ಕನ್ನಡಪ್ರಭ ವಾರ್ತೆ ಮಳವಳ್ಳಿ

ಕರ್ನಾಟಕ ರತ್ನ ಡಾ.ರಾಜ್‌ಕುಮಾರ್ ಅವರು ಪ್ರತಿಯೊಬ್ಬರ ಮನಸ್ಸಿನಲ್ಲಿ ಇಂದಿಗೂ ಜೀವಂತವಾಗಿದ್ದಾರೆ ಎಂಬುದಕ್ಕೆ ಅವರು ನಟಿಸಿರುವ ಚಲನಚಿತ್ರಗಳೇ ಸಾಕ್ಷಿ ಎಂದು ಡಾ.ರಾಜ್‌ಕುಮಾರ್ ಕಲಾ ಸಂಘದ ಅಧ್ಯಕ್ಷ ದೊಡ್ಡಯ್ಯ ತಿಳಿಸಿದರು.ಪಟ್ಟಣದ ಗಂಗಾಮತ ಬೀದಿಯ ಡಾ.ರಾಜ್‌ಕುಮಾರ್ ಕಲಾ ಸಂಘ ಕಚೇರಿ ಹಾಗೂ ರಾಶಿರಾಪು ಸೇನಾ ಸಮಿತಿ ವತಿಯಿಂದ ಅನಂತ್‌ರಾಂ ವೃತ್ತದಲ್ಲಿ ನಡೆದ ಡಾ.ರಾಜ್‌ಕುಮಾರ್‌ ಅವರ 97ನೇ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.

ಡಾ.ರಾಜ್‌ಕುಮಾರ್ ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಪ್ರತಿಯೊಬ್ಬರ ಜೀವನಕ್ಕೆ ಬೇಕಾದ ಚಿತ್ರಗಳನ್ನು ನೀಡಿ ದಾರಿದೀಪವಾಗುವ ಜೊತೆಗೆ ಮಾನಸಿಕವಾಗಿ ಎಲ್ಲರ ಮನಸ್ಸಿನಲ್ಲಿಯೂ ಜೀವಂತವಾಗಿದ್ದಾರೆ ಎಂದರು.ಡಾ.ರಾಜ್‌ಕುಮಾರ್ ನಟಿಸಿರುವ ಚಲನಚಿತ್ರಗಳು ಇಂದಿನ ಯುವ ಜನರು ಮತ್ತು ರೈತರಿಗೆ ಮಾದರಿಯಾಗಿವೆ. ಪ್ರತಿಯೊಂದು ಪಾತ್ರಗಳಲ್ಲಿಯೂ ಜೀವ ತುಂಬಿ ನಟಿಸಿದ್ದರಿಂದ ಎಲ್ಲರಿಗೂ ಅಚ್ಚುಮೆಚ್ಚಿನ ನಾಯಕರಾಗಿದ್ದಾರೆ. ದೇಶದಲ್ಲಿಯೇ ಎಲ್ಲಾ ಪಾತ್ರಗಳನ್ನು ನಟಿಸುವ ಸಾಮಾರ್ಥ್ಯವನ್ನು ರಾಜ್‌ಕುಮಾರ್ ಅವರು ಹೊಂದಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.ಸಿನಿಮಾ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ಡಾ.ರಾಜ್‌ಕುಮಾರ್ ಅವರ ಹೆಸರು ಶಾಶ್ವತವಾಗಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ಭಾರತ ರತ್ನ ಸೇರಿದಂತೆ ದೊಡ್ಡ ಕೊಡುಗೆಯನ್ನು ನೀಡುವ ಮೂಲಕ ಗೌರವ ಸಲ್ಲಿಸಬೇಕೆಂದು ಹೇಳಿದರು.ಹುಟ್ಟುಹಬ್ಬ ಅಂಗವಾಗಿ ಗಣ್ಯರು ಡಾ.ರಾಜ್‌ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪರ್ಚಣೆ ನೆರೆವೇರಿಸಿ ಸಾರ್ವಜನಿಕರಿಗೆ ಸಿಹಿ ವಿತರಿಸಿದರು. ಕಾರ್ಯಕ್ರಮದಲ್ಲಿ ರಾಶಿರಾಪು ಸೇನಾಸಮಿತಿ ಕೃಷ್ಣ, ಎಂ.ವಿ ಸೋಮಶೇಖರ್, ಶಿವರಾಜ್, ಎಂ.ಎಚ್. ಶ್ರೀಕಂಠಯ್ಯ, ಜಗ್ಗು, ನಾಗರಾಜು, ಗೊವಿಂದರಾಜು, ಮಂಜುನಾಥ್, ಚನ್ನಗಿರಿ, ಚಿಕ್ಕ ಯಜಮಾನ್ ವೆಂಕಟೇಶ್ ಸೇರಿದಂತೆ ಇತರರು ಇದ್ದರು.