ಸಾರಾಂಶ
ಸಮಾಜದ ಪರಿವರ್ತನೆಗೆ ನಾಟಕಗಳು ಅತ್ಯಗತ್ಯವಾಗಿವೆ ಎಂದು ಜ್ಞಾನೇಶ್ವರ ಮಠದ ಪೀಠಾಧಿಕಾರಿ ಬ್ರಹ್ಮಾನಂದ ಸ್ವಾಮೀಜಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಲೋಕಾಪುರ
ಸಮಾಜದ ಪರಿವರ್ತನೆಗೆ ನಾಟಕಗಳು ಅತ್ಯಗತ್ಯವಾಗಿವೆ ಎಂದು ಜ್ಞಾನೇಶ್ವರ ಮಠದ ಪೀಠಾಧಿಕಾರಿ ಬ್ರಹ್ಮಾನಂದ ಸ್ವಾಮೀಜಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.ಪಟ್ಟಣದಲ್ಲಿ ದುರ್ಗಾದೇವಿ ಜಾತ್ರೆಯ ಅಂಗವಾಗಿ ಲೋಕಾಪುರದ ಶ್ರೀ ಲೋಕೇಶ್ವರ ಸಾಂಸ್ಕೃತಿಕ ಕಲಾ ಅಭಿವೃದ್ಧಿ ಸಂಘ ಹಾಗೂ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ, ಬಾಗಲಕೋಟ ಇವರ ಸಹಯೋಗದಲ್ಲಿ ನಡೆದ ಮಗ ಹೋದರು ಮಾಂಗಲ್ಯ ಬೇಕು ಎಂಬ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದಶಕಗಳ ಹಿಂದೆ ಗ್ರಾಮಾಂತರ ಪ್ರದೇಶಗಳಲ್ಲಿ ನಾಟಕ ಪ್ರದರ್ಶನಗಳು ಹೆಚ್ಚಾಗಿ ನಡೆಯುತ್ತಿದ್ದವು. ಈ ನಾಟಕ ಪ್ರದರ್ಶನಗಳ ಹಿಂದೆ ಸಮಾಜದ ಅಂಕುಡೊಂಕು ತಿದ್ದುವ ಉದ್ದೇಶ ಇರುತ್ತಿತ್ತು. ಬದಲಾದ ಕಾಲಘಟ್ಟದಲ್ಲಿ ಆ ಕೆಲಸವನ್ನು ಸಾಮಾಜಿಕ ಕಥಾಹಂದರ ಒಳಗೊಂಡ ನಾಟಕಗಳು ನಿಭಾಯಿಸಿದವು. ಆದರೆ, ಇತ್ತೀಚಿನ ದಿನಗಳಲ್ಲಿ ನಿರ್ದಿಷ್ಟ ಜಾತಿ ಸೂಚಕ ಶೀರ್ಷಿಕೆಯನ್ನು ಒಳಗೊಂಡ ನಾಟಕಗಳು ಬರುತ್ತಿವೆ. ನಾಟಕಗಳು ಒಂದು ಜಾತಿಗೆ ಸೀಮಿತಗೊಂಡರೆ ಇದರಿಂದ ಸಮಾಜಕ್ಕೆ ಯಾವುದೇ ಒಳ್ಳೆಯ ಸಂದೇಶಗಳನ್ನು ತಲುಪಿಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.
ಡಾ.ಮಹೇಶ ಜಾಡಗೌಡರ ಮಾತನಾಡಿ, ಸಮಾಜದ ಅಂಕು, ಡೊಂಕುಗಳನ್ನು ತಿದ್ದುವ ಮೂಲಕ ನವ ಸಮಾಜದ ನಿರ್ಮಾಣದಲ್ಲಿ ನಾಟಕಗಳ ಪಾತ್ರ ಅತ್ಯಂತ ಮಹತ್ತರವಾಗಿದೆ. ಒಂದೊಂದು ನಾಟಕಗಳು ಸಮಾಜದ ವಿದ್ಯಮಾನಗಳನ್ನು ಪ್ರತಿಬಿಂಬಿಸುತ್ತವೆ. ಆದರೆ, ಇಂದಿನ ದಿನಗಳಲ್ಲಿ ಅವಸಾನದ ಅಂಚಿನಲ್ಲಿರುವ ರಂಗಭೂಮಿಯ ರಕ್ಷಣೆಗೆ ಮುಂದಾಗುವ ಮೂಲಕ ಕಲೆಯನ್ನು ಉಳಿಸುವ ಪಣತೊಡಬೇಕು ಎಂಬ ಅನಿಸಿಕೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕೃಷ್ಣ ಭಜಂತ್ರಿ ಮಾತನಾಡಿ, ಕಲೆ, ಸಾಹಿತ್ಯ ಮತ್ತು ನಾಟಕ ಹೀಗೆ ಸಮಾಜಕ್ಕೆ ಅನುಕೂಲವಾಗುವ ಕಾರ್ಯಕ್ರಮಗಳಿಗೆ ನಮ್ಮ ಸಾಂಸ್ಕೃತಿಕ ಕಲಾ ಅಭಿವೃದ್ಧಿ ಸಂಘವು ಯಾವಾಗಲೂ ಸನ್ನದ್ಧವಾಗಿದೆ. ಕಲಾವಿದರಿಗೆ ನಮ್ಮ ಸಂಸ್ಥೆಯಿಂದ ಅನೇಕ ಆರ್ಥಿಕವಾಗಿ, ಸಾಮಾಜಿಕವಾಗಿಯೂ ಕಾರ್ಯನಿರ್ವಹಿಸಲಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಪಿಕೆಪಿಎಸ್ ಸದಸ್ಯ ಗೋಡಚಯ್ಯ ಗಣಾಚಾರಿ, ರಮೇಶ ಕಂಬಾರ, ದ್ಯಾಮಣ್ಣ ಬೆಲದೊಡೆ, ಸೈಯ್ಯದ ನಧಾಪ್, ಕಾಡೇಶ ಕಂಬಾರ, ಶಿಕ್ಷಕ ಕೆ.ಪಿ.ಯಾದವಾಡ, ಸಂಘದ ಅಧ್ಯಕ್ಷ ಕೃಷ್ಣಾ ಭಜಂತ್ರಿ, ವಿವಿಧ ಕಲಾವಿದರು ಮತ್ತು ಸ್ಥಳೀಯ ಮುಖಂಡರು ಭಾಗವಹಿಸಿದ್ದರು.ಈ ನಾಟಕ ಪ್ರದರ್ಶನಗಳ ಹಿಂದೆ ಸಮಾಜದ ಅಂಕುಡೊಂಕು ತಿದ್ದುವ ಉದ್ದೇಶ ಇರುತ್ತಿತ್ತು. ಬದಲಾದ ಕಾಲಘಟ್ಟದಲ್ಲಿ ಆ ಕೆಲಸವನ್ನು ಸಾಮಾಜಿಕ ಕಥಾಹಂದರ ಒಳಗೊಂಡ ನಾಟಕಗಳು ನಿಭಾಯಿಸಿದವು. ಆದರೆ, ಇತ್ತೀಚನ ದಿನಗಳಲ್ಲಿ ನಿರ್ದಿಷ್ಟ ಜಾತಿ ಸೂಚಕ ಶೀರ್ಷಿಕೆ ಒಳಗೊಂಡ ನಾಟಕಗಳು ಬರುತ್ತಿವೆ, ನಾಟಕಗಳು ಒಂದು ಜಾತಿಗೆ ಸೀಮಿತಗೊಂಡರೆ ಇದರಿಂದ ಸಮಾಜಕ್ಕೆ ಒಳ್ಳೆಯ ಸಂದೇಶಗಳನ್ನು ತಲುಪಿಸಲು ಸಾಧ್ಯವಿಲ್ಲ.- ಬ್ರಹ್ಮಾನಂದ ಶ್ರೀಗಳು,
ಜ್ಞಾನೇಶ್ವರ ಮಠದ ಪೀಠಾಧಿಕಾರಿ.