ಮರಣದ ನಂತರವೂ ಜೀವಿಸಿರುವ ಪುನೀತ್

| Published : Oct 29 2024, 12:57 AM IST

ಸಾರಾಂಶ

ಜನನವಾದ ಮೇಲೆ ಮರಣ ನಿಶ್ಚಿತ. ಮರಣಿಸಿದ ನಂತರವೂ ಜನರ ಮನಸ್ಸಿನಲ್ಲಿ ಜೀವಂತ ವಾಗಿರುವಂತೆ ಬದುಕಬೇಕು

ಕನ್ನಡಪ್ರಭ ವಾರ್ತೆ ಮೈಸೂರು

ಮರಣದ ನಂತರವೂ ಜೀವಿಸಿರುವ ಪುನೀತ್ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣ ಗೌಡ ಬಣ್ಣಿಸಿದರು.

ಮಲೆ ಮಹದೇಶ್ವರ ಸೇವಾ ಸಂಸ್ಥೆ ವತಿಯಿಂದ ವಿಜಯನಗರದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮೂರನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ವಿವಿಧ ಕ್ಷೇತ್ರದ ಸಾಧಕರಾದ ಸಂಗೀತ ಹಾಗೂ ವೈದ್ಯಕೀಯ ಕ್ಷೇತ್ರದ ಡಾ. ರೇಖಾ ಮನಃಶಾಂತಿ, ನಿರೂಪಣೆ- ಮಂಜು ಸಿ. ಶಂಕರ್, ಸಹಕಾರ- ರಿಷಿ ವಿಶ್ವಕರ್ಮ, ಸಂಘಟನೆ- ರೂಪಾ ಎಚ್. ಗೌಡ, ಕ್ರೀಡೆ- ಅಲೋಕ್ ಆರ್. ಜೈನ್, ಚಿತ್ರರಂಗ- ಬಿ. ಸ್ಮಿತಾ, ಸಂಘಟನೆ- ಕಾಡನಹಳ್ಳಿ ಡಿ. ಸ್ವಾಮಿಗೌಡ ಅವರಿಗೆ ಡಾ. ಪುನೀತ್ ರಾಜರತ್ನ ಪ್ರಶಸ್ತಿ ಪ್ರದಾನ ಮಾಡಿದ ನಂತರ ಅವರು ಮಾತನಾಡಿದರು.

ಜನನವಾದ ಮೇಲೆ ಮರಣ ನಿಶ್ಚಿತ. ಮರಣಿಸಿದ ನಂತರವೂ ಜನರ ಮನಸ್ಸಿನಲ್ಲಿ ಜೀವಂತ ವಾಗಿರುವಂತೆ ಬದುಕಬೇಕು. ಅಂಥ ಬದುಕು ಪುನೀತ್ರಾಜ್ ಕುಮಾರ್‌ ಅವರದ್ದಾಗಿತ್ತು ಎಂದು ಅವರು ಹೇಳಿದರು.

ಶ್ರೀಮಂತಿಕೆ, ಜೀವಿತಾವಧಿ ಮುಖ್ಯವಲ್ಲ. ಹೇಗೆ ಬದುಕಿದ್ದರು ಎಂಬುದೇ ಮುಖ್ಯ. ಸಂತ ಕಬೀರರು ಹೇಳಿದಂತೆ ನಾವು ಮರಣಿಸಿದಾಗ ಜನರಿಗೆ ದುಃಖವಾದರೆ ಅದು ಸಾರ್ಥಕ ಬದುಕಾಗುತ್ತದೆ. ಕೇವಲ 46 ವರ್ಷ ಬದುಕಿದರೂ ಪುನೀತ್ ಸಾವಿರಾರು ಜನರಿಗೆ ಆಸರೆಯಾಗಿದ್ದರು. ಅನೇಕ ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ಧನ ಸಹಾಯ ಮಾಡಿದ್ದರು. ಪ್ರಚಾರ ಬಯಸದೇ ಕರ್ಣನ ರೀತಿಯಲ್ಲಿ ಕೊಡುಗೈ ದಾನಿಯಾಗಿದ್ದರು. ಸಂಬಂಧ ವಿಲ್ಲದವರು ಕೂಡ ಅವರ ಸಾವಿಗೆ ದುಃಖಪಟ್ಟಿದ್ದಾರೆ. ಶಾರೀರಿಕವಾಗಿ ನಮ್ಮನ್ನಗಲಿದರೂ ಅವರಿಗೆ ಸಾವಿಲ್ಲ, ಅವರು ಅಜರಾಮರ ಎಂದು ಅವರು ತಿಳಿಸಿದರು.

ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್ ಮಾತನಾಡಿ, ಪುನೀತ್ ರಾಜಕುಮಾರ್ ಅದ್ಭುತ ನಟ. ಬಾಲ್ಯದಿಂದಲೇ ನಟನೆ ಯಲ್ಲಿ ತೊಡಗಿಕೊಂಡಿದ್ದ ಅವರ ಅಕಾಲಿಕ ನಿಧನದಿಂದ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಅಂತಹ ಅಭಿಮಾನದ ವಿದಾಯ ಎಲ್ಲರಿಗೂ ಸಿಗುವುದಿಲ್ಲ ಎಂದು ಹೇಳಿದರು.

ಹಿರಿಯ ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ ಮಾತನಾಡಿ,

ಪುನಿತ್ ಸಮಾಜ ಸೇವೆಯಲ್ಲೂ ತೊಡಗಿದ್ದರು. ಅವರ ಅಭಿಮಾನಿಗಳು ಅವರಂತೆ ಒಳ್ಳೆಯ ಕೆಲಸ ಮಾಡುವ ಸಂಕಲ್ಪ ಕೈಗೊಳ್ಳಬೇಕು ಎಂದರು.

ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಸಮಾಜ ಸೇವಕರಾದ ನಟರಾಜ್, ಮಯೂರ ಕನ್ನಡ ಯುವಕರ ಬಳಗದ ಅಧ್ಯಕ್ಷ ಜಿ. ರಾಘವೇಂದ್ರ, ಮಲೆ ಮಹದೇಶ್ವರ ಸೇವಾ ಸಂಸ್ಥೆ ಸಂಸ್ಥೆಯ ಅಧ್ಯಕ್ಷ ಮಹಾನ್ ಶ್ರೇಯಸ್, ರಾಕೇಶ್ ಇದ್ದರು.

-- ಬಾಕ್ಸ್-- -- ಮಾನವೀಯ ಕೆಲಸ--ಮೈಸೂರು ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆ ಅಧ್ಯಕ್ಷ ಕೆ.ಬಿ. ಲಿಂಗರಾಜು ಮಾತನಾಡಿ, ನಟರಾಗಿ ಮಾತ್ರವಲ್ಲದೆ, ಸಮಾಜಮುಖಿಯಾಗಿ ಒಳ್ಳೆಯ ಮಾನವೀಯ ಕೆಲಸಗಳನ್ನು ಮಾಡುವ ಮೂಲಕ ಕನ್ನಡಿಗರ ಮೆಚ್ಚುಗೆ ಪಡೆದಿದ್ದರು. ಅವರು ಅಭಿಮಾನಿಗಳಿಗೆ ಆರಾಧ್ಯ ದೈವವೂ ಆಗಿದ್ದಾರೆ. ಅವರು ಇಲ್ಲದಿದ್ದರೂ ಅವರು ಮಾಡಿರುವ ಸಮಾಜಮುಖಿ ಕೆಲಸ ಇಂದಿಗೂ ಜೀವಂತಾಗಿದೆ ಎಂದರು.