ಸಾರಾಂಶ
ವರದಕ್ಷಿಣೆ ಕಿರುಕುಳದಿಂದ ಬೇಸತ್ತು, ಮಹಿಳೆಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿ, ಜಿಲ್ಲಾಸ್ಪತ್ರೆಗೆ ದಾಖಲಾದ ಘಟನೆ ಸೋಮವಾರ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ವರದಕ್ಷಿಣೆ ಕಿರುಕುಳದಿಂದ ಬೇಸತ್ತು, ಮಹಿಳೆಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿ, ಜಿಲ್ಲಾಸ್ಪತ್ರೆಗೆ ದಾಖಲಾದ ಘಟನೆ ಸೋಮವಾರ ನಡೆದಿದೆ.ಕನವಿಕಾ (20) ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಗಣೇಶಪುರ ನಿವಾಸಿ ಗಣೇಶ ಗುಡ್ಯಾಳಕರ ಜೊತೆಗೆ ಕನಿವಿಕಾಳ ವಿವಾಹ 2022ರ ಅಕ್ಟೋಬರ್ 18ರಂದು ನೆರವೇರಿತ್ತು. ನಾನು ಬಿಇ ಪದವಿಧರ ಎಂಜಿನಿಯರ್ ಕೆಲಸ ಮಾಡುತ್ತೇನೆ ಎಂದು ನಂಬಿಸಿ ಮೋಸದಿಂದ ನನ್ನನ್ನು ಮದುವೆ ಮಾಡಿಕೊಂಡಿದ್ದ. ಮದುವೆ ವೇಳೆ ನಾಲ್ಕು ತೊಲೆ ಚಿನ್ನದ ಬಳೆ, ಐದು ತೊಲೆ ನಕ್ಲೇಸ್, ನಾಲ್ಕು ತೊಲೆ ಮಂಗಳ ಸೂತ್ರ ಹಾಗೂ ಕಿವಿ ಓಲೆಗಳನ್ನು ತವರು ಮನೆಯವರು ನೀಡಿದ್ದಾರೆ. ಅದೆಲ್ಲವನ್ನು ಕಸಿದುಕೊಂಡು ವರದಕ್ಷಿಣೆ ತೆಗೆದುಕೊಂಡು ಬರುವಂತೆ ಕಿರುಕುಳ ನೀಡುತ್ತಿದ್ದಾರೆ. ಹಾಗಾಗಿ ಆತ್ಮಹತ್ಯೆಗೆ ಯತ್ನಿಸಿದ್ದೇನೆ ಎಂದು ಮಾಧ್ಯಮಗಳ ಎದುರು ಅಳಲು ತೋಡಿಕೊಂಡರು.
ಮದುವೆಯಾದ ಬಳಿಕ ಆರು ತಿಂಗಳ ಕಾಲ ಚೆನ್ನಾಗಿಯೇ ನೋಡಿಕೊಂಡಿದ್ದರು. ಬಳಿಕ ಸಣ್ಣಪುಟ್ಟ ವಿಷಯಕ್ಕೆ ಜಗಳ ಮಾಡುವುದು, ಹೊಡೆಯುವುದು, ಮಾನಸಿಕವಾಗಿ, ದೈಹಿಕವಾಗಿ ಕಿರುಕುಳ ನೀಡಿದ್ದಲ್ಲದೆ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಈ ಕುರಿತು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮದ್ಯ ವ್ಯಸನಿಯಾಗಿದ್ದ ನನ್ನ ಗಂಡನಿಗೆ ₹7 ಲಕ್ಷ ಹಣ ಕೊಟ್ಟಿದ್ದೇನೆ. ಈಗ ಗಂಡನ ಮನೆಯವರು ಮನೆಯಿಂದ ಹೊರ ಹಾಕಿದ್ದಾರೆ. ನನಗೆ ಅನ್ಯಾಯವಾಗಿದ್ದು, ನ್ಯಾಯ ಕೊಡಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.