ಸಂಡೂರು: ತಾಲೂಕಿನ ವಿಠಲಾಪುರದಲ್ಲಿ ಶುಕ್ರವಾರ ಜರುಗಿದ ರೇವಣಸಿದ್ದೇಶ್ವರ ಜಾತ್ರೆ, ವಿಶ್ವ ರಂಗಭೂಮಿ ದಿನಾಚರಣೆ ಪ್ರಯುಕ್ತ ಸ್ಥಳೀಯ ಹಂಪಿ ವಿರೂಪಾಕ್ಷ ಬಯಲಾಟ ನಾಟಕ ಪ್ರೋತ್ಸಾಹ ಟ್ರಸ್ಟ್ ವತಿಯಿಂದ ಸಂಗೀತ, ಸಾಂಸ್ಕೃತಿಕ ಹಾಗೂ ಗೂಳ್ಯದ ಗಾದಿಲಿಂಗಪ್ಪ ತಾತ ಎಂಬ ಶರಣರ ಭಕ್ತಿಪ್ರಧಾನ ನಾಟಕ ಪ್ರದರ್ಶಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಎಂ.ತಿರುಮಲ ಮಾತನಾಡಿ, ಮೊಬೈಲ್, ಟಿವಿಗಳ ಹಾವಳಿಯಿಂದ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಖೆ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಹಂಪಿ ವಿರೂಪಾಕ್ಷ ಬಯಲಾಟ ನಾಟಕ ಪ್ರೋತ್ಸಾಹ ಟ್ರಸ್ಟ್ ಅಧ್ಯಕ್ಷ ಜಿ.ಕೆ. ತಿಪ್ಪೇಸ್ವಾಮಿ ಬಯಲಾಟ, ನಾಟಕ ಮುಂತಾದ ಕಲೆಗಳನ್ನು ಉಳಿಸಿ ಬೆಳೆಸಲು ಶ್ರಮಿಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದರು.ಮುಖ್ಯಅತಿಥಿ ಕೋರಿ ತಿಮ್ಮಾರೆಡ್ಡಿ ಮಾತನಾಡಿ, ಹಂಪೆಯು ವಿಜಯನಗರ ಜಿಲ್ಲೆಗೆ ಸೇರಿದ ನಂತರ ಹಂಪಿ ಉತ್ಸವದಲ್ಲಿ ಬಳ್ಳಾರಿ ಜಿಲ್ಲೆಯ ಕಲಾವಿದರಿಗೆ ಅವಕಾಶಗಳು ಹೆಚ್ಚಾಗಿ ಸಿಗುತ್ತಿಲ್ಲ. ಪ್ರತಿವರ್ಷ ಬಳ್ಳಾರಿ ಉತ್ಸವವನ್ನು ಆಚರಿಸಿದರೆ ಜಿಲ್ಲೆಯ ಕಲಾವಿದರಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆ ಎಂದರು.
ಕೆ.ಎಂ. ಸ್ವಾಮಿ, ಡಿ.ಉಮೇಶ್, ಕೆ.ಮಹಾಂತೇಶ್ ಹಿರಿಯ ಕಲಾವಿದರಿಗೆ ಮಾಸಾಶನ, ಐಡಿ ಕಾರ್ಡ್ ಮುಂತಾದ ಸೌಲಭ್ಯಗಳು ಸಮರ್ಪಕವಾಗಿ ದೊರೆಯದಿರುವ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.ಗಮನ ಸೆಳೆದ ನಾಟಕ ಪ್ರದರ್ಶನ:
ಕೆ.ಜಗದೀಶ್ ರಚಿಸಿ ನಿರ್ದೇಶಿಸಿದ ಗೂಳ್ಯದ ಗಾದಿಲಿಂಗಪ್ಪ ತಾತ ಎಂಬ ಭಕ್ತಿಪ್ರಧಾನ ನಾಟಕ ಪ್ರೇಕ್ಷಕರನ್ನು ಅಧ್ಯಾತ್ಮ ಲೋಕಕ್ಕೆ ಕರೆದೊಯ್ಯುವಲ್ಲಿ ಯಶಸ್ವಿಯಾಯಿತು.
ಋಷಿಕುಮಾರ್ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಟ್ರಸ್ಟ್ ಅಧ್ಯಕ್ಷ ಜಿ.ಕೆ. ತಿಪ್ಪೇಸ್ವಾಮಿ ಸ್ವಾಗತಿದರು. ಕೆ.ಹೇಮಣ್ಣ ಕಾರ್ಯಕ್ರಮ ನಿರೂಪಿಸಿದರು. ಸದಸ್ಯ ಎಂ.ಉಮಾಶಂಕರ ವಂದಿಸಿದರು. ಕಾರ್ಯಕ್ರಮದಲ್ಲಿ ಬಿ.ಬನ್ನಿರಾಜ, ಗವಿಸಿದ್ದಪ್ಪ, ಹೊಸಗೇರಪ್ಪ, ತಿಪ್ಪಣ್ಣ, ಬೋರ್ವೆಲ್ ಸ್ವಾಮಿ, ಡಿಶ್ ಸಿದ್ದಪ್ಪ, ಕಾರಪುಡಿ ಸ್ವಾಮಿ, ಕಮಲಾಕರ, ಚಿಕ್ಕಂತಾಪುರ ಲೋಕೇಶ, ರಾಜಶೇಖರಗೌಡ ಡಿ, ಜಿ.ದಮ್ಮೂರಪ್ಪ, ಡಿ.ವೆಂಕಟೇಶ, ವಾಸುದೇವ, ಗುರುಮೂರ್ತಿ, ಹೊನ್ನೂರಸ್ವಾಮಿ, ಎ.ಮರಿಯಪ್ಪ ಭಾಗವಹಿಸಿದ್ದರು.