ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಕನ್ನಡದಲ್ಲಿ ಹಿಂದಿ ಬಗ್ಗೆ ತಿರಸ್ಕಾರ ಇದೆ. ಅದು ಹೋಗಬೇಕಾದರೆ ಕರ್ನಾಟಕದಲ್ಲಿ ಇರುವ ಹಿಂದಿ ಭಾಷಿಕರು ಕನ್ನಡ ಕಲಿಯಬೇಕು. ಸರ್ಕಾರ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದು ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ ತಿಳಿಸಿದರು.ನಗರದ ಕೇಂದ್ರೀಯ ಹಿಂದಿ ಸಂಸ್ಥಾನವು ಭಾನುವಾರ ಸಂಜೆ ಆಯೋಜಿಸಿದ್ದ ಗೋಸ್ವಾಮಿ ತುಳಸಿದಾಸ ಜಯಂತಿ ಮತ್ತು ಗೋಸ್ವಾಮಿ ತುಳಸಿದಾಸ ಸಾರಸ್ವತ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸ್ಥಳೀಯ ಭಾಷೆ ಬೆಳೆಯಬೇಕಾದರೆ ಸ್ಥಳೀಯ ಭಾಷೆಯ ಮೂಲಕವೇ ಜ್ಞಾನ ಸೃಷ್ಟಿ ಆದಾಗ ಮಾತ್ರ ಆ ಭಾಷೆ ಬೆಳೆಯಲು ಸಾಧ್ಯ. ಮೋಟಾರ್, ಬಸ್ ಎಂಬೆಲ್ಲಾ ಪದಗಳು ನಮ್ಮ ಭಾಷೆಯಲ್ಲೇ ಬೆಳೆಯಬೇಕು ಎಂದರು.ವಿಜ್ಞಾನವನ್ನು ಹಿಂದಿ ಸೇರಿದಂತೆ ಪ್ರಾದೇಶಿಕ ಭಾಷೆಯಲ್ಲಿ ತರಬೇಕು. ಹಿಂದಿಅಷ್ಟು ದೊಡ್ಡ ಭಾಷೆ ಆಗಿದ್ದರೂ ಇಂಗ್ಲಿಷ್ ಗೆ ಸವಾಲು ಒಡ್ಡಲು ಆಗಿಲ್ಲ. ಇಂಗ್ಲಿಷ್ ಒಂದು ಜಾಗತಿಕ ಭಾಷೆಯಾಗಿ ಬೆಳೆದು ಹೋಗಿದೆ. ಶಿಕ್ಷಣದಲ್ಲಿ ಹಿಂದಿ ಮಾಧ್ಯಮ ಸಾಧ್ಯವಿಲ್ಲ. ಮಾತೃ ಭಾಷೆಯಲ್ಲಿಯೇ ಶಿಕ್ಷಣ ನೀಡಬೇಕು ಎನ್ನುತ್ತಾರೆ. ಆದರೆ ಎಂಜಿನಿಯರಿಂಗ್, ಡಾಕ್ಟರ್ ಆಗಬೇಕು ಎಂದರೆ ಪ್ರಾದೇಶಿಕ ಭಾಷೆಯಿಂದ ಸಾಧ್ಯವಿಲ್ಲ. ಹಳ್ಳಿಗಳಲ್ಲಿಯೂ ಇಂಗ್ಲಿಷ್ ವ್ಯಾಮೋಹ ಹೆಚ್ಚಾಗಿದೆ. ಸರ್ಕಾರ ಕೂಡ ಹಾಗೆಯೇ ಹೇಳುತ್ತಿದೆ ಎಂದರು.
ಉತ್ತರ ಭಾರತದಲ್ಲಿ ಹಿಂದಿ ಹೆಚ್ಚು ಬಳಕೆಯಲ್ಲಿದೆ. ಹಿಂದಿಯನ್ನು ಒಂದು ಭಾಷೆಯಾಗಿ ಮಾಡಿದರೆ ಬೆಳೆಯುತ್ತದೆ. ಕನ್ನಡಕ್ಕೆ ಅನ್ವಯಿಸುವ ನಿಯಮ ಹಿಂದಿಗೂ ಅನ್ವಯಿಸುತ್ತದೆ. ಹೀಗಾಗಿ ಕನ್ನಡ- ಹಿಂದಿ ಮಾಧ್ಯಮವನ್ನು ನಾವು ಹೇರಲು ಆಗುವುದಿಲ್ಲ ಎಂದರು.ಕನ್ನಡದಲ್ಲಿ ನನ್ನ ಕೆಲವು ಕಾದಂಬರಿಗಳು ಎಪ್ಪತ್ತು ಆವೃತ್ತಿ ಬಂದಿವೆ. ಕಾರಣ ನಮ್ಮ ಪ್ರಕಾಶಕರು ಪ್ರಾಮಾಣಿಕವಾಗಿ ಲೆಕ್ಕ ಕೊಡುತ್ತಿದ್ದಾರೆ. ಆದರೆ ಹಿಂದಿ ಒಳಗೆ ಈ ವ್ಯವಸ್ಥೆ ಇಲ್ಲ. 15ಕ್ಕಿಂತ ಹೆಚ್ಚು ಆವೃತ್ತಿ ಆಗಿದೆ. ಮೊದಲ ಆವೃತ್ತಿಗೆ ಹಣ ಕೊಟ್ಟವರು ನಂತರ ಹಣ ಕೊಡಲೇ ಇಲ್ಲ. ಹಿಂದಿ ಪ್ರಕಾಶಕರು ಸತ್ಯ ಮುಚ್ವಿಡುತ್ತಿದ್ದಾರೆ. ಲಕ್ಷ ಪುಸ್ತಕ ಪ್ರಕಟ ಮಾಡಿದರೂ ಲೇಖಕರಿಗೆ ಲೆಕ್ಕ ಕೊಡುತ್ತಿಲ್ಲ ಎಂದು ಅವರು ದೂರಿದರು.
ಪುಸ್ತಕ ಮುದ್ರಣಕ್ಕೆ ಇತ್ತೀಚೆಗೆ ಕಾಗದವೇ ಸಿಗುತ್ತಿಲ್ಲ. ಮಾರ್ವಾಡಿಗಳು ಕಾಳಸಂತೆಯಲ್ಲಿ ಪುಸ್ತಕ ಕಾಯ್ದಿಟ್ಟು ನಂತರ ಇವರು ಬೆಲೆ ಏರಿಸುತ್ತಾರೆ ಎಂದು ಅವರು ದೂರಿದರು.ಲೇಖಕ ಡಾ. ಪ್ರಧಾನ ಗುರುದತ್ತ, ಸಂಸ್ಕೃತ ವಿವಿ ಕುಲಪತಿ ಡಾ. ಅಹಲ್ಯ ಶರ್ಮ, ಎನ್.ಸಿ.ಇ.ಆರ್.ಟಿಯ ಪ್ರೊ. ರಾಜೇಶ್ಸರ್ಕಾರ್ಸಹಾ, ಶಾರದಾ ವಿಲಾಸ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ. ಹನುಮಂತಾಚಾರ್ಜೋಷಿ, ಮೈಸೂರು ವಿವಿ ಡಾ. ಪ್ರವೀಣ್ಮೆಳಲಿ ಅತಿಥಿಯಾಗಿ ಪಾಲ್ಗೊಂಡಿದ್ದರು. ಕೇಂದ್ರೀಯ ಹಿಂದಿ ಶಿಕ್ಷಣ ಮಂಡಲದ ಉಪಾಧ್ಯಕ್ಷ ಪ್ರೊ. ಸುರೇಂದ್ರ ದುಬೆ ಅಧ್ಯಕ್ಷತೆ ವಹಿಸಿದ್ದರು. ಪ್ರಾದೇಶಿಕ ನಿರ್ದೇಶಕ ಡಾ. ಯೋಗೇಂದ್ರ ಮಿಶ್ರ ಇದ್ದರು.