ಕನ್ನಡಪ್ರಭ ವಾರ್ತೆ ಮೈಸೂರುಪುಸ್ತಕ ಸದಭಿರುಚಿಯ ಮೂಲಕ ಎಲ್ಲರೂ ಜ್ಞಾನಿಗಳಾಗೋಣ ಎಂದು ಖ್ಯಾತ ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಆಶಿಸಿದರುಕನ್ನಡ ಪುಸ್ತಕ ಪ್ರಾಧಿಕಾರವು ವಿಜಯನಗರದ ಕೃಷಿ ವಿಜ್ಞಾನಿ ಡಾ.ವಸಂತಕುಮಾರ್‌ ತಿಮಕಾಪುರ ಅವರ ನಿವಾಸದಲ್ಲಿ ಶನಿವಾರ ಏರ್ಪಡಿಸಿದ್ದ ''''''''ಮನೆಗೊಂದು ಗ್ರಂಥಾಲಯ'''''''' ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಹಿಂದೆ ಪ್ರೊ.ಎಂ.ಡಿ. ನಂಜುಂಡಸ್ವಾಮಿ, ಪಿ. ಲಂಕೇಶ್‌, ಪೂರ್ಣಚಂದ್ರ ತೇಜಸ್ವಿ ಮೊದಲಾದವರು ಒಂದೆಡೆ ಸೇರಿದಾಗ ಸಾಹಿತ್ಯದ ಬಗ್ಗೆ ಚರ್ಚೆಯಾಗುತ್ತಿತ್ತು ಎಂದು ಸ್ಮರಿಸಿದರು.ಈಗ ಕನ್ನಡ ಪುಸ್ತಕ ಪ್ರಾಧಿಕಾರ ಮನೆಗೊಂದು ಗ್ರಂಥಾಲಯದ ಮೂಲಕ ಸಾಹಿತ್ಯದ ಬಗ್ಗೆ, ಪುಸ್ತಕಗಳ ಬಗ್ಗೆ ಚರ್ಚೆಯಾಗುವಂತೆ ಮಾಡಿದೆ ಎಂದು ಅವರು ಶ್ಲಾಘಿಸಿದರು. ಈ ರೀತಿ ಸಮಾನಮನಸ್ಕರು, ಸದಭಿರುಚಿ ಇರುವವರು, ಹಿರಿಯ ನಾಗರಿಕರು ಒಂದೆಡೆ ಸೇರಿ ಸಾಹಿತ್ಯ ಬಗ್ಗೆ ಚರ್ಚಿಸಬೇಕು ಎಂದು ಅವರು ಸಲಹೆ ಮಾಡಿದರು.''''''''ಮನುಷ್ಯಜಾತಿ ತಾನೊಂದೆ ವಲಂ'''''''' ಎಂಬ ಮಾತಿನ ಬಗ್ಗೆ ಕೇರಳ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಉತ್ತಮ ಅಭಿಪ್ರಾಯವಿದೆ. ಅದು ಪಾಲನೆ ಆಗಬೇಕು. ಬಸವ, ಅಲ್ಲಮಪ್ರಭು, ಅಕ್ಕಮಹಾದೇವಿ ಅವರಂಥ ವಚನಕಾರರು ಹೇಳಿದ್ದು ಇದನ್ನೇ ಎಂದರು.ಮಹಾರಾಜ ಕಾಲೇಜು ಸಮಾಜಶಾಸ್ತ್ರ ನಿವೃತ್ತ ಪ್ರಾಧ್ಯಾಪಕಿ ಎಚ್‌.ಎಂ. ವಸಂತಮ್ಮ ಮಾತನಾಡಿ, ಪ್ರತಿಯೊಬ್ಬರಲ್ಲೂ ಪುಸ್ತಕ ಪ್ರೀತಿಯನ್ನು ಬೆಳೆಸೋಣ. ಯುವಪೀಳಿಗೆ ಪುಸ್ತಕ ಓದುವಂತೆ ಮಾಡೋಣ ಎಂದರು.ಡಾ.ವಸಂತಕುಮಾರ್‌ ತಿಮಕಾಪುರ ಮಾತನಾಡಿ, ನನ್ನನ್ನು ಪುಸ್ತಕ ಪ್ರೀತಿಯೇ ಇಲ್ಲಿಯವರೆಗೆ ಕರೆತಂದು ನಿಲ್ಲಿಸಿದೆ. ಇದರಿಂದಾಗಿಯೇ ಕೃಷಿ ಸಾಹಿತ್ಯದ ಬಗ್ಗೆ ಪುಸ್ತಕಗಳನ್ನು ಬರೆಯಲು ಸಾಧ್ಯವಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಮಾತನಾಡಿ, ಸಂವಿಧಾನಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಪುಸ್ತಕಗಳು ಬದುಕುವ ದಿಕ್ಕು ತೋರಿಸುತ್ತವೆ ಎಂದು ಹೇಳಿದ್ದರು. ಖಂಡಿತಾ ಪುಸ್ತಕಗಳು ಜನರಜೀವನದ ಮೇಲೆ ಪ್ರಭಾವ ಬೀರುತ್ತವೆ ಎಂದರು.ಮೊಬೈಲ್‌ ಬಂದ ನಂತರ ಹಸ್ತ ಖಾಲಿಯಾಗಿತ್ತು. ಈ ಕೊರತೆ ನೀಗಿಸಲು ''''''''ಮಸ್ತಕ''''''''ಕ್ಕೆ ಕೆಲಸ ಕೊಡಲು ಮನೆಗೊಂದು ಗ್ರಂಥಾಲಯ ಯೋಜನೆ ರೂಪಿಸಿದ್ದೇವೆ ಎಂದರು.''''''''ನನ್ನ ಪುಸ್ತಕ ನನ್ನ ಹೆಮ್ಮೆ '''''''' ಎಂಬಂತೆ ಪುಸ್ತಕ ಪ್ರೀತಿಯನ್ನು ಗೌರವಿಸಲು ಪ್ರಾಧಿಕಾರದ ವತಿಯಿಂದ ಇದೇ ಮೊದಲ ಬಾರಿಗೆ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲೂ ತಲಾ ಓರ್ವ ಓದುಗರಿಗೆ ಈ ವರ್ಷದಿಂದಲೇ ಪ್ರಶಸ್ತಿ ನೀಡಲಾಗುವುದು ಎಂದು ಅವರು ಹೇಳಿದರು.ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾನ ಜಾಗೃತ ಸಮಿತಿ ಸಂಚಾಲಕ ಎಂ. ಚಂದ್ರಶೇಖರ್‌ ಪ್ರಾಸ್ತಾವಿಕ ಭಾಷಣ ಮಾಡಿದರು. ಸದಸ್ಯ ದೇವರಾಜ ಪಿ. ಚಿಕ್ಕಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ಸದಸ್ಯ ಮೈ.ನಾ. ಲೋಕೇಶ್‌ ವಂದಿಸಿದರು. ಮಾಜಿ ಮೇಯರ್‌ ಮೋದಾಮಣಿ ವಚನ ಗಾಯನ ಪ್ರಸ್ತುತಪಡಿಸಿದರು. ಡಾ.ಎಚ್.ಎಲ್‌. ವಸಂತಕುಮಾರ್‌, ಪ್ರೊ.ಆರ್‌.ಎನ್‌. ಪದ್ಮನಾಭ, ಡಾ.ಮಹದೇವಸ್ವಾಮಿ, ಪ್ರೊ.ಪ್ರಭಾಕರ್‌, ಸಿ.ವಿ. ಗುಪ್ತ ಸೇರಿದಂತೆ ಹಲವಾರು ಮಂದಿ ಪಾಲ್ಗೊಂಡಿದ್ದರು.