ಸಾರಾಂಶ
ಬ್ಯಾಡಗಿ: ರಾಮರಾಜ್ಯದ ಕನಸನ್ನು ಕಂಡ ಮಹಾತ್ಮ ಗಾಂಧೀಜಿಯವರು ಹಳ್ಳಿಗಳ ಅಭಿವೃದ್ಧಿಯ ಚಿಂತನೆ ನಾವ್ಯಾರು ಮರೆಯಬಾರದು. ಈ ನಿಟ್ಟಿನಲ್ಲಿ ಯುವಕರು ಸಂಘಟನೆ ಮೂಲಕ ಸಾಂಸ್ಕೃತಿಕ ಸಮತೆ ಹೆಚ್ಚಿಸುವ ಮೂಲಕ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಎನ್ಎಸ್ಎಸ್ ಯೋಜನೆ ಮಹತ್ವ ಅರಿಯುವ ಅವಶ್ಯವಿದೆ ಎಂದು ಪ್ರಾಚಾರ್ಯ ಡಾ.ಎಸ್.ಜಿ. ವೈದ್ಯ ಹೇಳಿದರು.
ಬಿಇಎಸ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಎನ್.ಎಸ್.ಎಸ್.ಘಟಕ ಆಶ್ರಯದಲ್ಲಿ ದತ್ತುಗ್ರಾಮ ಹಿರೇನಂದಿ ಹಳ್ಳಿ ಆಯೋಜಿಸಿದ್ದ ಎನ್.ಎಸ್.ಎಸ್.ವಾರ್ಷಿಕ ಶಿಬಿರ-2024 ಉದ್ಘಾಟಿಸಿ ಮಾತನಾಡಿದ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಮತ್ತು ಸಂಘಟನೆ ಗಟ್ಟಿಗೊಳಿಸುವುದೇ ರಾಷ್ಟ್ರೀಯ ಸೇವಾ ಯೋಜನೆಯ ಉದ್ಧೇಶ, ಹಳ್ಳಿಗಳು ಉದ್ಧಾರವಾದರೆ ದಿಲ್ಲಿ ಉದ್ಧಾರವಾದೀತು ಎನ್ನುವ ಮಾತಿನಂತೆ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯತ್ತ ಶ್ರಮಿಸಬೇಕಾಗಿದೆ ಎಂದರು.ಯುವಕರು ಬದ್ಧತೆ ತೋರಬೇಕು: ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.45ರಷ್ಟು ಯುವಕರಿದ್ದಾರೆ, ಅವರೆಲ್ಲರೂ ಜವಾಬ್ದಾರಿಯುತ ನಾಗರಿಕರಾಗಬೇಕಾದ ಅಗತ್ಯವಿದೆ. ದೇಶದ ಅಭಿವೃದ್ಧಿ ಪಥದತ್ತ ನಡೆಯುವ ಎಲ್ಲ ಸತ್ಕಾರ್ಯಗಳಲ್ಲಿ ತೊಡಗಿಕೊಳ್ಳುವ ಅಗತ್ಯವಿದೆ. ಯುವಕರು ಜಾಗೃತಿಗೊಳ್ಳುವ ಮೂಲಕ ಉತ್ತಮ ಪರಿಸರ ನಿರ್ಮಾಣ, ಶುಚಿತ್ವ, ಆರೋಗ್ಯ, ಆಹಾರ ಇವುಗಳ ಕುರಿತು ವಿಶೇಷ ಮುತುವರ್ಜಿ ವಹಿಸಿಕೊಂಡು ಸ್ವತಃ ತಾವೇ ಮುಂದೆ ನಿಂತು ಸಾಧಿಸಿ ತೋರಿಸುವಂತಹ ಬದ್ಧತೆ ತೋರಬೇಕು ಎಂದರು.
ಸ್ವಯಂ ಪ್ರೇರಣೆ ವ್ಯಕ್ತಿತ್ವ ಬೆಳೆಸಿಕೊಳ್ಳಿ: ಪ್ರತಿಯೊಬ್ಬ ವ್ಯಕ್ತಿ ಸಮಾಜಮುಖಿ ಎನ್ನಿಸಿಕೊಳ್ಳಲು ಸಾಮಾಜಿಕ ಸೇವೆ ಮಾಡುವ ಅಗತ್ಯವಿದೆ, ಸ್ವಯಂಪ್ರೇರಣೆಯಿಂದ ಕೆಲಸ ಮಾಡುವುದರಿಂದ ವ್ಯಕ್ತಿತ್ವ ಬೆಳೆಯಲಿದೆ, ರಾಷ್ಟ್ರೀಯ ಸೇವಾ ಯೋಜನೆ ಇದೇ ಹಾದಿಯಲ್ಲಿ ಹಲವಾರು ಉತ್ತಮ ಅಂಶಗಳನ್ನು ಮುಂದಿಟ್ಟುಕೊಂಡು ಗ್ರಾಮಮಟ್ಟದಲ್ಲಿ ಜನಜಾಗೃತಿ ಮೂಡಿಸುವುದರ ಜೊತೆಗೆ ಪರಿಸರವನ್ನು ಉತ್ತಮವಾಗಿಡುವಲ್ಲಿ ಪ್ರಯತ್ನಿಸುತ್ತಿದೆ ಎಂದರು.ಎನ್.ಎಸ್.ಎಸ್.ಅಧಿಕಾರಿ ಎನ್.ಎಸ್. ಪ್ರಶಾಂತ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ, ಉಪನ್ಯಾಸಕ ಡಾ. ಸುರೇಶಕುಮಾರ ಪಾಂಗೆ, ಡಾ. ಪ್ರಭು ದೊಡ್ಮನಿ, ಜ್ಯೋತಿ ಹಿರೇಮಠ, ಡಾ.ಎಸ್. ರಶ್ಮಿ ಎಂ.ಎಚ್. ಮುಧೋಳಕರ, ಪ್ರವೀಣ ಬಿದರಿ, ಶಶಿಧರ ಮಾಗೋಡ, ನಿವೇದಿತ ವಾಲಿಶೆಟ್ಟರ, ಸಿಬ್ಬಂದಿಗಳಾದ ಸಂತೋಷ ಉದ್ಯೋಗಣ್ಣವರ, ಎಮ್.ಆರ್. ಕೋಡಿಹಳ್ಳಿ ಸೇರಿದಂತೆ ಇನ್ನಿತರರಿದ್ದರು.