ಸಾರಾಂಶ
ಕಾರವಾರ: ರೂಟ್ಗಳಿಗೆ ತೆರಳುವ ಸಾರಿಗೆ ಸಂಸ್ಥೆಯ ಬಸ್ಗಳು ಹಾಳಾಗಿ ರಸ್ತೆ ಮಧ್ಯೆಯೇ ನಿಂತು ನಮ್ಮ ಮರ್ಯಾದೆ ಹಾಳಾಗುತ್ತಿದೆ. ಜನರ ಸೇವೆಗೆ ಬೇರೆನಾದರೂ ವ್ಯವಸ್ಥೆ ಮಾಡಿ, ಇಂದಿನಿಂದ ಹಾಳಾದ ಬಸ್ ಬಿಡಲೇ ಬೇಡಿ ಎಂದು ಸಾರಿಗೆ ಸಂಸ್ಥೆ ವ್ಯವಸ್ಥಾಪಕರಿಗೆ ಶಾಸಕ ಸತೀಶ ಸೈಲ್ ಸೂಚಿಸಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ತ್ರೈ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಧ್ಯೆ ರಸ್ತೆಯಲ್ಲಿ ಬಸ್ ಕೆಟ್ಟು ನಿಂತು ಜನರಿಗೆ ತೊಂದರೆ ಉಂಟಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.
ಕಾರವಾರ ಡಿಪೋ ವ್ಯವಸ್ಥಾಪಕಿ ಸೌಮ್ಯ ನಾಯಕ, ೮೧ ಬಸ್ ಡಿಪೋ ಬಳಿಯಿದೆ. ೨೦೧೩-೧೮ರ ಅವಧಿಯಲ್ಲಿ ೫೪, ೨೦೧೮-೨೩ರ ಅವಧಿಯಲ್ಲಿ ೧೪ ಹೊಸ ಬಸ್ ಬಂದಿದೆ. ನಮ್ಮ ಜಿಲ್ಲೆಯಲ್ಲಿ ಒಂದು ಬಸ್ನ್ನು ಎಂಟು ಲಕ್ಷ ಕಿಮೀ ವರೆಗೆ ಓಡಬಹುದು. ಹಾಲಿ ೪೬ ಬಸ್ ೮ ಲಕ್ಷ ಕಿಮೀ ದಾಟಿದೆ.
ಪ್ರತಿ ತಿಂಗಳೂ ಬಸ್ನ ಕಿಲೋ ಮೀಟರ್ ಎಷ್ಟು ಆಗಿದೆ ಎಂದು ಮಾಹಿತಿ ಕಳಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.ಸೈಲ್, ೧೫-೧೬ ಲಕ್ಷ ಕಿಮೀ ದಾಟಿದ ಬಸ್ ನೀವು ಓಡಿಸುತ್ತಿದ್ದೀರಿ. ಅದು ಬಳಕೆಗೆ ಸಮರ್ಥವಾಗಿಯದೇ? ಇಲಾಖೆಯ ಸಚಿವರಿಗೆ, ಸರ್ಕಾರಕ್ಕೆ ಹೊಸ ಬಸ್ ನೀಡಲು ಪತ್ರ ಇಂದೇ ಬರೆಯಬೇಕು. ಕೆಡಿಪಿ ಸಭೆಯಲ್ಲಿ ಚರ್ಚೆಯಾದ ಬಗ್ಗೆ, ತಾವು ಬಸ್ ನೀಡಲು ತಿಳಿಸಿದ ಬಗ್ಗೆ ಉಲ್ಲೇಖಿಸಬೇಕು. ಯಾವುದೇ ಕಾರಣಕ್ಕೂ ಹಳೆ ಬಸ್ ಓಡಿಸಬೇಡಿ. ಅನಾಹುತವಾದರೆ ನಿಮ್ಮನ್ನೇ ಹೊಣೆಗಾರರನ್ನಾಗಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಪಿಡಬ್ಲ್ಯೂಡಿ ಎಇಇ ರಾಮು, ವಿವಿಧ ಸಮುದಾಯಕ್ಕೆ ಸಭಾಭವನ ನಿರ್ಮಾಣಕ್ಕೆ ಅನುದಾನ ಬಂದಿತ್ತು. ಅದರಲ್ಲಿ ಕೊಂಕಣ ಮರಾಠಾ ಸಮುದಾಯಕ್ಕೆ ಒಂದು ಕಟ್ಟಡ ಮಂಜೂರಾತಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.ಶಾಸಕ ಸೈಲ್, ಕೊಂಕಣ ಮರಾಠಾ ಸಮಾಜದ ಆ ಸಂಘ ಯಾವಾಗ ನೋಂದಣಿಯಾಗಿದೆ ಎಂದು ತೋರಿಸಿ, ನಿಮ್ಮ ಬಳಿ ದಾಖಲೆ ಇದೆಯೇ? ಯಾವ ಆಧಾರದ ಮೇಲೆ ಜಾಗ ನೀಡಿದ್ದೀರಿ? ನೋಂದಣಿ ಆಗದೇ ಇರುವ ಸಂಘಕ್ಕೆ ಹೇಗೆ ಕೊಟ್ಟಿದ್ದೀರಿ? ಸುಳ್ಳು ದಾಖಲೆ ನೀಡಿದವರ ಮೇಲೆ ನೀವು ಕೂಡಲೇ ಕ್ರಮ ವಹಿಸಬೇಕು.
ಇಲ್ಲದವಾದರೆ ನಿಮ್ಮ ಮೇಲೆ ಕಾನೂನು ಕ್ರಮ ವಹಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.ಆರೋಗ್ಯ, ಕೃಷಿ, ತೋಟಗಾರಿಕೆ ಒಳಗೊಂಡು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆಯನ್ನು ಶಾಸಕರು ಮಾಡಿದರು. ತಹಸೀಲ್ದಾರ್ ನಿಶ್ಚಲ್ ನರೋನ್ಹ, ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಸೊಮಶೇಖರ ಮೇಸ್ತ, ಇಒ ಡಾ. ಆನಂದಕುಮಾರ ಬಾಲಪ್ಪನವರ್, ಸಿಎಂಸಿ ಪೌರಾಯುಕ್ತ ಕೆ. ಚಂದ್ರಮೌಳಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.