ಅವಧಿ ಮುಗಿಯುತ್ತದೆ ಎಂದು ಜನರ ಕೆಲಸದ ಬಗ್ಗೆ ನಿರ್ಲಕ್ಷ್ಯ ಬೇಡ

| Published : Oct 31 2025, 03:00 AM IST

ಅವಧಿ ಮುಗಿಯುತ್ತದೆ ಎಂದು ಜನರ ಕೆಲಸದ ಬಗ್ಗೆ ನಿರ್ಲಕ್ಷ್ಯ ಬೇಡ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಅವಧಿ ಮುಗಿಯುತ್ತದೆ ಎಂದು ಜನರ ಕೆಲಸ, ಕಾರ್ಯ ನಿರ್ಲಕ್ಷ್ಯ ಮಾಡಬೇಡಿ.

ಹರಪನಹಳ್ಳಿ: ನಮ್ಮ ಅವಧಿ ಮುಗಿಯುತ್ತದೆ ಎಂದು ಜನರ ಕೆಲಸ, ಕಾರ್ಯ ನಿರ್ಲಕ್ಷ್ಯ ಮಾಡಬೇಡಿ. ಇದರಲ್ಲಿ ಶೇ.50 ಸದಸ್ಯರು ಪುನಃ ಇಲ್ಲಿಗೆ ಬರುತ್ತಾರೆ, ತಾಳ್ಮೆಯಿಂದ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ನಾವು ಹೊರಗ ಹೋಗಬಹುದು. ಆದರೆ ನಮ್ಮ ಸರ್ಕಾರ ಇದೆ, ನಮ್ಮ ಶಾಸಕರು ಇದ್ದಾರೆ...ಇದು ಗುರುವಾರ ನಡೆದ ಪುರಸಭಾ ಸಾಮಾನ್ಯ ಸಭೆಯಲ್ಲಿ ಹಿರಿಯ ಸದಸ್ಯರಾದ ಎಂ.ವಿ. ಅಂಜಿನಪ್ಪ ಹಾಗೂ ಡಿ.ಅಬ್ದುಲ್‌ ರಹಿಮಾನ್ ಸಾಹೇಬ್ ಹಾಗೂ ಇತರ ಸದಸ್ಯರು ಪುರಸಭಾ ಸಿಬ್ಬಂದಿಗೆ ಹೇಳಿದ ಎಚ್ಚರಿಕೆ ಮಾತು.

ಎಂ.ವಿ. ಅಂಜಿನಪ್ಪ ಮಾತನಾಡಿ, ನಮ್ಮ ಸದಸ್ಯತ್ವ ಅವಧಿ ಮುಗಿಯುತ್ತದೆ ಎಂದು ಕೆಲಸ, ಕಾರ್ಯ ನಿರ್ಲಕ್ಷ್ಯ ಮಾಡಬೇಡಿ. ಈಗಿರುವ ಸದಸ್ಯರಲ್ಲಿ ಶೇ.50 ಸದಸ್ಯರು ಗೆದ್ದು ವಾಪಸ್‌ ಇಲ್ಲಿಗೆ ಬರುತ್ತಾರೆ. ಜನರ ಕೆಲಸ ಸರಿಯಾಗಿ ಮಾಡಿ, ತಾಳ್ಮೆಯಿಂದ ಜನರಿಗೆ ಸ್ಪಂದಿಸಿ ಎಂದು ತಾಕೀತು ಮಾಡಿದರು.

ಇನ್ನೊಬ್ಬ ಹಿರಿಯ ಸದಸ್ಯ ಡಿ.ಅಬ್ದುಲ್‌ ರಹಿಮಾನ್‌ ಮಾತನಾಡಿ, ನಾವು ಹೊರಗೆ ಹೋಗಬಹುದು,.ಆದರೆ ರಾಜ್ಯದಲ್ಲಿ ನಮ್ಮ ಸರ್ಕಾರವಿದೆ. ಇಲ್ಲಿ ನಮ್ಮ ಶಾಸಕರಿದ್ದಾರೆ ಎಂದು ಹೇಳಿದರು.

ಮಧ್ಯ ಪ್ರವೇಶ ಮಾಡಿದ ಮುಖ್ಯಾಧಿಕಾರಿ ರೇಣುಕಾ ಎಸ್.ದೇಸಾಯಿ, ಜನರನ್ನು ಅಲೆದಾಡಿಸಬಾರದು. ಸ್ಪಂದಿಸಿ ತ್ವರಿತವಾಗಿ ಕೆಲಸ ಮಾಡಿ ಕೊಡಿ ಎಂದು ತಮ್ಮ ಸಿಬ್ಬಂದಿಗೆ ಸೂಚಿಸಿದರು.

ನಾಮನಿರ್ದೆಶಿತ ಸದಸ್ಯ ಗುಡಿನಾಗರಾಜ ಮಾತನಾಡಿ, ಹೊಸ ಪೈಲುಗಳು ಬೇಗ ನಿಮ್ಮ ಚೇಂಬರಿಗೆ ಬರುತ್ತವೆ. ಹಳೆ ಪೈಲುಗಳು ಅಲ್ಲೇ ಉಳಿಯುತ್ತವೆ ಎಂದು ಮುಖ್ಯಾಧಿಕಾರಿಗೆ ಹೇಳಿದರು.

ಮಾಜಿ ಅಧ್ಯಕ್ಷ ಮಂಜುನಾಥ ಇಜಂತಕರ್‌ ಹರಪನಹಳ್ಳಿ, ಪಟ್ಟಣದ ಹಳೆ ಊರಿನ ಕೆಲಸ, ಕಾರ್ಯ ಮಾಡುವಾಗ ಸ್ಲಲ್ಪ ವಿನಾಯಿತಿ ಇರಲಿ ಎಂದು ಸಲಹೆ ನೀಡಿದರು.

ಉದ್ದಾರ ಗಣೇಶ ಮಾತನಾಡಿ, ಪಟ್ಟಣದಲ್ಲಿ ಅಕ್ರಮ ನಳ ಬಹಳಷ್ಟಿವೆ. ತೆರವುಗೊಳಿಸಿ ಎಂದು ಕೋರಿದಾಗ ಮುಖ್ಯಾಧಿಕಾರಿ ರೇಣುಕಾ ಎಸ್.ದೇಸಾಯಿ ಅನಧಿಕೃತ ನಳಗಳನ್ನು ಪತ್ತೆ ಹಚ್ಚಿ ಶುಲ್ಕ ಪಾವತಿಸಿಕೊಂಡು ಅಧಿಕೃತ ಮಾಡಲಾಗುವುದು ಎಂದು ಹೇಳಿದರು.

ಲಾಟಿ ದಾದಾಪೀರ ಮಾತನಾಡಿ, ನೀರಿನ ತೆರಿಗೆ ಸಾಕಷ್ಟು ಬರುತ್ತದೆ. ಹೊಸ ನಳ ಜಾಸ್ತಿಯಾಗಿವೆ. ಆ ಹಣ ಜಮಾ ಖರ್ಚಿನಲ್ಲಿ ಬಂದಿಲ್ಲ ಎಲ್ಲಿಗೆ ಹೋಗುತ್ತದೆ ಎಂದು ಪ್ರಶ್ನಿಸಿದರು.

ಬೀದಿದೀಪಗಳನ್ನು ಸಮರ್ಪಕ ನಿರ್ವಹಣೆ ಮಾಡಿ ಎಂದು ಎಂ.ವಿ. ಅಂಜಿನಪ್ಪ ಒತ್ತಾಯಿಸಿ, ಪಟ್ಟಣದಲ್ಲಿ ಹೊಸ ಹೈಮಾಸ್ಟ್‌ ಲೈಟ್ ಗಳನ್ನು ಮಂಜೂರು ಮಾಡಿಸಿದ್ದಕ್ಕಾಗಿ ಶಾಸಕರಿಗೆ ಅಭಿನಂದನೆ ಎಂದು ಹೇಳಿದರು.

ಪಟ್ಟಣದ ಹರಿಹರ ವೃತ್ತದಿಂದ ಐ.ಬಿ. ವೃತ್ತದವರೆಗೆ ನಡೆದಿರುವ ಡಿವೈಡರ್‌ ಕಾಮಗಾರಿ ಏಕೆ ವಿಳಂಬವಾಗುತ್ತಿದೆ ಎಂದು ಅಶೋಕ ಪ್ರಶ್ನಿಸಿದರು.

ಸಹಾಯಕ ಆಯುಕ್ತರ ವಸತಿ ನಿಲಯದ ಹತ್ತಿರ ಇರುವ ಶಿಥಿಲ ಅವಸ್ಥೆಯಲ್ಲಿರುವ ಮೇಲ್ಮಟ್ಟದ ಜಲಸಂಗ್ರಹಾಗಾರವನ್ನು ತೆರವುಗೊಳಿಸಲು ಸಭೆ ಒಪ್ಪಿಗೆ ಸೂಚಿಸಿತು.

ಪುರಸಭಾ ಅಧ್ಯಕ್ಷೆ ಎಂ.ಪಾತೀಮಾಭೀ ಅಧ್ಯಕ್ಷತೆ ವಹಿಸಿದ್ದರು. ಉಪಾದ್ಯಕ್ಷ ಕೊಟ್ರೇಶ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ವೆಂಕಟೇಶ, ಮುಖ್ಯಾಧಿಕಾರಿ ರೇಣುಕಾ ಎಸ್.ದೇಸಾಯಿ, ಆರೋಗ್ಯ ನಿರೀಕ್ಷಕ ಮಂಜುನಾಥ, ಎಂಜಿನಿಯರ್‌ ಸಿದ್ದೇಶ್ವರ ಸಿಬ್ಬಂದಿ ಇದ್ದರು.