ನಾಟಕಗಳು ಸಮಾಜದ ಅಂಕು ಡೊಂಕು ತಿದ್ದುವ ವೇದಿಕೆ: ಮಹೇಂದ್ರ ಬಡಳ್ಳಿ

| Published : Mar 07 2024, 01:49 AM IST

ಸಾರಾಂಶ

ಚಲನಚಿತ್ರಗಳು ಬರುವುದಕ್ಕಿಂತ ಮುಂಚೆ ಬಹು ಬೇಡಿಕೆಯಿದ್ದ ನಾಟಕ ಪ್ರದರ್ಶನಗಳು ಇಂದು ಅಳಿವಿನ ಅಂಚಿನಲ್ಲಿವೆ.

ಕನ್ನಡಪ್ರಭ ವಾರ್ತೆ ಹಿರೇಕೆರೂರು

ನಾಟಕ ಪ್ರದರ್ಶನಗಳು ಮನರಂಜನೆ ನೀಡುವುದರ ಜತೆಗೆ, ನಿಜ ಜೀವನದಲ್ಲಿ ಎಲ್ಲೋ ಒಂದು ಕಡೆ ನಡೆದ ನೈಜ ಘಟನೆಯನ್ನು ಒಳಗೊಂಡ ಕಥೆಯ ಸಾರಾಂಶವನ್ನು ಎಳೆ ಎಳೆಯಾಗಿ ನಟನೆ ಮೂಲಕ ಪ್ರದರ್ಶಿಸುತ್ತಾ, ಸಮಾಜದ ಅಂಕು ಡೊಂಕು ತಿದ್ದುವ ಮಹಾ ವೇದಿಕೆಯಾಗಿವೆ ಎಂದು ದುರ್ಗಾದೇವಿ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಮಹೇಂದ್ರ ಬಡಳ್ಳಿ ಹೇಳಿದರು.

ಪಟ್ಟಣದ ರಾಘವೇಂದ್ರ ಕಾಲನಿಯ ಶೇಷಾದ್ರಿ ನಾಡಿಗೇರ ಅವರ ಮೈದಾನದಲ್ಲಿ ದುರ್ಗಾದೇವಿ ಜಾತ್ರೆಯ ನಿಮಿತ್ತ ರಾಣಿಬೆನ್ನೂರಿನ ಮಂಜುನಾಥ ನಾಟ್ಯ ಸಂಘದವರು ಏರ್ಪಡಿಸಿರುವ ನಾಟಕ ಪ್ರದರ್ಶನದ "ಅಪ್ಪ ಚಿಂತ್ಯಾಗ್ ಮಗಳು ಸಂತ್ಯಾಗ್ " ಎಂಬ ನಾಟಕದ ಯಶಸ್ವಿ ೫೦ನೇ ಪ್ರದರ್ಶನದ ಸುವರ್ಣ ಸಂಭ್ರಮಾಚರಣೆಗೆ ಚಾಲನೆ ನೀಡಿ ಮಾತನಾಡಿದರು. ಚಲನಚಿತ್ರಗಳು ಬರುವುದಕ್ಕಿಂತ ಮುಂಚೆ ಬಹು ಬೇಡಿಕೆಯಿದ್ದ ನಾಟಕ ಪ್ರದರ್ಶನಗಳು ಇಂದು ಅಳಿವಿನ ಅಂಚಿನಲ್ಲಿವೆ. ನಾಟಕ ಕಂಪನಿ ಕಟ್ಟಿ ಬೆಳೆಸುವುದು ಹಾಗೂ ಅದನ್ನು ಉಳಿಸಿಕೊಂಡು ಹೋಗುವುದು ಅಷ್ಟೊಂದು ಸುಲಭವಲ್ಲ. ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರೆ ಮಾತ್ರ ಬಡ ಕಲಾವಿದರಿಗೆ ಒಂದು ಹೊತ್ತಿನ ಊಟ ದೊರಕುತ್ತದೆ. ಬರುವಂತಹ ದಿನಗಳಲ್ಲಿ ಉತ್ತಮ ನಾಟಕಗಳನ್ನು ಕಂಪನಿಯವರು ಪ್ರದರ್ಶಿಸಬೇಕು. ನಮ್ಮ ತಾಲೂಕು ಕಲಾ ರಸಿಕರ ಬೀಡಾಗಿದ್ದು, ಈ ನಾಟಕ ೫೦ ದಿನ ಪೂರೈಸಿರುವುದೇ ಇದಕ್ಕೆ ಸಾಕಿಯಾಗಿದೆ ಎಂದರು.

ಇದೇ ವೇಳೆ ದುರ್ಗಾದೇವಿ ಜಾತ್ರಾ ಮಹೋತ್ಸವ ಸಮಿತಿ ವತಿಯಿಂದ ನಾಟಕ ಕಂಪನಿಯ ಮಾಲಿಕೆ ನಾಗರತ್ನ ಚಿಕ್ಕಮಠ ಅವರನ್ನು ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಲಾಯಿತು.

ನಾಟಕ ಕಂಪನಿಯ ಮಾಲಿಕೆ ನಾಗರತ್ನ ಚಿಕ್ಕಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ನೀಲಪ್ಪ ನರಲಾರ, ಪಿ.ಎಲ್.ಡಿ ಬ್ಯಾಂಕಿನ ಉಪಾಧ್ಯಕ್ಷ ಭೀಮನಗೌಡ ದೊಡ್ಡಗೌಡ್ರ, ಅಶೋಕ ಚನ್ನಗೌಡ್ರ, ಪತ್ರಕರ್ತ ಇಂದುಧರ ಹಳಕಟ್ಟಿ, ಹನುಮಂತ ಡಾಂಗೆ, ಮಾಲತೇಶ ಬೆಟಕೇರೂರ, ಕಲಾವಿದರಾದ ಸುದರ್ಶನ ಚಿಕ್ಕಮಠ, ಮಾರುತಿ ಕುಂದಾಪುರ, ಮಲ್ಲೇಶಪ್ಪ ಮೈಸೂರ, ನಿಜಗುಣ ಹಿರಿಯೂರ, ಶ್ರೀದೇವಿ ಚಿಕ್ಕಮಠ, ಸುಧಾ ಚಿಕ್ಕಮಠ, ಪ್ರಿಯಾಂಕಾ ಚಿಕ್ಕಮಠ ಇದ್ದರು.

ನಾಟಕ ಕಂಪನಿಯ ಸಂಚಾಲಕ ಮಲ್ಲಿಕಾರ್ಜುನ ಚಿಕ್ಕಮಠ ನಿರ್ವಹಿಸಿದರು.