ಸಾರಾಂಶ
ಬೆಂಗಳೂರು : ಮಳೆ ಅಬ್ಬರ, ಕೋವಿಡ್ ಆತಂಕದ ನಡುವೆಯೇ ರಾಜ್ಯದಲ್ಲಿ ಶಾಲೆಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಮಕ್ಕಳಲ್ಲಿ ಜ್ವರ, ಕೆಮ್ಮು ನೆಗಡಿ ಲಕ್ಷಣ ಕಂಡುಬಂದಲ್ಲಿ ಶಾಲೆಗೆ ಕಳುಹಿಸದಂತೆ ತಿಳಿಸಿದೆ.
ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ಕೆಲ ಮಹತ್ವದ ನಿಯಮಗಳನ್ನು ಜಾರಿ ಮಾಡುವಂತೆ ಸೂಚಿಸಿದ್ದರು. ಅದರಂತೆ ಆರೋಗ್ಯ ಇಲಾಖೆ ಶಾಲೆಗಳಿಗಾಗಿ ಪ್ರತ್ಯೇಕ ಮಾರ್ಗಸೂಚಿಗಳನ್ನು ರೂಪಿಸಿದೆ.
ಶಾಲಾ ಮಕ್ಕಳಲ್ಲಿ ಜ್ವರ, ಕೆಮ್ಮು ನೆಗಡಿ ಹಾಗೂ ಇನ್ನಿತರ ಲಕ್ಷಣಗಳು ಕಂಡುಬಂದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸದೆ ವೈದ್ಯರ ಸಲಹೆಯಂತೆ ಸೂಕ್ತ ಚಿಕಿತ್ಸೆ ಹಾಗೂ ಆರೈಕೆ ಕ್ರಮ ಪಾಲಿಸಬೇಕು. ಮಕ್ಕಳಲ್ಲಿ ಈ ಲಕ್ಷಣಗಳು ಸಂಪೂರ್ಣವಾಗಿ ಗುಣಮುಖವಾದ ಬಳಿಕವೇ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಬೇಕು. ಜ್ವರ, ಕೆಮ್ಮು, ನೆಗಡಿ ಹಾಗೂ ಇತರೆ ಗುಣಲಕ್ಷಣಗಳಿರುವ ಮಕ್ಕಳು ಶಾಲೆಗೆ ಬಂದರೆ, ಅವರ ಪೋಷಕರಿಗೆ ಕೂಡಲೇ ಮಾಹಿತಿ ನೀಡಿ ಆ ಮಕ್ಕಳನ್ನು ಮನೆಗೆ ಕಳಿಸಬೇಕು ಎಂದು ಸೂಚಿಸಲಾಗಿದೆ.
ಜತೆಗೆ ಶಾಲಾ ಶಿಕ್ಷಕರು, ಬೋಧಕೇತರ ಸಿಬ್ಬಂದಿಯಲ್ಲಿ ಜ್ವರ, ಕೆಮ್ಮು, ನೆಗಡಿ ಲಕ್ಷಣಗಳು ಕಂಡುಬಂದರೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತ ಕೆ.ಬಿ.ಶಿವಕುಮಾರ್ ಆದೇಶದಲ್ಲಿ ತಿಳಿಸಿದ್ದಾರೆ.
ಶಾಲೆಗಳಿಗೆ ಕೋವಿಡ್ ಪ್ರತ್ಯೇಕ ಮಾರ್ಗಸೂಚಿ
- ಜ್ವರ, ಕೆಮ್ಮು, ನೆಗಡಿಯ ಲಕ್ಷಣವಿದ್ದರೆ ಮಕ್ಕಳು ಶಾಲೆಗೆ ಹೋಗಬಾರದು
- ಇಂಥ ಲಕ್ಷಣಗಳಿದ್ದ ಮಕ್ಕಳಿದ್ದರೆ ಪೋಷಕರಿಗೆ ಶಿಕ್ಷಕರು ಮಾಹಿತಿ ನೀಡಬೇಕು
- ಸಂಪೂರ್ಣ ಗುಣಮುಖರಾದ ನಂತರ ಶಾಲೆಗೆ ಮಕ್ಕಳನ್ನುಶಾಲೆಗೆ ಕಳಿಸಬೇಕು
- ಶಾಲಾ ಸಿಬ್ಬಂದಿಗಳಲ್ಲೂ ಇಂಥ ರೋಗಲಕ್ಷಣವಿದ್ದರೆ ಮುಂಜಾಗ್ರತೆ ವಹಿಸಬೇಕು