ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಸಿದ್ದರಾಮಯ್ಯ ಅವರ ಮುಡಾ ಪ್ರಕರಣದಿಂದ ಕಾಂಗ್ರೆಸ್ ನಾಯಕರಿಗೆ ಮುಜುಗರವಾಗಿದೆ. ಈಗ ಸೇಲ್ ಡೀಡ್ ರದ್ದು ಪಡಿಸಲಾಗಿದೆ. ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ತಪ್ಪು ಮಾಡಿರುವುದು ಮೊದಲಿಂದಲೂ ಸಾಬೀತಾಗಿದೆ. ಹೀಗಾಗಿ ಸಿದ್ದರಾಮಯ್ಯ ದಸರೆಯಲ್ಲಿ ಅಂಬಾರಿಯಲ್ಲಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವುದು ಅನುಮಾನ. ಕಾಂಗ್ರೆಸ್ ವಲಯದಲ್ಲಿ ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ಬಿಜೆಪಿ ಶಾಸಕ ಟಿ.ಎಸ್. ಶ್ರೀವತ್ಸ ತಿಳಿಸಿದರು.ಮೈಸೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದೇ ದಿವಸದಲ್ಲಿ ಸಿಎಂ ಪತ್ನಿ ಅವರಿಂದ ಮುಡಾ ನಿವೇಶನ ವಾಪಸ್ ಕೊಡುವ ಪ್ರಕ್ರಿಯೆ ಬಹಳ ತರಾತುರಿಯಲ್ಲಿ ಮಾಡಲಾಗಿದೆ. ಕೇಸ್ ನಡಿಯುತ್ತಿರುವುದೇ ಈ 14 ಸೈಟಿನ ಸುತ್ತಮುತ್ತ. ಇದನ್ನು ಮುಡಾ ಆಯುಕ್ತರು ತರಾತುರಿಯಲ್ಲಿ ಮಾಡಿದ್ದಾರೆ ಎಂದು ಕಿಡಿಕಾರಿದರು.ಈ ಪ್ರಕ್ರಿಯೆಯನ್ನು ಮೊದಲು ಮುಡಾ ಸಾಮಾನ್ಯ ಸಭೆಯಲ್ಲಿಟ್ಟು ಚರ್ಚೆ ಮಾಡಿ ಒಪ್ಪಿಗೆ ಪಡೆಯಬೇಕಿತ್ತು. ಆದರೆ, ಹಾಗೆ ಮಾಡಿಲ್ಲ. ನಿವೇಶನಗಳನ್ನು ವಾಪಾಸ್ ನೀಡುವ ಮೂಲಕ ಸರ್ಕಾರ ಎಲ್ಲಾ ತಪ್ಪುಗಳನ್ನು ಒಪ್ಪಿಕೊಂಡಿದೆ. ಹೀಗಾಗಿ, ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು.ನಾನು ಆರಂಭದಲ್ಲಿ ಮುಡಾ ಹಗರಣ ಪ್ರಸ್ತಾಪ ಮಾಡಿದ್ದು ಬೇರೆಯವರ ಕೇಸ್ ಸಂಬಂಧ. ಆದರೆ, ಇದರಲ್ಲಿ ಸಿಎಂ ಪ್ರಕರಣವೂ ಇತ್ತು. ಮುಡಾದಲ್ಲಿ 37 ತಿಂಗಳ ಅವಧಿಯಲ್ಲಿ 4865 ಹೆಚ್ಚು ನಿವೇಶನಗಳ ಅಕ್ರಮ ಹಂಚಿಕೆಯಾಗಿತ್ತು. ಈ ಬಗ್ಗೆ ನಾವು ಹೋರಾಟ ನಡೆಸುತ್ತಿದ್ದೇವೆಯೋ ಹೊರತು ಸಿಎಂ ಅವರ 14 ನಿವೇಶನಗಳಿಗೆ ಅಲ್ಲ ಎಂದರು.