ಸಮಸ್ಯೆಗಳ ಪರಿಹಾರಕ್ಕೆ ನಾಟಕಗಳು ಪೂರಕ

| Published : Oct 28 2024, 01:05 AM IST / Updated: Oct 28 2024, 01:06 AM IST

ಸಾರಾಂಶ

ರಾಮನಗರ: ರಂಗಭೂಮಿ ಪರಂಪರೆಯು ಮನುಷ್ಯನ ಮನೋ ಇಂಗಿತವನ್ನು ಪೂರೈಸುವ ವೇದಿಕೆ ಮಾತ್ರವಲ್ಲದೆ ಸಾಮಾಜಿಕ ಸಮಸ್ಯೆಗಳಿಗೂ ಪರಿಹಾರವಾಗಿದೆ ಎಂದು ಜನಜಾಗೃತಿ ವೇದಿಕೆ ಅಧ್ಯಕ್ಷ ಕೆ.ಶೇಷಾದ್ರಿ ಹೇಳಿದರು.

ರಾಮನಗರ: ರಂಗಭೂಮಿ ಪರಂಪರೆಯು ಮನುಷ್ಯನ ಮನೋ ಇಂಗಿತವನ್ನು ಪೂರೈಸುವ ವೇದಿಕೆ ಮಾತ್ರವಲ್ಲದೆ ಸಾಮಾಜಿಕ ಸಮಸ್ಯೆಗಳಿಗೂ ಪರಿಹಾರವಾಗಿದೆ ಎಂದು ಜನಜಾಗೃತಿ ವೇದಿಕೆ ಅಧ್ಯಕ್ಷ ಕೆ.ಶೇಷಾದ್ರಿ ಹೇಳಿದರು.

ನಗರದ ಎಂ.ಎಚ್. ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ಜನಮುಖಿ ಟ್ರಸ್ಟ್‌ ಆಯೋಜಿಸಿದ್ದ ಎರಡು ದಿನಗಳ ನಾಟಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯನ ಬದುಕಿನಲ್ಲಿ ಎದುರಾಗುವ ಸಂಕಟಗಳನ್ನು ಪರಿಹರಿಸಿಕೊಳ್ಳಲು ನೆರವಾಗುತ್ತವೆ. ಕಲಾ ಸಂವಹನಕ್ಕೆ ಮಾದರಿಯಾಗಿರುವ ನೀನಾಸಂ ಕಲಾವಿದರ ಈ ಎರಡು ನಾಟಕಗಳನ್ನು ನೋಡಿ, ಅದರ ಸವಿಯನ್ನು ಅನುಭವಿಸಲು ಜನಮುಖಿ ಟ್ರಸ್ಟ್ ನೆರವಾಗಿದೆ. ಎಲ್ಲರೂ ನಾಟಕಗಳನ್ನು ನೋಡಿ ಸಂತೋಷಪಟ್ಟರೆ ಅದೇ ನಿಜವಾದ ಖುಷಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾರೋಪ ಸಮಾರಂಭದಲ್ಲಿ ವಿಮರ್ಶಕ ಡಾ.ಬೈರಮಂಗಲ ರಾಮೇಗೌಡ ಮಾತನಾಡಿ, ರಂಗಭೂಮಿ ಕಲೆಯನ್ನು ಜೀವಂತವಾಗಿ ಉಳಿಸಿ ಬೆಳೆಸಲು, ರಂಗಭೂಮಿಯ ಮೂಲಕ ಅಭಿವ್ಯಕ್ತಗೊಳ್ಳುವ ವಿಚಾರಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಲು ತಾರುಣ್ಯಕ್ಕೆ ಅಡಿ ಇಡುತ್ತಿರುವ ಮಕ್ಕಳಿಗೆ ತೋರಿಸಿ ಎಂದು ಸಲಹೆ ನೀಡಿದರು.

ಒಂದು ಸಣ್ಣ ಹಳ್ಳಿ ಹೆಗ್ಗೂಡಿನಲ್ಲಿ ಪ್ರಾರಂಭವಾದ ನೀನಾಸಂ ನಶಿಸಿ ಹೋಗುತ್ತಿರುವ ಮಾನವ ಸಂಬಂಧಗಳನ್ನು ಪುನರುಜ್ಜೀವನಗೊಳಿಸಲು ರಂಗಕಲೆಯನ್ನು ರೂಢಿಸಿಕೊಂಡು, ದೇಶ ವಿದೇಶಗಳಲ್ಲಿ ಪ್ರದರ್ಶನ ಮಾಡುತ್ತಾ ಬರುತ್ತಿದೆ. ವಿವಿಧ ತಾಲೀಮುಗಳಿಂದ ಪಳಗಿದ ಕಲಾವಿದರ ಅಭಿನಯದ ಮಜಲುಗಳು ನೋಡುವುದೇ ಸೊಗಸು. ಪಾತ್ರಕ್ಕೆ ಪೂರಕವಾದಂತಹ ಸಂಭಾಷಣೆಯನ್ನು ಅರ್ಥಪೂರ್ಣವಾಗಿ, ಸುಲಲಿತವಾಗಿ ಸಂದರ್ಭಕ್ಕೆ ತಕ್ಕಂತೆ ಧ್ವನಿ ಏರಿಳಿತಗಳನ್ನು ಮಾಡುತ್ತಾ ನೋಡುಗರ ಮನಸೂರೆಗೊಳ್ಳುವಂತಹ ರಂಗಭೂಮಿ ತಜ್ಞರ ತಂಡ ಇದಾಗಿದೆ ಎಂದರು.

ಬಯಲುಸೀಮೆ ನಾಡಾದ ರಾಮನಗರದಲ್ಲಿ ಪೌರಾಣಿಕ ನಾಟಕಗಳು ಹಳ್ಳಿಹಳ್ಳಿಗಳಲ್ಲೂ ಪ್ರದರ್ಶನಗೊಳ್ಳುತ್ತಿವೆ. ನಗರ ಪ್ರದೇಶಗಳಲ್ಲಿ ಪೌರಾಣಿಕ ನಾಟಕೋತ್ಸವಗಳು ನಡೆಯುತ್ತಿವೆ. ಆದರೆ, ಸಾಮಾಜಿಕ ನಾಟಕ ಪ್ರದರ್ಶನ ವಿರಳವಾಗಿವೆ. ನಿಜ ಜೀವನದಲ್ಲಿ ವಿವಿಧ ವಿಭಿನ್ನ ವಯೋಮಾನದ ಜನರು ಅನುಭವಿಸುವ ಸಂತೋಷ ಮತ್ತು ಸಂಕಟಗಳನ್ನು ಒಳಗೊಂಡಂತಹ ಸಾಮಾಜಿಕ ನಾಟಕಗಳು ಹೆಚ್ಚುಹೆಚ್ಚಾಗಿ ಪ್ರದರ್ಶನಗೊಳ್ಳುವ ಅನಿವಾರ್ಯತೆ ಇದೆ ಎಂದರು.

ಎಂ.ಎಚ್. ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಚ್.ಚಂದ್ರಶೇಕರ್ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಾಟಕೋತ್ಸವದಲ್ಲಿ ಸಾಹಿತಿ ಜಿ.ಎಚ್.ರಾಮಯ್ಯ, ಜಿ.ಶಿವಣ್ಣ ಕೊತ್ತೀಪುರ, ಶಿವಕುಮಾರಸ್ವಾಮಿ, ಹಿರಿಯ ಪತ್ರಕರ್ತ ಚಲುವರಾಜು, ಆರ್.ನಾಗರಾಜ್, ಗುತ್ತಿಗೆದಾರ ಮಾಗಡಿ ಚಿಕ್ಕಣ್ಣ, ಡಾ.ಎಂ.ಬೈರೇಗೌಡ, ಜನಮುಖಿ ಟ್ರಸ್ಟ್ ಕಾರ್ಯದರ್ಶಿ ಕುಂಬಾಪುರ ಬಾಬು, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸೂರ್ಯಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

----

27ಕೆಆರ್ ಎಂಎನ್ 1.ಜೆಪಿಜಿ

ರಾಮನಗರದ ಎಂ.ಎಚ್.ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ಜನಮುಖಿ ಟ್ರಸ್ಟ್‌ನಿಂದ ಆಯೋಜಿಸಿದ್ದ ಎರಡು ದಿನಗಳ ನಾಟಕೋತ್ಸವವನ್ನು ಕೆ.ಶೇಷಾದ್ರಿ ಉದ್ಘಾಟಿಸಿದರು.