ಸಾರಾಂಶ
ಕನ್ನಡಪ್ರಭ ವಾರ್ತೆ ಬಳ್ಳಾರಿ
ಭಾರತ ಸೇರಿದಂತೆ ವಿದೇಶಗಳಲ್ಲಿಯೂ ಅಪಾರ ಹೆಸರು ಮಾಡಿರುವ ಡಾ. ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆ ಬಳ್ಳಾರಿಯಲ್ಲಿ ಉದ್ಘಾಟನೆಗೊಂಡಿರುವುದು ಹೆಚ್ಚು ಸಂತಸ ತಂದಿದೆ ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.ಇಲ್ಲಿನ ಗಾಂಧಿನಗರದಲ್ಲಿ ನೂತನ ಆಸ್ಪತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ವಿಶ್ವದೆಲ್ಲೆಡೆ 220ಕ್ಕೂ ಹೆಚ್ಚು ಆಸ್ಪತ್ರೆಗಳನ್ನು ಹೊಂದಿರುವ ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆಗಳಲ್ಲಿ ಉನ್ನತ ಮಟ್ಟದ ಸೇವೆ ಹಾಗೂ ಸೌಲಭ್ಯ ದೊರೆಯಲಿದೆ. ವಿಶ್ವದರ್ಜೆಯ ಸೌಲಭ್ಯ ಬಳ್ಳಾರಿಯಲ್ಲಿ ಸಿಗುತ್ತಿರುವುದು ನನಗೆ ಹೆಚ್ಚು ಸಂತಸ ತಂದಿದ್ದು, ಬಳ್ಳಾರಿಗರು ಆಸ್ಪತ್ರೆಯ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.ದೇಹ ರಚನೆಯಲ್ಲಿ ಕಣ್ಣು ಹೆಚ್ಚು ಮಹತ್ವದ್ದು. ಕಣ್ಣಿನ ಸಮಸ್ಯೆ ಕಂಡು ಬಂದ ಕೂಡಲೇ ಉದಾಸೀನ ಮಾಡದೆ ವೈದ್ಯಕೀಯ ನೆರವು ಪಡೆದುಕೊಳ್ಳಬೇಕು. ಡಾ.ಅಗರ್ವಾಲ್ಸ್ ಆಸ್ಪತ್ರೆಯಲ್ಲಿ ಸ್ಫರ್ಧಾತ್ಮಕ ದರದಲ್ಲಿ ಅತ್ಯಾಧುನಿಕ ಚಿಕಿತ್ಸೆಗಳನ್ನು ಒದಗಿಸಲಾಗುತ್ತಿರುವುದರಿಂದ ಈ ಭಾಗದ ಜನರಿಗೆ ಹೆಚ್ಚಿನ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಹೆಚ್ಚುವರಿ ಎಸ್ಪಿ ರವಿಕುಮಾರ್ ಮಾತನಾಡಿ, ಇಂದಿನ ಜೀವನಶೈಲಿ ಮತ್ತು ಹೆಚ್ಚುತ್ತಿರುವ ಒತ್ತಡದ ಮಟ್ಟದಿಂದಾಗಿ, ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳ ಪ್ರಮಾಣ ಹೆಚ್ಚಾಗಿದೆ. ಕಣ್ಣಿನ ಆರೈಕೆ ವಿಷಯದಲ್ಲಿ ಡಾ. ಅಗರ್ವಾಲ್ಸ್ ಆಸ್ಪತ್ರೆ ಒಂದು ವಿಶ್ವಾಸಾರ್ಹ ಹೆಸರಾಗಿದೆ ಎಂದು ತಿಳಿಸಿದರು.ಡಾ. ಅಗರ್ವಾಲ್ಸ್ ಹಾಸ್ಪಿಟಲ್ಸ್ ಸಮೂಹದ ಹಿರಿಯ ಅಧಿಕಾರಿ ಹಾಗೂ ಕರ್ನಾಟಕ ಕ್ಲಿನಿಕಲ್ ಸರ್ವೀಸ್ನ ಪ್ರಾದೇಶಿಕ ಮುಖ್ಯಸ್ಥ ಡಾ. ಶ್ರೀನಿವಾಸ ರಾವ್ ಮಾತನಾಡಿ, ಡಾ. ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆಯಲ್ಲಿ ರೋಗಿಗಳಿಗೆ ವಿಶ್ವ ದರ್ಜೆಯ ಸೌಲಭ್ಯಗಳು ಮತ್ತು ಸೇವೆಗಳನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ. ಈ ಹೊಸ ಆಸ್ಪತ್ರೆಯು ಬಳ್ಳಾರಿಯಲ್ಲಿ ಸುಧಾರಿತ ಕಣ್ಣಿನ ಆರೈಕೆಗಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವುದೇ ನಮ್ಮ ಗುರಿಯಾಗಿದೆ. ಜನರಿಗೆ ಕೈಗೆಟುಕುವ ವೆಚ್ಚದಲ್ಲಿ ಇತ್ತೀಚಿನ ಚಿಕಿತ್ಸಾ ತಂತ್ರಜ್ಞಾನಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಆದ್ಯತೆಯಾಗಿದೆ ಎಂದು ತಿಳಿಸಿದರಲ್ಲದೆ, ಏ. 30 ರವರೆಗೆ ಹೊಸ ಆಸ್ಪತ್ರೆಯಲ್ಲಿ ಉಚಿತ ಸಮಾಲೋಚನೆಗಳು ಲಭ್ಯವಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಬಳ್ಳಾರಿ ಕ್ಲಿನಿಕಲ್ ಸರ್ವೀಸಸ್ನ ಮುಖ್ಯಸ್ಥ ಡಾ. ಮಹೇಶ್ ನಾರಾಯಣ್ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ಹಾಜರಿದ್ದರು.