ಸಾರಾಂಶ
ಎಲ್ಲಾ ಧರ್ಮದ ಜನ ಅವರವರ ಆಚರಣೆಗಳನ್ನು ಮಾಡಿಕೊಂಡು ನೆಮ್ಮದಿಯಾಗಿದ್ದಾರೆ. ಇಂತಹ ವೈವಿಧ್ಯಮಯ ದೇಶದ ಸೇವೆ ಸಲ್ಲಿಸುವ ಅವಕಾಶ ಸಿಕ್ಕಾಗ ಯಾರು ನುಣುಚಿಕೊಳ್ಳಬೇಡಿ ಎಂದು ನಿವೃತ್ತ ಬಿಎಸ್ಎಫ್ ಯೋಧ ಸೈಯದ್ ಮುಲ್ಲಾ ಹೇಳಿದರು.
ಕನ್ನಡಪ್ರಭ ವಾರ್ತೆ ಚವಡಾಪುರ
ಜಗತ್ತಿನಲ್ಲಿ ಭಾರತದಂತ ಶಾಂತಿಯ ದೇಶ, ಪ್ರೀತಿಯ ದೇಶ ಇನ್ನೊಂದಿಲ್ಲ. ಇಲ್ಲಿ ಎಲ್ಲಾ ಧರ್ಮದ ಜನ ಅವರವರ ಆಚರಣೆಗಳನ್ನು ಮಾಡಿಕೊಂಡು ನೆಮ್ಮದಿಯಾಗಿದ್ದಾರೆ. ಇಂತಹ ವೈವಿಧ್ಯಮಯ ದೇಶದ ಸೇವೆ ಸಲ್ಲಿಸುವ ಅವಕಾಶ ಸಿಕ್ಕಾಗ ಯಾರು ನುಣುಚಿಕೊಳ್ಳಬೇಡಿ ಎಂದು ನಿವೃತ್ತ ಬಿಎಸ್ಎಫ್ ಯೋಧ ಸೈಯದ್ ಮುಲ್ಲಾ ಹೇಳಿದರು.ಅಫಜಲ್ಪುರ ತಾಲೂಕಿನ ನಂದರಗಾ ಗ್ರಾಮದ ಸೈಯದ್ ಮುಲ್ಲಾ ಅವರು ಬಿಎಸ್ಎಫ್ನಲ್ಲಿ 39 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ಗ್ರಾಮಕ್ಕೆ ಆಗಮಿಸಿದಾಗ ಗ್ರಾಮಸ್ಥರು ಸನ್ಮಾನಿಸಿದರು. ಸನ್ಮಾನ ಸ್ವಿಕರಿಸಿ ಮಾತನಾಡಿದ ಅವರು ಪ್ರತಿಯೊಬ್ಬರು ಅವರ ಕುಟುಂಬಗಳಿಗೆ ಯೋಧರಿದ್ದಂತೆ. ಎಲ್ಲರೂ ತಮ್ಮ ತಮ್ಮ ಕಷ್ಟ ಕಾರ್ಪಣ್ಯಗಳನ್ನು ನೀಗಿಸಿಕೊಳ್ಳಲು ದುಡಿಯುತ್ತಿರುತ್ತಾರೆ. ಆದರೆ ದೇಶಕ್ಕಾಗಿ ಸೇವೆ ಸಲ್ಲಿಸುವ ಸೌಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ಸಿಕ್ಕಾಗ ಯಾರು ಬಿಡಬೇಡಿ ಎಂದ ಅವರು ಬಿಎಸ್ಎಫ್ ನನ್ನ ಬದುಕನ್ನು ಪರಿಪೂರ್ಣಗೊಳಿಸಿದೆ. ಭಾರತೀಯ ಸೇನೆಯ ಭಾಗವಾಗಿದ್ದಕ್ಕೆ ನನಗೆ ಹೆಮ್ಮೆ ಇದೆ. ಯುವ ಜನಾಂಗ ದುಶ್ಚಟಗಳಿಗೆ ದಾಸರಾಗದೆ ಚೆನ್ನಾಗಿ ಓದಿ ಸೇನೆಗೆ ಸೇರುವ ಪ್ರಯತ್ನ ಮಾಡಿ. ದೇಶ ಸೇವೆಗಿಂತ ದೊಡ್ಡ ಸೇವೆ ಇನ್ನೊಂದಿಲ್ಲ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಭೀಮರಾವ ಪಾಟೀಲ, ಅಣ್ಣಾರಾವ ಪಾಟೀಲ, ಗ್ರಾ.ಪಂ ಸದಸ್ಯ ಸಂತೋಷ ದೊಡ್ಮನಿ, ನಿವೃತ್ತ ಶಿಕ್ಷಕ ರಾಜಕುಮಾರ ಗೌರ, ಗ್ರಾ.ಪಂ ಅಧ್ಯಕ್ಷ ಧರ್ಮರಾಜ ರೇವೂರ, ದೇವಿದಾಸ ಕುಲಕರ್ಣಿ, ಸಿದ್ರಾಮ ಮಾಗಣಗೇರಿ, ಸಿದ್ದರಾಮ ಜಮಾದಾರ, ಸಿದ್ದಾರಾಮ ಕುಂಬಾರ, ಶಾಂತು ವಾಗ್ದರಿ, ಸೈಫನ ಜಾಗಿರದಾರ ಇದ್ದರು.