ಡಾ.ಅಂಬೇಡ್ಕರ್‌ ಚಿಂತನೆ ಇಂದಿಗೂ ಪ್ರಸ್ತುತ: ಜಯಪ್ಪ ಹಾನಗಲ್‌

| Published : Apr 18 2024, 02:19 AM IST

ಡಾ.ಅಂಬೇಡ್ಕರ್‌ ಚಿಂತನೆ ಇಂದಿಗೂ ಪ್ರಸ್ತುತ: ಜಯಪ್ಪ ಹಾನಗಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಸೋಮವಾರಪೇಟೆ ಸಮೀಪದ ಯಡೂರಿನ ಬಿ.ಟಿ.ಚನ್ನಯ್ಯ ಗೌರಮ್ಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಡಾ.ಬಿ.ಆರ್.ಅಂಬೇಡ್ಕರ್‌ ಅವರ 133ನೆ ಜನ್ಮದಿನಾಚರಣೆ ನಡೆಯಿತು. ದಲಿತ ಮುಖಂಡ ಜಯಪ್ಪ ಹಾನಗಲ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡರು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಚಿಂತನೆಗಳು ಇಂದಿಗೂ ಪ್ರಸ್ತುತ ಎಂದು ದಲಿತ ಮುಖಂಡ ಜಯಪ್ಪ ಹಾನಗಲ್ ಅಭಿಪ್ರಾಯಪಟ್ಟಿದ್ದಾರೆ.

ಇಲ್ಲಿಗೆ ಸಮೀಪದ ಯಡೂರಿನ ಬಿ.ಟಿ.ಚನ್ನಯ್ಯ ಗೌರಮ್ಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಡಾ.ಬಿ.ಆರ್.ಅಂಬೇಡ್ಕರ್‌ ಅವರ 133ನೆ ಜನ್ಮದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಬಾಬಾ ಸಾಹೇಬರ ಸಾಧನೆ ಅಸಾಧಾರಣವಾದುದು. ಅವರು ಬದುಕಿನುದ್ದಕ್ಕೂ ಅವಮಾನ ಶೋಷಣೆಗಳಿಗೆ ಒಳಗಾಗಿ, ಅವುಗಳನ್ನು ಮೆಟ್ಟಿನಿಂತು ನೊಂದವರ ಬಾಳಿಗೆ ಬೆಳಕಾದವರು. ಶತಮಾನಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಜನರಿಗೆ ಗೌರವಯುತ ಬದುಕನ್ನು ಕಟ್ಟಿಕೊಟ್ಟವರು ಎಂದು ಹೇಳಿದರು.

ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ದೇವರಾಜ್ ಮಾತನಾಡಿ, ಅಂಬೇಡ್ಕರ್‌ ರಚಿಸಿರುವ ಸಂವಿಧಾನ ಇಡೀ ವಿಶ್ವದಲ್ಲಿಯೇ ಅತ್ಯಂತ ವಿಶಿಷ್ಟವಾದುದು. ಅದರಲ್ಲಿರುವ ರಾಜ್ಯನಿರ್ದೇಶಕ ತತ್ವಗಳು ಬಹಳ ಮಹತ್ವಪೂರ್ಣವಾದುವು. ಡಾ.ಅಂಬೇಡ್ಕರ್ ಒಂದು ಜನಾಂಗಕ್ಕೆ ಸೀಮಿತರಾದ ವ್ಯಕ್ತಿಯಲ್ಲ. ಸರ್ವಮಾನ್ಯ ವ್ಯಕ್ತಿ ಎಂದು ಹೇಳಿದರು.

ಇದೇ ಸಂದರ್ಭ ಜಯಪ್ಪ ಹಾನಗಲ್‍ ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಎಚ್. ಧನಲಕ್ಷ್ಮಿ ಅಧ್ಯಕ್ಷತೆ ವಹಿಸಿದ್ದರು. ಇಂಗ್ಲಿಷ್ ಸಹಾಯಕ ಪ್ರಾಧ್ಯಾಪಕ ಎಂ.ಎಸ್. ಶಿವಮೂರ್ತಿ, ವಾಣಿಜ್ಯ ವಿಭಾಗದ ಪ್ರೊ. ಎಂ.ಎಂ.ಸುನಿತ, ಪ್ರೊ. ಪಿ.ಪಾವನಿ, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.