ಹುಬ್ಬಳ್ಳಿ:
ನಗರದ ಜಯಪ್ರಿಯಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ವೆಂಕಟರಾಮ ಕಟ್ಟಿ ಅವರಿಗೆ ಈಚೆಗೆ ಭಾರತೀಯ ವೈದ್ಯಕೀಯ ಸಂಸ್ಥೆ ವತಿಯಿಂದ ರಾಷ್ಟ್ರಿಯ ವೈದ್ಯ ದಿನ-2026 ಅಂಗವಾಗಿ ದೆಹಲಿಯಲ್ಲಿ ಕೇಂದ್ರ ಸಚಿವ ರಾಜನಾಥ್ಸಿಂಗ್ ರಾಷ್ಟ್ರೀಯ ಸಮುದಾಯ ಸೇವಾ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ ಎಂದು ಐಎಂಎ ಅಧ್ಯಕ್ಷ ಡಾ. ಬಸವರಾಜ ಸಜ್ಜನ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ಜಯಪ್ರಿಯ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ. ವೆಂಕಟರಾಮ ಅವರು 11 ಗ್ರಾಮೀಣ ಭಾಗದಲ್ಲಿ ದೃಷ್ಟಿಕೇಂದ್ರಗಳ ಸ್ಥಾಪಿಸಿದ್ದು, ಈ ವರೆಗೆ 90 ಸಾವಿರ ಜನರಿಗೆ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ, 300 ಚಿಕ್ಕಮಕ್ಕಳಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಇವರ ಅಪಾರವಾದ ಸೇವೆ ಗುರುತಿಸಿ ಭಾರತೀಯ ವೈದ್ಯಕೀಯ ಸಂಸ್ಥೆ ಪ್ರಶಸ್ತಿ ನೀಡಿದೆ. ಈ ಪ್ರಶಸ್ತಿ ಪಡೆದ ಕರ್ನಾಟಕದ ಮೊದಲಿಗರಾಗಿದ್ದಾರೆ ಎಂದರು.
ಪ್ರಶಸ್ತಿ ಪುರಸ್ಕೃತ ಡಾ. ವೆಂಕಟರಾಮ ಕಟ್ಟಿ ಮಾತನಾಡಿ, ಈ ವರೆಗೆ ನನ್ನ ನೇತೃತ್ವದಲ್ಲಿ 12 ಲಕ್ಷಕ್ಕಿಂತ ಹೆಚ್ಚು ಜನ ಉಚಿತ ಕಣ್ಣಿನ ತಪಾಸಣೆ ಹಾಗೂ 90 ಸಾವಿರ ಜನರ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಪ್ರಶಸ್ತಿ ಲಭಿಸಿದ್ದು, ಸಂತಸ ತಂದಿದೆ. ಜಯಪ್ರಿಯಾ ಕಣ್ಣಿನ ಆಸ್ಪತ್ರೆ ಯಾರು ಸಹ ದೃಷ್ಟಿ ಹೀನರಾಗಿ ಇರಬಾರದು ಎಂಬ ಉದ್ದೇಶದಿಂದ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಈ ವರೆಗೆ 2000ಕ್ಕೂ ಹೆಚ್ಚು ಶಿಬಿರ ಆಯೋಜಿಸಿದ್ದೇವೆ. 2 ಲಕ್ಷ ಜನರಿಗೆ ಉಚಿತ ಶಸ್ತ್ರಚಿಕಿತ್ಸೆ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.ಜಯಪ್ರಿಯಾ ವೈದ್ಯಕೀಯ ಪ್ರತಿಷ್ಠಾನವು 2007ರಿಂದ ಉತ್ತರ ಕರ್ನಾಟಕದ ಗ್ರಾಮೀಣ, ಗುಡ್ಡಗಾಡು, ಕೊಳಗೇರಿ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಸಮಗ್ರ ಸಮುದಾಯ ಕಣ್ಣಿನ ಆರೈಕೆ ಮತ್ತು ಕುರುಡುತನ ತಡೆಗಟ್ಟುವಿಕೆ ಸೇವೆ ಒದಗಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಅಗತ್ಯವಿರುವ ರೋಗಿಗಳಿಗೆ 7 ಸಾವಿರಕ್ಕೂ ಹೆಚ್ಚು ಕನ್ನಡಕ ವಿತರಿಸಿದ್ದು 12 ಸಾವಿರಕ್ಕೂ ಹೆಚ್ಚು ವಾಹನ ಚಾಲಕರು ರಸ್ತೆ ಸುರಕ್ಷತೆ ಉತ್ತೇಜಿಸಲು ಮತ್ತು ಕಳಪೆ ದೃಷ್ಟಿಗೆ ಸಂಬಂಧಿಸಿದ ಅಪಘಾತ ತಡೆಗಟ್ಟಲು ದೃಷ್ಟಿ ಸುರಕ್ಷತಾ ತಪಾಸಣೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಡಾ. ಅಂಜನಾ ದೇಸಾಯಿ, ಡಾ. ಪ್ರಿಯಾ ಕಟ್ಟಿ, ಮದನ ಕುಲಕರ್ಣಿ ಸೇರಿದಂತೆ ಹಲವರಿದ್ದರು.