ಸರ್ಕಾರಿ ಶಾಲೆ ಉಳಿಸಲು ದಾನಿಗಳ ಕೊಡುಗೆ ಅಗತ್ಯ

| Published : Jun 21 2025, 12:49 AM IST

ಸಾರಾಂಶ

ಎಪ್ಸನ್‌ ಸಂಸ್ಥೆಯ ಅಧ್ಯಕ್ಷರಾದ ಎನ್.ಸಾಂಭಮೂರ್ತಿ ಅವರ ಶೈಕ್ಷಣಿಕ ಹಾಗೂ ಸರ್ಕಾರಿ ಶಾಲಾ ಮಕ್ಕಳ ಬಗೆಗಿನ ಕಾಳಜಿಯ ಪ್ರತೀಕವಾಗಿ ಈ ನೆರವನ್ನು ಜಿಲ್ಲೆಗೆ ಹರಿಸುತ್ತಿದ್ದು, ನಮ್ಮ ಪ್ರಯತ್ನಕ್ಕೆ ಶಿಕ್ಷಕರ ಬಳಗ ಕೈಜೋಡಿಸಿ ಮಕ್ಕಳಿಗೆ ಪಾರದರ್ಶಕವಾಗಿ ತಲುಪುವಂತೆ ಮಾಡುತ್ತಿದೆ. ಮಕ್ಕಳಿಗೆ ವಿತರಿಸಲು ೧.೮೦ ಲಕ್ಷ ನೋಟ್‌ಪುಸ್ತಕಗಳನ್ನು ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಕೋಲಾರ ಖಾಸಗಿ ಶಾಲೆಗಳ ಪೈಪೋಟಿ ಎದುರಿಸುತ್ತಿರುವ ಸರ್ಕಾರಿ ಶಾಲೆಗಳನ್ನು ಉಳಿಸುವ ಪ್ರಯತ್ನವಾಗಿ ಜಿಲ್ಲೆಯ ಸರ್ಕಾರಿ ಶಾಲೆಗಳ ೩೬ ಸಾವಿರ ಮಕ್ಕಳಿಗೆ ೧.೮೦ ಲಕ್ಷ ನೋಟ್‌ ಪುಸ್ತಕ, ೫೭೨ ವಾಟರ್‌ಫಿಲ್ಟರ್‌ಗಳ ಕೊಡುಗೆ ನೀಡಿರುವ ಎಪ್ಸನ್ ಕಂಪನಿಗೆ ಹಾಗೂ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸುವುದಾಗಿ ಬಿಇಒ ಮಧುಮಾಲತಿ ಪಡುವಣೆ ತಿಳಿಸಿದರು.ಶಾಲೆಗಳಿಗೆ ಹಸ್ತಾಂತರ:

ಶುಕ್ರವಾರ ತಾಲೂಕಿನ ವೇಮಗಲ್ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶಿಕ್ಷಕ ಗೆಳೆಯರ ಬಳಗದಿಂದ ಎಪ್ಸನ್ ಕಂಪನಿ ಅಧ್ಯಕ್ಷ ಎನ್.ಸಾಂಭಮೂರ್ತಿ ಮಾರ್ಗದರ್ಶನದಲ್ಲಿ ಕೊಡುಗೆಯಾಗಿ ನೀಡಿರುವ ೧.೮೦ ಲಕ್ಷ ನೋಟ್‌ಪುಸ್ತಕಗಳನ್ನು ಸರ್ಕಾರಿ ಶಾಲೆಗಳಿಗೆ ಹಸ್ತಂತರಿಸಿ ಅವರು ಮಾತನಾಡಿದರು.ಈ ವರ್ಷ ಕೋಲಾರ,ಮಾಲೂರು,ಬಂಗಾರಪೇಟೆ ತಾಲ್ಲೂಕಿನ ೩೬ ಕ್ಲಸ್ಟರ್ ಸುಮಾರು ೪೫೦ ಸರ್ಕಾರಿ ಶಾಲೆಗಳ ೧ರಿಂದ ೧೦ನೇ ತರಗತಿಯ ೩೬ ಸಾವಿರ ಮಕ್ಕಳಿಗೆ ತಲಾ ೬ ಪುಸ್ತಕದಂತೆ ಎಪ್ಸನ್ ಕಂಪನಿ ಒದಗಿಸಿದೆ ಎಂದರು.

ಅಧ್ಯಕ್ಷ ಸಾಂಭಮೂರ್ತಿ ಕಾಳಜಿ

ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿ ವಿಜಯ್ ಗೋವಿಂದ್ ಮಾತನಾಡಿ, ನಮ್ಮ ಸಂಸ್ಥೆಯ ಅಧ್ಯಕ್ಷರಾದ ಎನ್.ಸಾಂಭಮೂರ್ತಿ ಅವರ ಶೈಕ್ಷಣಿಕ ಹಾಗೂ ಸರ್ಕಾರಿ ಶಾಲಾ ಮಕ್ಕಳ ಬಗೆಗಿನ ಕಾಳಜಿಯ ಪ್ರತೀಕವಾಗಿ ಈ ನೆರವನ್ನು ಜಿಲ್ಲೆಗೆ ಹರಿಸುತ್ತಿದ್ದು, ನಮ್ಮ ಪ್ರಯತ್ನಕ್ಕೆ ಶಿಕ್ಷಕರ ಬಳಗ ಕೈಜೋಡಿಸಿ ಮಕ್ಕಳಿಗೆ ಪಾರದರ್ಶಕವಾಗಿ ತಲುಪುವಂತೆ ಮಾಡುತ್ತಿದೆ ಎಂದರು.ಈ ಸಂದರ್ಭದಲ್ಲಿ ಎಪ್ಸನ್ ಕಂಪನಿ ಅಧಿಕಾರಿ ರಾಜೇಂದ್ರ ಸಿಂಗ್, ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ಎಸ್.ನಾರಾಯಣಸ್ವಾಮಿ, ಶಿಕ್ಷಕ ಗೆಳೆಯರ ಬಳಗದ ಉಪಾಧ್ಯಕ್ಷ ವೀರಣ್ಣಗೌಡ, ಕ್ಷೇತ್ರ ಸಮನ್ವಯಾಧಿಕಾರಿ ರಾಧಮ್ಮ ಮತ್ತಿತರರು ಇದ್ದರು.