ಬ್ರೇಕಿಂಗ್‌ ನ್ಯೂಸ್‌ ನೆಪದಲ್ಲಿ ತೇಜೋವಧೆ ಬೇಡ: ತಂಗಡಗಿ

| Published : Sep 15 2025, 01:01 AM IST

ಸಾರಾಂಶ

ಕಾರಟಗಿ ಪಟ್ಟಣದಲ್ಲಿ ವಾರದ ಸಂತೆ ಮಾರುಕಟ್ಟೆ ಬಳಿ ತಾತ್ಕಾಲಿಕವಾಗಿ ನೂತನವಾಗಿ ನವೀಕರಣಗೊಳಿಸಿ ನಿರ್ಮಿಸಿದ ಪತ್ರಕರ್ತರ ಸಂಘದ ನೂತನ ಪತ್ರಿಕಾ ಭವನವನ್ನು ಸಚಿವ ಶಿವರಾಜ ತಂಗಡಗಿ ಉದ್ಘಾಟಿಸಿದರು.

ಕಾರಟಗಿ: ಸುದ್ದಿ ಮಾಡುವುದಷ್ಟೇ ಪತ್ರಕರ್ತರ ಜವಾಬ್ದಾರಿಯಾಗಬಾರದು, ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಬ್ರೇಕಿಂಗ್ ನ್ಯೂಸ್ ನೆಪದಲ್ಲಿ ವ್ಯಕ್ತಿಯ ತೇಜೋವಧೆ ಮಾಡಬಾರದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಪಟ್ಟಣದಲ್ಲಿ ವಾರದ ಸಂತೆ ಮಾರುಕಟ್ಟೆ ಬಳಿ ತಾತ್ಕಾಲಿಕವಾಗಿ ನೂತನವಾಗಿ ನವೀಕರಣಗೊಳಿಸಿ ನಿರ್ಮಿಸಿದ ಪತ್ರಕರ್ತರ ಸಂಘದ ನೂತನ ಪತ್ರಿಕಾ ಭವನ ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕ ಬದ್ಧತೆ ಹಾಗೂ ಜವಾಬ್ದಾರಿಯ ಜತೆಗೆ ಸುದ್ದಿಗೆ ಮಹತ್ವ ಕೊಟ್ಟು ಸಾಮಾಜಿಕ ಜವಾಬ್ದಾರಿ ನಿರ್ವಹಿಸುವ ಹೊಣೆಗಾರಿಕೆ ಪತ್ರಕರ್ತರು ನಿಭಾಯಿಸಬೇಕು ಎಂದರು.

ಪ್ರಸ್ತುತ ದಿನಗಳಲ್ಲಿ ಪತ್ರಿಕೆ ನಡೆಸುವುದು ಸುಲಭದ ಕೆಲಸವಲ್ಲ. ಜಾಹೀರಾತುಗಳಿಲ್ಲದೆ ಪತ್ರಿಕೆ ನಡೆಸಲಾಗುವುದಿಲ್ಲ. ಟೀಕೆ ಮಾಡಿ ಬರೆಯುವ ಶಕ್ತಿ ಪತ್ರಕರ್ತರಿಗಿದೆ. ಆದರೆ ಟೀಕೆ ಭರದಲ್ಲಿ ಏನೇನೋ ಟೀಕೆ ಮಾಡಬಾರದು. ಅರ್ಥಗರ್ಭಿತವಾದ ಟೀಕೆಗೆ ಆದ್ಯತೆ ನೀಡಬೇಕು ಎಂದರು.

ಪತ್ರಕರ್ತರು ಪ್ರಶ್ನಾರ್ಥಕ ಚಿಹ್ನೆ ಹಾಕಿ ಬರೆಯುವುದಕ್ಕೂ ಸತ್ಯ ಬರೆಯುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಈ ನಿಟ್ಟಿನಲ್ಲಿ ಪತ್ರಕರ್ತರು ಸತ್ಯಾಸತ್ಯತೆ ಅರಿತುಕೊಳ್ಳುವ ಅವಶ್ಯಕತೆ ಇದೆ. ಹಾಗೆಯೇ ಅವರ ಹೇಳಿಕೆಯೂ ಪಡೆಯುವುದು ಕೂಡ ಅಷ್ಟೇ ಮುಖ್ಯವಾಗಿದೆ. ಚಾಕುವಿಗಿಂತ ಹರಿತವಾದುದ್ದು ಲೇಖನಿ ಮಾತ್ರ. ಜೀವನದೊಳಗೆ ಬದಲಾವಣೆ ಮಾಡುವ ಶಕ್ತಿ ಲೇಖನಿಗೆ ಮತ್ತು ಪತ್ರಿಕಾರಂಗಕ್ಕೆ ಮಾತ್ರವಿದೆ ಎಂದರು.

ಪತ್ರಿಕಾ ವಿತರಕರಿಗೂ ರಾಜ್ಯೋತ್ಸವ ಪ್ರಶಸ್ತಿಯನ್ನು ಕಳೆದ ವರ್ಷದಿಂದ ಸರ್ಕಾರ ಕೊಡುತ್ತಿದೆ. ಪ್ರತಿವರ್ಷ ಪತ್ರಿಕಾರಂಗದಲ್ಲಿ ಉತ್ತಮ ಸೇವೆಗೈದ ಪತ್ರಕರ್ತರನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿತ್ತು. ಅದರೊಂದಿಗೆ ಪತ್ರಿಕಾ ವಿತರಿಕರಿಗೂ ರಾಜ್ಯೋತ್ಸವ ಪ್ರಶಸ್ತಿ ನೀಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗುತ್ತಿತ್ತು. ಈ ಕುರಿತು ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ, ಅವರ ಆದೇಶದ ಮೇರೆಗೆ ಸಮಿತಿ ರಚಿಸಿ, ಸಮಿತಿಯ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಲು ನಿರ್ಧರಿಸಲಾಗಿದೆ ಎಂದರು.

ವಕೀಲ ನಾಗರಾಜ ಬಿಲ್ಗಾರ ಹಾಗೂ ಶಿವರೆಡ್ಡಿ ನಾಯಕ ಮಾತನಾಡಿ, ಪತ್ರಕರ್ತರ ಪೆನ್ ಕೇವಲ ಸುದ್ದಿಯ ಹಾಳೆಯಲ್ಲ. ಸಮಾಜದ ಬದಲಾವಣೆಯ ಶಸ್ತ್ರವಾಗಿ ಕಾರ್ಯ ನಿರ್ವಹಿಸಬೇಕು ಎಂದರು.

ಹಿರೇಮಠದ ಮರುಳ ಸಿದ್ಧಯ್ಯ ಸ್ವಾಮಿ ಸಾನ್ನಿಧ್ಯವಹಿಸಿದ್ದರು. ಶಿಕ್ಷಕಿ ಅಮರಮ್ಮ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಪತ್ರಕರ್ತ ಶರಣಪ್ಪ ಕೊಟ್ಯಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.

ಅಕ್ಕಿಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಎನ್. ಶ್ರೀನಿವಾಸ, ಮೌನೇಶ ದಢೇಸೂಗುರ, ಪುರಸಭೆ ಮುಖ್ಯಾಧಿಕಾರಿ ಸಾಬಣ್ಣ ಕಟ್ಟೆಕಾರ, ಸಿಡಿಪಿಒ ವಿರೂಪಾಕ್ಷಪ್ಪ, ಚನ್ನಬಸವ ಸುಂಕದ, ಶಶಿಧರಗೌಡ ಪಾಟೀಲ್, ನಾಗರಾಜ ಅರಳಿ, ಮಹಮದ್ ಋಫಿ, ಶರಣಪ್ಪ ಪರಕಿ, ಅಯ್ಯಪ್ ಉಪ್ಪಾರ, ಪತ್ರಕರ್ತರಾದ ಸಿದ್ಧನಗೌಡ ಹೊಸಮನಿ, ಕೆ. ಮಲ್ಲಿಕಾರ್ಜುನ, ದಿಗಂಬರ್ ಎನ್.ಕೆ., ಚಾಂದಸಿಂಗ್ ಉಮೇಶ ಮರ್ಲಾನಹಳ್ಳಿ, ಶರಣಪ್ಪ ಕೃಷ್ಣಾಪುರ, ನಾಗರಾಜ ಆಲಸಮುದ್ರ, ಶರಣಯ್ಯಸ್ವಾಮಿ, ರಮೇಶ ಸಂಗಡಿ, ರಮೇಶ ತೊಂಡಿಹಾಳ, ಜಂಬುನಾಥಗೌಡ, ಪ್ರವೀಣ ಕುಮಾರ ಹೊಸಮನಿ, ದೇವರಾಜ ಕುಂಟೋಜಿ, ಶಾಮೀದ್ ಗಂಗನಾಳ ಇದ್ದರು.