ಸಾರಾಂಶ
ರಾಮನಗರ: ಜನಸಾಮಾನ್ಯರಲ್ಲಿ ರಕ್ತದಾನದ ಬಗ್ಗೆ ತಪ್ಪು ಕಲ್ಪನೆಗಳಿದ್ದು, ಅದನ್ನು ಹೋಗಲಾಡಿಸಬೇಕು. ರಕ್ತದಾನ ಮಾಡುವುದರಿಂದ ಮನುಷ್ಯ ಆರೋಗ್ಯವಂತನಾಗಿರುತ್ತಾನೆಂ ಮನದಟ್ಟು ಮಾಡಿಸಬೇಕು ಎಂದು ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಹೇಳಿದರು.
ನಗರದ ಜಿಲ್ಲಾಸ್ಪತ್ರೆಯಲ್ಲಿ ಜೀವಾಮೃತ ರಕ್ತ ನಿಧಿ ಕೇಂದ್ರದಿಂದ 50 ಯೂನಿಟ್ ರಕ್ತವನ್ನು ಆರ್ಎಂಒ ಡಾ. ನಾರಾಯಣಸ್ವಾಮಿ ಅವರಿಗೆ ಹಸ್ತಾಂತರಿಸಿ ಮಾತನಾಡಿ, ರಕ್ತದಾನದಿಂದ ರಕ್ತದೊತ್ತಡ, ಮಧು ಮೇಹದಂತಹ ರೋಗಗಳು ನಿಯಂತ್ರಣಕ್ಕೆ ಬರುವುದರ ಜೊತೆಗೆ ಆತ್ಮತೃಪ್ತಿ ಸಿಗುತ್ತದೆ ಎಂದರು.ರಕ್ತದಾನ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಸಮಯಕ್ಕೆ ಸರಿಯಾಗಿ ರಕ್ತ ಸಿಗದೆ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು, ಅಪಘಾತದ ಗಾಯಾಳುಗಳು ಮೃತ ಪಡುತ್ತಿದ್ದಾರೆ. ಅಮೂಲ್ಯವಾದ ಜೀವಗಳನ್ನು ಉಳಿಸಲು ರಕ್ತದಾನ ಮಾಡುವುದು ಅಗತ್ಯವಾಗಿದ್ದು, ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು ಎಂದು ಹೇಳಿದರು.
ಜೀವಾಮೃತ ರಕ್ತ ನಿಧಿ ಮತ್ತು ಚಂದ್ರು ಡಯಗ್ನೋಸ್ಟಿಕ್ ಸೆಂಟರ್ ವ್ಯವಸ್ಥಾಪಕ ನಿರ್ದೇಶಕ ವಿ.ಸಿ.ಚಂದ್ರೇಗೌಡ ಮಾತನಾಡಿ, ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು ತುರ್ತು ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಇದೆ. ಹೀಗಾಗಿ ಸಾಮಾಜಿಕ ಕಳಕಳಿಯಿಂದ ಜೀವಮೃತ ರಕ್ತ ನಿಧಿ ಕೇಂದ್ರ ಸ್ಥಾಪನೆ ಮಾಡಿದ್ದು, ಆರೋಗ್ಯವಂತ ನಾಗರಿಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕಾಗಿದೆ ಎಂದು ತಿಳಿಸಿದರು.ಈಗ ಜಿಲ್ಲಾಸ್ಪತ್ರೆಗೆ 50 ಯೂನಿಟ್ ರಕ್ತ ನೀಡಿದ್ದು, ಮುಂದಿನ ದಿನಗಳಲ್ಲಿ 100 ಯೂನಿಟ್ ರಕ್ತವನ್ನು ಸಂಗ್ರಹಿಸಿ ಆಸ್ಪತ್ರೆಗೆ ನೀಡಲಾಗುವುದು. ನಮ್ಮಲ್ಲಿ ಕ್ಯಾನ್ಸರ್ ರೋಗಿಗಳು, ತಲೆಸ್ಮಿಯ ಹಾಗೂ ಗರ್ಭಿಣಿಯರಿಗೆ ರಕ್ತದ ಅವಶ್ಯಕತೆ ಇದ್ದಲ್ಲಿ, ಯಾವುದೇ ಶುಲ್ಕ ವಿಧಿಸದೆ ಉಚಿತವಾಗಿ ರಕ್ತ ನೀಡುತ್ತೇವೆ ಎಂದು ಹೇಳಿದರು.
ಆಸ್ಪತ್ರೆಗಳು ಮತ್ತು ರಕ್ತ ನಿಧಿಗಳು ರಕ್ತಕ್ಕೆ ಸಂಸ್ಕರಣಾ ಶುಲ್ಕವನ್ನು ಮಾತ್ರ ವಿಧಿಸಲು ಅವಕಾಶವಿದೆ. ದುಬಾರಿ ಶುಲ್ಕ ನಿಗದಿ ಮಾಡಿ ರಕ್ತ ಮಾರಾಟ ಮಾಡಲು ಅವಕಾಶ ಇಲ್ಲ. ಭಾರತೀಯ ಔಷಧ ಮಹಾ ನಿಯಂತ್ರಕರು ಸಂಸ್ಕರಣಾ ಶುಲ್ಕ ಹೊರತು ಪಡಿಸಿ ಇತರ ಎಲ್ಲ ಬಗೆಯ ಶುಲ್ಕಗಳನ್ನು ರದ್ದು ಪಡಿಸಿದ್ದಾರೆ. ಸಂಸ್ಕರಣಾ ಶುಲ್ಕ 250ರಿಂದ 1550 ರು.ವರೆಗೆ ಇದೆ ಎಂದು ಚಂದ್ರೇಗೌಡ ತಿಳಿಸಿದರು.ಈ ಸಂದರ್ಭದಲ್ಲಿ ಡಾ.ನಾರಾಯಣಸ್ವಾಮಿ, ಕಾರ್ಯಕ್ರಮ ಸಂಯೋಜಕಿ ನಳಿನಾ ಮತ್ತಿತರರು ಹಾಜರಿದ್ದರು.
25ಕೆಆರ್ ಎಂಎನ್ 4.ಜೆಪಿಜಿರಾಮನಗರದ ಜಿಲ್ಲಾಸ್ಪತ್ರೆಯಲ್ಲಿ ಜೀವಾಮೃತ ರಕ್ತ ನಿಧಿ ಕೇಂದ್ರದಿಂದ 50 ಯೂನಿಟ್ ರಕ್ತವನ್ನು ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಅವರು, ಆರ್ಎಂಒ ಡಾ. ನಾರಾಯಣಸ್ವಾಮಿಗೆ ಹಸ್ತಾಂತರಿಸಿದರು.