ಸುಳ್ಳರು, ಕಳ್ಳರ ನಂಬದೆ ಮಹಿಳಾ ಅಭ್ಯರ್ಥಿಗೆ ಮತ ಚಲಾಯಿಸಿ: ಎಸ್‍ಯುಸಿಐ

| Published : Apr 14 2024, 01:49 AM IST

ಸುಳ್ಳರು, ಕಳ್ಳರ ನಂಬದೆ ಮಹಿಳಾ ಅಭ್ಯರ್ಥಿಗೆ ಮತ ಚಲಾಯಿಸಿ: ಎಸ್‍ಯುಸಿಐ
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ರದುರ್ಗ ತಾಲೂಕಿನ ತಮಟಕಲ್ಲು ಗ್ರಾಮದಲ್ಲಿ ಶನಿವಾರ ಎಸ್ ಯುಸಿಐ ಪಕ್ಷದ ಅಭ್ಯರ್ತಿ ಡಿ.ಸುಜಾತ ಜನರ ಭೇಟಿ ಮಾಡಿ ಮತ ಪ್ರಚಾರ ನಡೆಸಿದರು.

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಈ ಬಾರಿಯ ಲೋಕಸಭೆ ಚುನಾವಣೆ ಸುಳ್ಳರು ಮತ್ತು ಕಳ್ಳರ ನಡುವಿನ ಸ್ಪರ್ಧೆಯಾಗಿದ್ದು ಪಕ್ಷದ ಅಭ್ಯರ್ಥಿ ಅವರ ಮಾತುಗಳಿಗೆ ಮರುಳಾಗದೆ ಎಸ್‍ಯುಸಿಐ (ಕಮ್ಯುನಿಸ್ಟ್) ಮನವಿ ಮಾಡಿದೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ವಿನೂತನ ಪ್ರಚಾರ ಕೈಗೊಂಡಿರುವ ಎಸ್‌ಯುಸಿಐ, ಕಾರ್ಯಕರ್ತರ ಕೂರಿಸಿಕೊಂಡು ಹಳ್ಳಿಗಳ ಸುತ್ತುತ್ತಿದೆ. ಈ ಸಂಬಂಧ ಚಿತ್ರದುರ್ಗದ ಭಗತ್ ಸಿಂಗ್ ಪಾರ್ಕ್ ಬಳಿ ಆರಂಭವಾದ ಗ್ರಾಮೀಣ ಜಾಥಾಗೆ ಶನಿವಾರ ಚಾಲನೆ ನೀಡಿ ಮಾತನಾಡಿದ ಪಕ್ಷದ ರಾಜ್ಯ ಮುಖಂಡ ಡಾ.ಜಿ.ಎಸ್. ಕುಮಾರ್ ಮಾತನಾಡಿ, ಹಣಬಲ, ತೋಳ್ಬಲ, ಜಾತಿ ಬಲಗಳೊಂದಿಗೆ ಧರ್ಮದ ಅಮಲಿನಲ್ಲಿ ಜನರನ್ನು ಮುಳುಗಿಸಲು ಯತ್ನಿಸುತ್ತಾ ಜನರ ಮುಂದೆ ಬರುತ್ತಿರುವ ಬಿಜೆಪಿ, ಕಾಂಗ್ರೆಸ್ ನಂತಹ ದೊಡ್ಡ ದೊಡ್ಡ ಪಕ್ಷಗಳ ನೆಲಕಚ್ಚಿಸುವಂತೆ ಮನವಿ ಮಾಡಿದರು.

ಬಿಜೆಪಿ, ಕಾಂಗ್ರೆಸ್ ನಿಲುವಿಗೆ ವಿರುದ್ಧವಾಗಿ ನೈಜ ಜನಪರ ವಿಚಾರಗಳನ್ನು ಕೈಗೆತ್ತಿಕೊಂಡು ಚುನಾವಣೆ ಎದುರಿಸುತ್ತಿರುವ ಎಸ್‍ಯುಸಿಐ (ಕಮ್ಯುನಿಸ್ಟ್) ಪಕ್ಷ ಈ ಚುನಾವಣಾ ಪ್ರಚಾರದ ಜಾಥಾವನ್ನು ಆರಂಭಿಸಿದೆ. ಭಾರಿ ಭರವಸೆಯೊಂದಿಗೆ ಆಳ್ವಿಕೆಗೆ ಬಂದು ಕಳೆದ ಹತ್ತು ವರ್ಷಗಳಿಂದ ನಮ್ಮನಾಳುತ್ತಿರುವ ಬಿಜೆಪಿ ಸರ್ಕಾರ ತನ್ನೆಲ್ಲಾ ಭರವಸೆಗಳನ್ನು ಹುಸಿಗೊಳಿಸಿದೆ. ಸಾಲದೆಂಬಂತೆ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಹರಣಗೊಳಿಸಿದೆ. ಕಾರ್ಮಿಕ ಹೋರಾಟಗಳಿಂದ ಗಳಿಸಿದ ನ್ಯಾಯಬದ್ಧ ಹಕ್ಕುಗಳನ್ನು ಕಿತ್ತುಕೊಂಡು ಕಾರ್ಮಿಕ ಕಾಯ್ದೆಗಳನ್ನು ದುರ್ಬಲಗೊಳಿಸಿದೆ. ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವುದಾಗಿ ಹೇಳಿದ್ದ ಸರ್ಕಾರವು ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಲು ಇಲ್ಲಸಲ್ಲದ ಪ್ರಯತ್ನ ಮಾಡಿದೆ ಎಂದು ದೂರಿದರು.

ಬೆಲೆ ಏರಿಕೆ, ಬಡತನ, ನಿರುದ್ಯೋಗ, ಶಿಕ್ಷಣ ಮತ್ತು ಆರೋಗ್ಯಗಳ ವ್ಯಾಪಾರೀಕರಣ ದೇಶದ ಜನತೆಯನ್ನು ಕಿತ್ತು ತಿನ್ನುತ್ತಿವೆ. ಮೂಲಭೂತ ಸಮಸ್ಯೆಗಳ ಬಗ್ಗೆ ಮಾತನಾಡದೆ ಜಾತಿವಾದ ಕೋಮುವಾದದ ವಿಷವನ್ನು ಮುಂದಿಟ್ಟುಕೊಂಡು ಜನರ ಗಮನವನ್ನು ಬೇರೆಡೆ ಸೆಳೆಯಲಾಗುತ್ತಿದೆ. ಈ ಹಿಂದೆ ನಮ್ಮನ್ನಾಳಿದ ಕಾಂಗ್ರೆಸ್ ಪಕ್ಷವೂ ಕೂಡ ಬಂಡವಾಳಶಾಹಿಗಳ ಸೇವೆ ಮಾಡುತ್ತಾ ಭ್ರಷ್ಟಾಚಾರದಲ್ಲಿ ಮುಳುಗಿತ್ತು ಎಂಬುದನ್ನು ಮರೆಯುವಂತಿಲ್ಲ. ಜನತೆ ಈ ಎಲ್ಲ ಜನ ವಿರೋಧಿ ಪಕ್ಷಗಳನ್ನು ಚುನಾವಣೆಯಲ್ಲಿ ತಿರಸ್ಕರಿಸಿ ಜನಪರ ಹೋರಾಟದ ದನಿಯನ್ನು ಸದನದಲ್ಲಿ ಎತ್ತುವ ಎಸ್‍ಯುಸಿಐ (ಕಮ್ಯುನಿಸ್ಟ್) ಪಕ್ಷವನ್ನು ಬೆಂಬಲಿಸಬೇಕು ಎಂದು ಕರೆ ನೀಡಿದರು.

ಅಭ್ಯರ್ಥಿ ಸುಜಾತ.ಡಿ ಮಾತನಾಡಿ, ಇಂದು ದೊಡ್ಡ ರಾಜಕೀಯ ಪಕ್ಷಗಳಿಗೆ ದೇಶದ ಬಂಡವಾಳಿಗರ ಮತ್ತು ಉದ್ಯಮಪತಿಗಳ ಬೆಂಬಲವಿದೆ. ಅವರ ಬೆಂಬಲದಿಂದ ಗೆದ್ದು ಬರುವ ಇವರು ತಮ್ಮ ಆಡಳಿತದ ಅವಧಿಯಲ್ಲಿ ಅದಾನಿ, ಅಂಬಾನಿ, ಟಾಟಾ, ಬಿರ್ಲಾಗಳ ಸೇವೆಗೈಯ್ಯುತ್ತಾರೆಯೇ ಹೊರತು ಬಡಜನರ, ರೈತ ಕಾರ್ಮಿಕರ ಬಗ್ಗೆ ಕಾಳಜಿ ತೋರುವುದಿಲ್ಲ. ಜನಪರ ಹೋರಾಟದ ನೈಜ ದನಿಯಾಗಿರುವ ಎಸ್‍ಯುಸಿಐ (ಕಮ್ಯುನಿಸ್ಟ್) ಪಕ್ಷವನ್ನು ಪ್ರಜ್ಞಾವಂತ ಮತದಾರರು ಬೆಂಬಲಿಸಬೇಕು ಎಂದರು. ಪಕ್ಷದ ಸ್ಥಳೀಯ ಮುಖಂಡ ರವಿಕುಮಾರ್ ಮಾತನಾಡಿದರು.

ಜಾಥಾವು ಚಿತ್ರದುರ್ಗ ತಾಲ್ಲೂಕಿನ ಮೆದೆಹಳ್ಳಿ, ತಮಟಕಲ್ಲು, ಅಯ್ಯನಹಳ್ಳಿ. ಪಾಪೇನಹಳ್ಳಿ, ರಾಯಣ್ಣನಹಳ್ಳಿ , ಚಿಕ್ಕಪ್ಪನಹಳ್ಳಿ, ಮಾಡಯಕನಹಳ್ಳಿ, ಚಿಕ್ಕಗೊಂಡನಹಳ್ಳಿ, ಬಂಗಾರಕ್ಕನಹಳ್ಳಿ, ತುರುವನೂರು, ಮುಸ್ಟೂರು-ಕೂನಬೇವು, ಬೆಳಗಟ್ಟ, ಹಾಯ್ಕಲ್, ಹಂಪಣ್ಣನಮಾಳಿಗೆ, ಗೋನೂರು ಮೊದಲಾದ ಹಳ್ಳಿಗಳಲ್ಲಿ ಸಂಚರಿಸಿ ಜನರನ್ನು ಭೇಟಿ ಮಾಡುವ ಮೂಲಕ ಮತ ಪ್ರಚಾರ ನಡೆಸಿತು.