ನಾಟಕ ಒಂದು ಪರಿಣಾಮಕಾರಿ ಕಲಾ ಮಾಧ್ಯಮ: ಡಾ. ಮಂಜುನಾಥ ಕೋಟ್ಯಾನ್

| Published : Mar 24 2024, 01:32 AM IST

ಸಾರಾಂಶ

ರಂಗಸಂಸ್ಕೃತಿಯ ದಶಮಾನೋತ್ಸವ ಪ್ರಯುಕ್ತ ಹಮ್ಮಿಕೊಂಡ ರಾಜ್ಯಮಟ್ಟದ ನಾಟಕೋತ್ಸವ ‘ದಶರಂಗ ಸಂಭ್ರಮ’ದ ಎರಡನೇ ದಿನದ ಕಾರ್ಯಕ್ರಮವನ್ನು ಶ್ರೀ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ್ ಕೋಟ್ಯಾನ್ ಉದ್ಘಾಟಿಸಿದರು. ಬಳಿಕ ನಾಟಕ ಹೇಗೆ ಪರಿಣಾಮಕಾರಿ ಎಂಬುವುದನ್ನು ತಿಳಿಸಿದರು.

ಕನ್ನಡಪ್ರಭ ವಾರ್ತೆ ಕಾರ್ಕಳಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ನಾಟಕ ಪರಂಪರೆಯು ನಮ್ಮ ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳಸುವ ಪರಿಣಾಮಕಾರಿ ಮಾಧ್ಯಮವಾಗಿದೆ ಎಂದು ಶ್ರೀ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ್ ಕೋಟ್ಯಾನ್ ಅಭಿಪ್ರಾಯಪಟ್ಟರು.

ಅವರು ರಂಗಸಂಸ್ಕೃತಿಯ ದಶಮಾನೋತ್ಸವ ಪ್ರಯುಕ್ತ ಹಮ್ಮಿಕೊಂಡ ರಾಜ್ಯಮಟ್ಟದ ನಾಟಕೋತ್ಸವ ‘ದಶರಂಗ ಸಂಭ್ರಮ’ದ ಎರಡನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆಧುನಿಕ ಕನ್ನಡ ನಾಟಕ ಪರಂಪರೆಯು ಶ್ರೇಷ್ಠ ಕಾವ್ಯಗಳನ್ನು ನಾಟಕವನ್ನಾಗಿಸುವ ವಿಶೇಷವಾದ ಪರಿಕಲ್ಪನೆಯನ್ನು ಹೊಂದಿದೆ. ನಾಡಿನ ಕಲಾ ರಸಿಕರಿಗೆ ಸದಭಿರುಚಿಯ ರಸಾಸ್ವಾದನೆಯನ್ನು ನೀಡಿದೆ. ರಂಗಭೂಮಿ ಪರಿಕಲ್ಪನೆಯು ಆರಂಭಕಾಲದಿಂದ ತೊಡಗಿ ಇಂದಿನ ವರೆಗೆ ತನ್ನದೇ ಆದ ವೈಶಿಷ್ಟ್ಯತೆಯನ್ನು ಉಳಿಸಿಕೊಂಡಿದೆ ಎಂದರು.

ನಾಟಕವು ವಿಶೇಷವಾದ ಒಂದು ಪ್ರೇಕ್ಷಕ ವರ್ಗವನ್ನು ಹೊಂದಿದೆ. ನಾಟಕದ ಎಲ್ಲ ಆಯಾಮಗಳು ಸಹೃದಯರ ಮನವನ್ನು ಗೆದ್ದಿದೆ. ಹಾಗೆಯೇ ನಾಟಕವನ್ನು ನೋಡುವಂತಹ ಸಹೃದಯಿಯು ಕೂಡ ನಾಟಕದೊಳಗೆಯೇ ತಾನು ಕೂಡ ಒಬ್ಬ ಪಾತ್ರಧಾರಿಯಾಗಿ ಗುರುತಿಸಿಕೊಳ್ಳುವಂತಹ ತೊಡಗಿಸಿಕೊಳ್ಳುವಿಕೆಯು ಪ್ರೇಕ್ಷಕರಿಗೆ ಇದೆ. ಇಂತಹ ಒಳ್ಳೆಯ ಕಲಾ ರಸಿಕತೆಯನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ರಂಗಸಂಸ್ಕೃತಿಯು ಕಾರ್ಕಳದ ಪರಿಸರದಲ್ಲಿ ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ನಾಟಕೊತ್ಸವವನ್ನು ಆಯೋಜಿಸಿಕೊಂಡು ಬರುತ್ತಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಂಗಸಂಸ್ಕೃತಿಯ ಅಧ್ಯಕ್ಷ ಎಸ್.ನಿತ್ಯಾನಂದ ಪೈ ವಹಿಸಿದ್ದರು. ಯಕ್ಷಕಲಾ ರಂಗದ ಅಧ್ಯಕ್ಷ ವಿಜಯ ಶೆಟ್ಟಿ, ನಿವೃತ್ತ ಮುಖ್ಯಶಿಕ್ಷಕಿ ಹರ್ಷಿಣಿ ಕೆ., ರಂಗಸಂಸ್ಕೃತಿಯ ಸಹ ಕಾರ್ಯದರ್ಶಿ ರಾಮಚಂದ್ರ ನೆಲ್ಲಿಕಾರ್, ಸಂಚಾಲಕರಾದ ಪ್ರಭಾಕರ ಶೆಟ್ಟಿ ಕೊಂಡಳ್ಳಿ, ಶಿವ ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು. ನಾಗೇಶ್ ನಲ್ಲೂರು ನಿರೂಪಿಸಿದರು. ಗಣೇಶ್ ಜಾಲ್ಸೂರು ವಂದಿಸಿದರು.ಆರಂಭದಲ್ಲಿ ‘ವಿಹಾನಾ’ ಮೆಲೋಡೀಸ್ ತಂಡದ ನಿರ್ದೇಶಕಿ, ಗಾಯಕಿ ರಮ್ಯಾ ಸುಧೀಂದ್ರ ಮತ್ತು ಗಾಯಕ ಶಿವಕುಮಾರ್ ಅವರು ಕನ್ನಡ ಚಿತ್ರರಂಗದ ಹಳೆಯ ಹಾಡುಗಳನ್ನು ಹಾಡಿ ರಂಜಿಸಿದರು.ಉದ್ಘಾಟನಾ ಕಾರ್ಯಕ್ರಮದ ನಂತರ ‘ನಟನ ಮೈಸೂರು’ ತಂಡ ಅಭಿನಯಿಸಿದ ಡಾ. ಶ್ರೀಪಾದ ಭಟ್ ನಿರ್ದೇಶನದ ‘ಕಣಿವೆಯ ಹಾಡು’ ಪ್ರದರ್ಶನಗೊಂಡು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.