ಸಾರಾಂಶ
ವ್ಯಸಮುಕ್ತ ಜಾಗೃತಿ ಅಭಿಯಾನದಲ್ಲಿ ಸಾವಳಗಿ ಠಾಣೆಯ ಪಿಎಸ್ಐ ಗಂಗಾಧರ ಪೂಜಾರಿ ಸಲಹೆ ನೀಡಿ ಮಾದಕ ವಸ್ತು ಬಳಸದಂತೆ ಹೇಳಿದರು.
ಕನ್ನಡಪ್ರಭ ವಾರ್ತೆ ಸಾವಳಗಿ
ಮದ್ಯ ಮತ್ತು ಮಾದಕ ವಸ್ತುಗಳ ಸೇವನೆಯಿಂದ ಕುಟುಂಬ ಮತ್ತು ಸಮಾಜದಲ್ಲಿ ಗೌರವ, ಘನತೆ ಹಾಳಾಗಿ ದುರ್ಬರ ಬದುಕು ಸಾಗಿಸುವ ಪರಿಸ್ಥಿತಿ ಒಂದೊದಗುತ್ತದೆ. ಮಾದಕ ವಸ್ತುಗಳಿಂದ ಯಾವುದೇ ಲಾಭವಿಲ್ಲ, ನಷ್ಟವೇ ಹೆಚ್ಚು. ಅವುಗಳಿಂದ ದೂರವಿರುವುದೇ ಲೇಸು ಎಂದು ಸಾವಳಗಿ ಠಾಣೆಯ ಪಿಎಸ್ಐ ಗಂಗಾಧರ ಪೂಜಾರಿ ಹೇಳಿದರು.ಸಾವಳಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಚೆನ್ನಪ್ಪ ನಿರಾಣಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಹಮ್ಮಿಕೊಂಡ ವ್ಯಸನಮುಕ್ತ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾರಾಯಿ ಕುಡಿತ, ಸಿಗರೇಟು, ಗುಟ್ಕಾ ತಂಬಾಕು ಸೇವನೆಯಿಂದ ಜನರು ತಮ್ಮ ಜೀವನ ಹಾಳು ಮಾಡಿಕೊಳ್ಳುವುದರ ಜೊತೆಗೆ ಸುತ್ತಮುತ್ತಲಿರುವ ಪರಿಸರ, ಸಂಗಡ ಇರುವವರನ್ನು ಹಾಳು ಮಾಡಿ ನೋವಿನ ಕೂಪಕ್ಕೆ ತಳ್ಳುತ್ತಾರೆ. ದುಶ್ಚಟಗಳಿಂದ ದೂರವಿದ್ದು, ಮನೆಯ ಹೆಣ್ಮಕ್ಕಳ ಕಣ್ಣೀರು ಒರೆಸುವ ಪ್ರಯತ್ನ ಮಾಡಿ. ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ ಎಂದು ಹೇಳಿದರು.
ಗಾಂಜಾ ಗಮ್ಮತ್ತು ಆರೋಗ್ಯಕ್ಕೆ ಆಪತ್ತು, ಪರಿಸರದಿಂದ ಸಿಗುವುದು ಗಾಳಿ,ಬೆಳಕು ಡ್ರಗ್ ಸೇವನೆಯಿಂದ ಮನೆ ಮುರುಕು, ಮಾದಕ ಚಟದ ಆರಂಭ ಜೀವನದ ಅಂತ್ಯ, ಮಾದಕ ವ್ಯಸನ ಮುಕ್ತ ಹೆಮ್ಮೆಯ ಜೀವನ ನಡೆಸಿ, ಡ್ರಗ್ಸ್ ಪ್ರೀಯರೆ ಹದಿಹರೆಯದವರಿಗೆ ಮಾದರಿ ಆಗಬೇಡಿ, ಬೇಡ ಗಾಂಜಾ ಚರಸ್.. ಹೇಳಿ ಬದುಕಿಗೆ ಚಿಯರ್ಸ್..ಮುಂತಾದ ಘೋಷಣೆ ಇರುವ ಬ್ಯಾನರ್ ಗಳನ್ನು ಪ್ರದರ್ಶಿಸಿದರು.ಎಎಸ್ಐ ಬಿ.ಬಿ. ಯಡವೆ, ಆರ್.ಎಸ್ .ಬಸನ್ನವರ, ಮಲ್ಲು ವಗೆನ್ನವರ, ಐ.ಎ. ನದಾಫ್, ಬಿ.ಎಂ. ಸುನಗಾರ, ಸಂಗಮೇಶ ಗಾಣಿಗೇರ ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಇದ್ದರು.