ಕನ್ನಡಪ್ರಭ ವಾರ್ತೆ ರಾಮನಗರ
ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಬೇನಾಮಿ ಆಸ್ತಿ ಹೊಂದಿರುವುದನ್ನು ಸಾಬೀತು ಮಾಡಲಿ. ಆ ಜಮೀನು ಇರಲಿ ಬಿಡಲಿ ನನ್ನ ಮತ್ತು ನನ್ನ ತಾಯಿಯವರ ಹೆಸರಿನಲ್ಲಿರುವ ಜಮೀನನ್ನು ಶಾಲೆ ಅಥವಾ ಆಸ್ಪತ್ರೆಗೆ ದಾನ ಮಾಡುತ್ತೇನೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸವಾಲು ಹಾಕಿದರು.ಬಿಡದಿ ಟೌನ್ ಶಿಪ್ ಯೋಜನೆ ವ್ಯಾಪ್ತಿಯ ಮೆರೆವೇಗೌಡನದೊಡ್ಡಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಈ ಭಾಗದಲ್ಲಿ 100ಎಕರೆ ಬೇನಾಮಿ ಹೊಂದಿದ್ದಾರೆ ಅಂತ ಸ್ಥಳೀಯ ಶಾಸಕರು ಆರೋಪಿಸಿದ್ದಾರೆ. ಅದನ್ನು ಸಾಬೀತು ಮಾಡಿದರೆ ಆ ಭೂಮಿಯನ್ನು ದಾನ ಮಾಡುತ್ತೇನೆ ಹೇಳಿದರು.
ಕೇತಗಾನಹಳ್ಳಿ ಗ್ರಾಮದಲ್ಲಿ 1985ರಲ್ಲಿ ನಮ್ಮ ತಂದೆ ಜಾಗ ಖರೀದಿ ಮಾಡಿದ್ದಾರೆ. ಯಾರ ತಲೆ ಹೊಡೆದು ಅದನ್ನು ಖರೀದಿ ಮಾಡಿಲ್ಲ. ಸಿನಿಮಾ ಹಂಚಿಕೆ ಮಾಡಿದ ಹಣದಲ್ಲಿ ಆ ಜಮೀನನ್ನು ಖರೀದಿ ಮಾಡಿದ್ದೇವೆ ಎಂದು ತಿಳಿಸಿದರು.ನಮ್ಮ ತಾಯಿ ಹೆಸರಲ್ಲಿ 27 ಎಕರೆ, ನನ್ನ ಹೆಸರಲ್ಲಿ 5ಎಕರೆ ಜಾಗವನ್ನು ಕೋವಿಡ್ ಸಮಯದಲ್ಲಿ ಖರೀದಿ ಮಾಡಿದ್ದೇವೆ. ನಮ್ಮ ಜಾಗದಲ್ಲಿ ಕಮರ್ಷಿಯಲ್ ಬಿಲ್ಡಿಂಗ್ ಕಟ್ಟಿಲ್ಲ. ರೈತರಿಗೆ ಅನುಕೂಲ ಮಾಡಲು ಹಾಲಿನ ಉತ್ಪನ್ನಗಳ ಉತ್ಪಾದನೆಗೆ ಅದನ್ನು ಬಳಸಲು ಇಟ್ಟಿದ್ದೆ. ಅದನ್ನು ಶಾಲೆ ಅಥವಾ ಆಸ್ಪತ್ರೆಗೆ ದಾನ ಮಾಡುತ್ತೇವೆ. ನೀವು ಟೌನ್ ಶಿಪ್ ಯೋಜನೆಯನ್ನು ಕೈಬಿಡುತ್ತೀರಾ ಎಂದು ಸವಾಲು ಹಾಕಿದರು.ಕೃಷಿ ವಲಯ ಬದಲಾಯಿಸಲಾಗಲ್ಲ ಅಂತ ಸುಳ್ಳೇಕೆ ಹೇಳುತ್ತೀರಾ: ನಿಖಿಲ್
ರಾಮನಗರ
ಕೃಷಿ ವಲಯ ಬದಲಾಯಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೇ ಇದೆ. ಆದರೆ ಬದಲಾಯಿಸಲು ಬರುವುದಿಲ್ಲ ಎಂದು ಮುಖ್ಯಮಂತ್ರಿ ಸುಳ್ಳು ಹೇಳುತ್ತಿದ್ದಾರೆ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದರು.
ಪಾದಯಾತ್ರೆಯಲ್ಲಿ ಮಾತನಾಡಿದ ಅವರು, ವಲಯ ಬದಲಾದರೆ ಎಕರೆ ಭೂಮಿ ಬೆಲೆ 10 ಕೋಟಿ ಆಗುತ್ತದೆ. ಆದರೆ, ನೀವು 2.55 ಕೋಟಿಗೆ ರೈತರ ಭೂಮಿ ಕಸಿಯುತ್ತಿದ್ದೀರಿ. ಇದು ಬಿಲ್ಡರ್ಗಳಿಗೆ ಲಾಭ ಮಾಡಿಕೊಡುವ ಸಂಚು ಎಂದು ಆರೋಪಿಸಿದರು.ಇಂದಿನ ಪಾದಯಾತ್ರೆ ಪಕ್ಷ, ರಾಜಕಾರಣದ ಲಾಭ-ನಷ್ಟಕ್ಕೆ ಸಂಬಂಧಿಸಿದಲ್ಲ. ರೈತರ ಹಿತ ಕಾಯುವ ಸಲುವಾಗಿ ಮಾಡುತ್ತಿರುವ ಪಾದಯಾತ್ರೆ. ಇದು ಆರಂಭ ಅಷ್ಟೇ. ಇಲ್ಲಿ ಫಲವತ್ತಾದ ಭೂಮಿ ಇದೆ, ಕೆಲವು ದಲ್ಲಾಳಿಗಳು ವ್ಯವಸ್ಥಿತವಾಗಿ ನಿಮ್ಮ ಭೂಮಿಯನ್ನು ಹೊಡೆಯಲು ಸಂಚು ರೂಪಿಸುತ್ತಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದರು.