೌಢ್ಯ ಹಾಗೂ ಕಂದಾಚಾರಗಳು ಇರುವುದು ಬೇಸರದ ಸಂಗತಿಯಾಗಿದೆ. ಪೋಷಕರು ಇಂತಹ ಮೌಢ್ಯ ಹಾಗೂ ಕಂದಾಚಾರಗಳ ಪ್ರಭಾವಕ್ಕೆ ಒಳಗಾಗಿ ಬಾಲ್ಯ ವಿವಾಹ ಮಾಡಬಾರದು. ಮಕ್ಕಳ ಬಾಲ್ಯ ಬಲಿ ಕೊಡಬಾರದು ಎಂದು ಭರಮಸಾಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಧಾ ಮನವಿ ಹೇಳಿದರು.

ಗುರುವಾರ ಹಿರೇಗುಂಟನೂರು ಗ್ರಾಮದ ಹುಣಸೇಕಟ್ಟೆ ಗೊಲ್ಲರಹಟ್ಟಿ ಸರ್ಕಾರಿ ಶಾಲೆಯಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಸಬಲೀಕರಣ ಘಟಕ, ಭರಮಸಾಗರ ಶಿಶು ಅಭಿವೃದ್ಧಿ ಯೋಜನೆ, ಗ್ರಾಮ ಪಂಚಾಯಿತಿ ಹಾಗೂ ಭರಮಸಾಗರ ಪೊಲೀಸ್ ಠಾಣೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ಬಾಲ್ಯ ವಿವಾಹ ಮತ್ತು ಪೋಕ್ಸೋ ಕಾಯ್ದೆ ಕುರಿತ ಅರಿವು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗೊಲ್ಲರಹಟ್ಟಿಯಲ್ಲಿ ಅನಕ್ಷರತೆ ಪರಿಣಾಮ ಮಹಿಳೆಯರ ಸಾಮಾಜಿಕ ಸ್ಥಾನಮಾನ ಕಡಿಮೆಯಿದೆ. ಹೆಣ್ಣು ಮಕ್ಕಳು ಋತುಮತಿಯಾದರೆ, ಹೆರಿಗೆಯಾದರೆ ಇಂದಿಗೂ ಗ್ರಾಮದ ಹೊರಗಡೆ ಇಡುವ ಅಮಾನವೀಯ ಪದ್ದತಿ ಇರುವುದು ಖೇದಕರ. ಇದರೊಂದಿಗೆ ದಿನೇ ದಿನೇ ಹೆಚ್ಚುತ್ತಿರುವ ಬಾಲ್ಯ ವಿವಾಹ ಮತ್ತು ಬಾಲ ತಾಯಂದಿರ ಪ್ರಕರಣ ಕಳವಳ ಉಂಟು ಮಾಡುತ್ತಿವೆ ಎಂದರು. ಭರಮಸಾಗರ ಪೊಲೀಸ್ ವೃತ್ತನಿರೀಕ್ಷಕ ಮುತ್ತುರಾಜ್ ಮಾತನಾಡಿ ಆಧುನಿಕ ಸಮಾಜದಲ್ಲೂ ಗೊಲ್ಲರಹಟ್ಟಿಗಳಲ್ಲಿ ಮೌಢ್ಯಾಚರಣೆಗಳು, ಅನಿಷ್ಠ ಪದ್ದತಿಗಳು, ಗೊಡ್ಡು ಸಂಪ್ರದಾಯಗಳು ಜೀವಂತವಾಗಿವೆ. ಬಾಲ್ಯ ವಿವಾಹ ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. ಬಾಲ್ಯ ವಿವಾಹ ಮಾಡುವ ಪೋಷಕರು ಹಾಗೂ ಸಂಬಂಧಿಗಳ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು. ಅಪ್ರಾಪ್ತರ ಮೇಲಿನ ದೌರ್ಜನ್ಯ ತಡೆಯ ಪೊಕ್ಸೋ ಕಾಯ್ದೆ ಜಾರಿ ಮಾಡಲಾಗಿದೆ ಎಂದರು. ಲಿಂಗತಜ್ಞೆ ಗೀತಾ.ಡಿ ಮಾತನಾಡಿ, ಹದಿಹರೆಯದ ಮಕ್ಕಳು ಮದುವೆಯಾದರೆ ಆಗುವಂತಹ ಅನಾನುಕೂಲಗಳು ಮತ್ತು ಆರೋಗ್ಯ ಸಮಸ್ಯೆಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಿದರು. ಬಾಲ್ಯ ವಿವಾಹ ಹಾಗೂ ದೌರ್ಜನ್ಯ ತಡೆಗೆ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಹಾಗೂ ಪೋಲಿಸ್ ಸಹಾಯವಾಣಿ ಸಂಖ್ಯೆ 112 ಕರೆ ಮಾಡುವಂತೆ ಮಾಹಿತಿ ನೀಡಿದರು.ಜಿಲ್ಲಾ ಸಂಯೋಜಕ ಚೇತನ್ ರವರು ಬಾಲ್ಯ ವಿವಾಹ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಗ್ರಾ.ಪಂ.ಅಧ್ಯಕ್ಷೆ ರಾಧಮ್ಮ, ಪಿಡಿಓ ವನಜಾಕ್ಷಿ, ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ ಹೈಮಾವತಿ, ಗ್ರಾ.ಪಂ.ಸದಸ್ಯ ಸಿದ್ದೇಶ್, ಮಾಜಿ ತಾ.ಪಂ ಸದಸ್ಯೆ ಸುರೇಶ್, ವೃತ್ತ ಮೇಲ್ವಿಚಾರಕಿ ವಿನೋದ, ಅಂಗನವಾಡಿ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.