ಸಾರಾಂಶ
ಕನ್ನಡಪ್ರಭ ವಾರ್ತೆ ಮುಧೋಳ
ಅರಳಿಕಟ್ಟಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಡಾ.ತಿಮ್ಮಣ್ಣ ವಿ.ಅರಳಿಕಟ್ಟಿ ಅವರು ಅಲ್ಪಾವಧಿಯಲ್ಲಿ ಶಿಕ್ಷಣ, ಕೃಷಿ, ಸಹಕಾರಿ, ಕ್ರೀಡೆ, ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರಗಳು ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ಅಗಾಧ ಸಾಧನೆ ಮಾಡಿ ಇತರರಿಗೂ ಮಾದರಿಯಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಶ್ಲಾಘಿಸಿದರು.ನಗರದ ಹೊರವಲಯದಲ್ಲಿರುವ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಅರಳಿಕಟ್ಟಿ ಫೌಂಡೇಶನ್ನ 6ನೇ ವಾರ್ಷಿಕೋತ್ಸವ ಹಾಗೂ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ದಿ.ವಿ.ಎಚ್.ಅರಳಿಕಟ್ಟಿ ಕೃಷಿರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಡಾ.ಟಿ.ವಿ.ಅರಳಿಕಟ್ಟಿ ಅವರು ತಮ್ಮ ತಂದೆ ದಿ.ವಿ.ಎಚ್.ಅರಳಿಕಟ್ಟಿ ಅವರ ಹೆಸರಿನಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಕೃಷಿರತ್ನ ಪ್ರಶಸ್ತಿ ನೀಡುತ್ತಿರುವುದು ನಮಗೆಲ್ಲರಿಗೂ ಸಂತಸ ಮತ್ತು ಅಭಿಮಾನದ ವಿಷಯ. ರೈತರಿಗೆ ಆರೋಗ್ಯ ಮತ್ತು ಆರ್ಥಿಕ ನೆರವು ನೀಡುತ್ತಿರುವ ಡಾ.ಟಿ.ವಿ.ಅರಳಿಕಟ್ಟಿ ಅವರ ಕಾರ್ಯ ಸಮಾಜಕ್ಕೆ ಮಾದರಿಯಾಗಿದ್ದು, ಹತ್ತು ಹಲವಾರು ಸಮಾಜಮುಖಿ ಅತ್ಯುತ್ತಮ ಕೆಲಸ ಮಾಡುವವರನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.ಮಾಜಿ ಸಚಿವ ಎಸ್.ಆರ್.ಪಾಟೀಲ ಉದ್ಘಾಟಿಸಿ ಮಾತನಾಡಿ, ಸಂಕಷ್ಟದಲ್ಲಿರುವ ರೈತರಿಗೆ ಸಾಲ ಸೌಲಭ್ಯ ಕಲ್ಪಿಸಿ ಸಹಕಾರಿ ಕ್ಷೇತ್ರವನ್ನು ಬಲಪಡಿಸಿದ್ದಾರೆ. ಗ್ರಾಮೀಣ ಭಾಗದ ರೈತರಿಗೆ ಅನುಕೂಲವಾಗುವಂತೆ ಮೊಬೈಲ್ ಆರೋಗ್ಯ ತಪಾಸಣೆ ವಾಹನ ಸೇವೆ ಆರಂಭಿಸಿರುವುದು ಪ್ರಶಂಸನೀಯ. ₹25 ಬೆಲೆಯ ಪಹಣಿ ಉತಾರವನ್ನು ಕೇವಲ ₹10ಗೆ ನೀಡುವ ಮೂಲಕ ರೈತರ ಪರ ಕೆಲಸ ಮಾಡುತ್ತಿರುವುದು ನಮಗೆಲ್ಲ ಹೆಮ್ಮೆ ತರುವ ವಿಷಯ ಎಂದು ಡಾ.ಟಿ.ವಿ.ಅರಳಿಕಟ್ಟಿ ಅವರ ಸಹಕಾರಿ ಕ್ಷೇತ್ರದ ಸಾಧನೆಗಳನ್ನು ಶ್ಲಾಘಿಸಿದರು.ನಿರಾಣಿ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್.ನಿರಾಣಿ ಮಾತನಾಡಿ, ಡಾ.ಟಿ.ವಿ.ಅರಳಿಕಟ್ಟಿ ಅವರು ಹೊಸ ಕನಸುಗಳನ್ನು ಬಿತ್ತುವ ಕನಸುಗಾರ. ರೈತರ ಏಳ್ಗೆಗಾಗಿ ನಿರಂತರವಾಗಿ ದುಡಿಯುತ್ತಿದ್ದಾರೆ ಎಂದು ಬಣ್ಣಿಸಿದರು.ಬೆಳಗಾವಿ ಪೊಲೀಸ್ ಡೆಪ್ಯೂಟಿ ಕಮಿಷನರ್ ನಾರಾಯಣ ಭರಮನಿ ಮಾತನಾಡಿ, ಅರಳಿಕಟ್ಟಿ ಫೌಂಡೇಶನ್ ಬೇರೆಡೆಯಿಂದ ನುರಿತ ಶಿಕ್ಷಕರನ್ನು ಕರೆತಂದು ಸ್ಥಳೀಯ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ. ತಾವು 32 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿರುವುದು, ತಮ್ಮ ಹುಟ್ಟೂರಿನ ತಾಲೂಕಿಗೆ ಬಂದು ಮಾತನಾಡಲು ಅವಕಾಶ ಸಿಕ್ಕಿರುವುದು ನನಗೆ ಸಂತೋಷ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.ಚಲನಚಿತ್ರ ನಟಿ ಭವ್ಯಾ ಮಾತನಾಡಿ, ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ರೈತರಿಗೆ ಕೃಷಿರತ್ನ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಈ ರೀತಿ ರೈತ ಜೀವಗಳನ್ನು ಗುರುತಿಸಿ ಸನ್ಮಾನ ಮಾಡುವ ಕಾರ್ಯ ಮಾಡುತ್ತಿರುವ ಅರಳಿಕಟ್ಟಿ ಫೌಂಡೇಶನ್ ಕಾರ್ಯ ಶ್ಲಾಘನೀಯ. ಡಾ.ಟಿ.ವಿ.ಅರಳಿಕಟ್ಟಿ ಅವರು ಮುಂದೊಂದು ದಿನ ದೊಡ್ಡ ಸ್ಥಾನಕ್ಕೆ ಏರುವ ಎಲ್ಲ ಲಕ್ಷಣಗಳು ಇವೆ ಎಂದು ಭವಿಷ್ಯ ನುಡಿದರು.ಅರಳಿಕಟ್ಟಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಡಾ.ಟಿ.ವಿ.ಅರಳಿಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಕೆಲವೊಮ್ಮೆ ಶಿಕ್ಷಕರು ಮಕ್ಕಳನ್ನು ಗದರಿಸುವ ಅಥವಾ ತಿದ್ದುವುದು ಅವರ ಮೇಲಿನ ಸಿಟ್ಟಿನಿಂದಲ್ಲ, ಬದಲಾಗಿ ಅವರ ಭವಿಷ್ಯ ರೂಪಿಸಲು. ಪೋಷಕರು ಇದನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಶಿಕ್ಷಕರ ಮೇಲೆ ದೂರು ಸಲ್ಲಿಸುವುದು ಸರಿಯಲ್ಲ ಎಂದರು.ಈ ವೇಳೆ ಜಿಪಂ ಮಾಜಿ ಅಧ್ಯಕ್ಷ ಎಂ.ಎಲ್.ಕೆಂಪಲಿಂಗಣ್ಣವರ, ಮುಧೋಳ ಕಬ್ಬು ಬೆಳೆಗಾರರ ಸೌಹಾರ್ದ ಸಹಕಾರಿ ಅಧ್ಯಕ್ಷ ಗಿರೀಶಗೌಡ ಪಾಟೀಲ, ಉಪಾಧ್ಯಕ್ಷ ಅನಂತರಾವ್ ಘೋರ್ಪಡೆ, ಮುಧೋಳ ರಾಯಲ್ ಸ್ಕೂಲ್ ಅಧ್ಯಕ್ಷೆ ಸವಿತಾ ತಿಮ್ಮಣ್ಣ ಅರಳಿಕಟ್ಟಿ, ಉಪಾಧ್ಯಕ್ಷೆ ರಾಜೇಶ್ವರಿ ಕೋಮಾರ, ಮುಖ್ಯ ಅತಿಥಿ ಸ್ಥಾನ ವಹಿಸಿದ್ದರು.ಕೃಷಿರತ್ನ ಪ್ರಶಸ್ತಿ ಪ್ರದಾನ:
ವಿವಿಧ ಬಗೆಯ ಕೃಷಿ ವ್ಯವಸಾಯದಲ್ಲಿ ಸಾಧನೆ ಮಾಡಿದ ಸಾಧಕರಾದ ರಾಮಣ್ಣ ಸಂಕ್ರಟ್ಟಿ, ಶ್ರೀಕಾಂತ ಕುಂಬಾರ, ಸೋಮು ಹುಲ್ಯಾಳ, ಹನುಮಂತ ಗಿಡ್ಡಪ್ಪನವರ ಹಾಗೂ ಪ್ರೇಮಾ ಬಾರಡ್ಡಿ ಅವರಿಗೆ ದಿ.ವಿ.ಎಚ್.ಅರಳಿಕಟ್ಟಿ ಕೃಷಿರತ್ನ ಪ್ರಶಸ್ತಿ ನೀಡಿ, ಸನ್ಮಾನಿಸಿ, ಗೌರವಿಸಲಾಯಿತು.;Resize=(128,128))