ಸಾರಾಂಶ
ಇಂದಿನ ಯುವ ಜನಾಂಗ ಅಧ್ಯಾತ್ಮದ ಬಗ್ಗೆ ಚಿಂತನೆ ಮಾಡದೇ ದುಶ್ಚಟಕ್ಕೆ ಬಲಿಯಾಗುತ್ತಿರುವುದು ದುರಂತದ ಸಂಗತಿಯಾಗಿದೆ.
ಹಿರಿಯೂರು: ತಾಲೂಕಿನ ಐಮಂಗಲ ಗ್ರಾಮದ ಹೊರವಲಯದಲ್ಲಿರುವ ಮಹಾ ಶಿವಶರಣ ಹರಳಯ್ಯ ಮಠದಲ್ಲಿ ಜ್ಞಾನದ ಬೆಳಕು ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ್ದ ಪೀಠಾಧ್ಯಕ್ಷ ಬಸವ ಹರಳಯ್ಯ ಸ್ವಾಮೀಜಿ ಮಾತನಾಡಿ, ಇಂದಿನ ಯುವ ಜನಾಂಗ ಅಧ್ಯಾತ್ಮದ ಬಗ್ಗೆ ಚಿಂತನೆ ಮಾಡದೇ ದುಶ್ಚಟಕ್ಕೆ ಬಲಿಯಾಗುತ್ತಿರುವುದು ದುರಂತದ ಸಂಗತಿಯಾಗಿದೆ.ಅತೀ ಚಿಕ್ಕ ವಯಸ್ಸಿನಲ್ಲಿಯೇ ಆರೋಗ್ಯ ಹದಗೆಡುವ ಚಟಗಳಿಗೆ ದಾಸರಾಗಿ ಪವಿತ್ರ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಜನರೂ ಸಹ ಮೌಢ್ಯಗಳ ಸುತ್ತ ಸುತ್ತುತ್ತಾ ಹಬ್ಬ ಹರಿದಿನಗಳನ್ನು ಆಢಂಬರವಾಗಿ ಆಚರಿಸಿ ಸಾಲದ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತಿಸದೆ ಬದುಕನ್ನು ಹಸನು ಮಾಡಲು ಯೋಚಿಸದೆ ಆಸ್ತಿಗಳ ಹಿಂದೆ, ಐಶ್ವರ್ಯದ ಹಿಂದೆ ಬೀಳುತ್ತಿದ್ದಾರೆ ಎಂದರು.
ಮುಖ್ಯ ಅತಿಥಿ, ಪ್ರಾಧ್ಯಾಪಕ ಜ್ಞಾನೇಶ್ವರ ಮಾತನಾಡಿ, ಸಮ ಸಮಾಜದ ನಿರ್ಮಾಣಕ್ಕೆ ಉತ್ತಮ ಚಿಂತನೆಗಳು ಅತ್ಯಗತ್ಯವಾಗಿವೆ. ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವಾದರ್ಶಗಳ ಬಗ್ಗೆ ಎಲ್ಲರೂ ಅರಿಯಬೇಕಿದೆ ಎಂದರು. ಈ ಸಂದರ್ಭದಲ್ಲಿ ಬಿಎಸ್ಪಿ ಜಿಲ್ಲಾಧ್ಯಕ್ಷ ಎನ್.ಪ್ರಕಾಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕಲ್ಲಟ್ಟಿ ಹರೀಶ್, ಸದಸ್ಯರಾದ ಕಣುಮೇಶ್, ನಿರಂಜನ್, ಪರಶುರಾಮ್, ನಿರಂಜನ್ ಮುಂತಾದವರು ಉಪಸ್ಥಿತರಿದ್ದರು.