ಕನ್ನಡಪ್ರಭ ವಾರ್ತೆ ಮಡಿಕೇರಿ
ಮಡಿಕೇರಿ ವಿಧಾನಸಭಾ ಕ್ಷೇತ್ರದ ಅತ್ಯಂತ ಕುಗ್ರಾಮ ಎಂದೇ ಬಿಂಬಿತರಾಗಿರುವ ಗಾಳಿಬೀಡು ಪಂಚಾಯಿತಿ ವ್ಯಾಪ್ತಿಯ 2 ನೇ ಮೊಣ್ಣಂಗೇರಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿಗೆ ಕ್ಷೇತ್ರದ ಶಾಸಕ ಡಾ ಮಂತರ್ ಗೌಡ 35 ಲಕ್ಷ ರು. ಅನುದಾನ ನೀಡಿದ್ದಾರೆ.ಅತ್ಯಂತ ದುರ್ಗಮವಾದ ಹಾದಿಗಳನ್ನು ಹೊಂದಿರುವ 2 ನೇ ಮೊಣ್ಣಂಗೇರಿ ಗ್ರಾಮ 2018 ರ ಪ್ರಕೃತಿ ವಿಕೋಪದಲ್ಲಿ ಬಹು ಸಂಕಷ್ಟಕ್ಕೆ ಒಳಗಾದ ಪ್ರದೇಶವಾಗಿದ್ದು ಅಲ್ಲಿನ ಜನರ ಕೋರಿಕೆ ಮೇರೆಗೆ ಶಾಸಕರು 35 ಲಕ್ಷ ರೂ ವೆಚ್ಚದ ರಸ್ತೆ ಕಾಮಗಾರಿಗೆ ಶುಕ್ರವಾರ ಭೂಮಿ ಪೂಜೆ ಸಲ್ಲಿಸಿದರು.ಕ್ಷೇತ್ರದ ಪ್ರತಿಯೊಬ್ಬ ಪ್ರಜೆಯು ಸರ್ಕಾರದ ಸೌಲಭ್ಯ ಪಡೆಯಲು ಅರ್ಹನಾಗಿದ್ದು ಅದನ್ನು ಒದಗಿಸುವ ಕರ್ತವ್ಯ ಜನಪ್ರತಿನಿಧಿಯ ಜವಾಬ್ದಾರಿ ಎಂದು ಮಾತನಾಡಿದ ಡಾ. ಮಂತರ್ ಗೌಡ ಅವರು ಕುಗ್ರಾಮ ಎಂದು ಅಪಖ್ಯಾತಿ ಹೊಂದಿರುವ 2 ನೇ ಮೊಣ್ಣಂಗೇರಿ ಗ್ರಾಮವನ್ನು ಸುಗ್ರಾಮವಾಗಿಸಲು ಬದ್ದನಾಗಿದ್ದೇನೆ ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು. ಶೀಘ್ರದಲ್ಲಿಯೇ ಕಾಮಗಾರಿಯನ್ನು ಉತ್ತಮ ಗುಣಮಟ್ಟದಲ್ಲಿ ನಿರ್ವಹಿಸುವಂತೆ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ನಿರ್ದೇಶನ ನೀಡಿದರು. ಸದ್ಯದಲ್ಲಿಯೇ ಜಿಲ್ಲಾಧಿಕಾರಿಗಳು ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳನ್ನು ಗ್ರಾಮಕ್ಕೆ ಕರೆಸಿ ಜನಸ್ಪಂದನ ಸಭೆ ನಡೆಸುವುದಾಗಿ ಮಾಹಿತಿ ನೀಡಿದರು.ಗ್ರಾಮದ ಜನರು ಜಮೀನಿನ ಹಕ್ಕು ಪತ್ರ, ವಿದ್ಯುತ್, ಸುಸಜ್ಜಿತ ರಸ್ತೆ ಮುಂತಾದ ಮೂಲಭೂತ ಸೌಕರ್ಯದಿಂದ ವಂಚಿತರಾಗಿರುವ ಬಗ್ಗೆ ಪ್ರಮುಖರಾದ ಹೆಚ್.ಎ.ಹಂಸ ಮಾಹಿತಿ ನೀಡಿದರು.ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಮಾತನಾಡಿ 2021-22 ರ ಮಳೆಗಾಲದಲ್ಲಿ ಡಾ.ಮಂತರ್ ಗೌಡ ಅವರು ಈ ಭಾಗದಲ್ಲಿ ಮಳೆಯಿಂದ ಹಾನಿಯಾದಾಗ ಸ್ಥಳಕ್ಕೆ ಬಂದು ಜೆಸಿಬಿ ವ್ಯವಸ್ಥೆ ಮಾಡಿ ಟಾರ್ಪಾಲ್ ವಿತರಣೆ ಮಾಡಿ ಗ್ರಾಮಸ್ಥರಿಗೆ ನೆರವು ನೀಡಿದ್ದರು. ಈಗ ಶಾಸಕರಾಗಿ ಆಯ್ಕೆಯಾಗಿ ಸರ್ಕಾರದಿಂದ ಅನುದಾನ ಒದಗಿಸಿ ನುಡಿದಂತೆ ನಡೆದಿದ್ದಾರೆ ಎಂದು ಶ್ಲಾಘಿಸಿದರು.ಸ್ಥಳೀಯರಾದ ಮುದಿಯಾರ್ ಗಣೇಶ್ ಅವರು ಡಾ ಮಂತರ್ ಗೌಡ ಸಮಸ್ಯೆಗಳಿಗೆ ಸ್ಪಂದಿಸುವ ವಾಗ್ದಾನ ಮಾಡಿದ್ದು ಅದನ್ನು ಪ್ರಾಮಾಣಿಕವಾಗಿ ಪೂರ್ಣಗೊಳಿಸಲು ಮುಂದಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.ಮುಖ್ಯಸ್ಥರಾದ ಬಷೀರ್ ಅವರು ಶಾಸಕರು ತಮ್ಮ ಸಮಸ್ಯೆಗಳಿಗೆ ಸೂಕ್ತ ಸ್ಪಂದನೆ ನೀಡಿದ್ದು ಅದಕ್ಕಾಗಿ ಗ್ರಾಮದ ಜನತೆ ಅಭಾರಿಯಾಗಿದ್ದೇವೆ ಎಂದು ಹೇಳಿದರು.ಗ್ರಾಮಸ್ಥರು ಹತ್ತಾರು ಬೇಡಿಕೆಗಳನ್ನು ಶಾಸಕರಿಗೆ ಸಲ್ಲಿಸಿದರು. ಸುಭಾಶ್ ಆಳ್ವ, ಪಂಚಾಯಿತಿ ಮಾಜಿ ಅಧ್ಯಕ್ಷರಾದ ಪುಷ್ಪ, ಪ್ರಮುಖರಾದ ಕೋಚನ ಹರಿಪ್ರಸಾದ್, ಆರ್.ಪಿ.ಚಂದ್ರಶೇಖರ್, ಬಾಳಾಡಿ ಪ್ರತಾಪ್, ವಿ.ಜಿ.ಮೋಹನ್, ಕವನ್ ಕೊತ್ತೋಳಿ, ದಿನೇಶ್ ಶೆಟ್ಟಿ, ಅರ್ಜುನ್, ಸ್ಥಳೀಯರಾದ ಕುಡಿಯರ ಚೌರ, ದಮಯಂತಿ, ಭವಾನಿ, ಚೈತ್ರ, ಅಶ್ವಥ್, ಜನಾರ್ದನ, ಜಾನಕಿ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.