ಸಾರಾಂಶ
ಭಾರತಿ ಶಿಶುವಿಹಾರದ ಬಳಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆಕನ್ನಡಪ್ರಭ ವಾರ್ತೆ, ಬೀರೂರು
ಕುಡಿಯುವ ನೀರು ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಕುಡಿಯುವ ನೀರು ಶುದ್ಧವಾಗಿದ್ದರೆ ಎಷ್ಟೋ ಕಾಯಿಲೆ ಯನ್ನು ದೂರ ಮಾಡಬಹುದಾಗಿದೆ ಎಂದು ಪುರಸಭಾ ಸದಸ್ಯ ಬಿ.ಆರ್.ಮೋಹನ್ ಕುಮಾರ್ ಹೇಳಿದರು.ಪಟ್ಟಣದ ಸಂತೆ ಮೈದಾನ ರಸ್ತೆಯ ವಾರ್ಡ ನಂ 14 ರ ಭಾರತಿ ಶಿಶುವಿಹಾರದ ಮುಂಭಾಗದಲ್ಲಿ ಪುರಸಭೆ ಮತ್ತು ಟಿ. ಸುಬ್ರಹ್ಮಣ್ಯ ಶುದ್ಧ ಗಂಗಾಜಲ ಸಮಿತಿ ಸಹಯೋಗದೊಂದಿಗೆ ನಿರ್ಮಿಸಿರುವ ಶುದ್ಧಗಂಗಾ ಕುಡಿಯುವ ನೀರಿನ ಘಟಕವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಹಿಂದೆ ಖನಿಜಯುಕ್ತ ನೀರು ಶ್ರೀಮಂತರಿಗೆ ಮಾತ್ರ ಸೀಮಿತವಾಗಿತ್ತು. ಈಗ ಅದು ಬದಲಾಗಿ ಎಲ್ಲ ವರ್ಗದ ಜನತೆಗೆ ದೊರಕುವಂತಾಗಿದೆ. ಶ್ರೀಮಂತರು ಮಾತ್ರ ಶುದ್ಧ ನೀರು ಕುಡಿದರೆ ಸಾಲದು, ಬಡವರಿಗೂ ಆ ವ್ಯವಸ್ಥೆ ಸಿಗಬೇಕು. ಬಾಟಲ್ ಗಳಲ್ಲಿ ಸಿಗುವ ನೀರಿಗೆ ಲೀಟರ್ ಗೆ 20 ರು. ವ್ಯಯಿಸಬೇಕಿದೆ. ಈ ಹಿನ್ನೆಲೆಯಲ್ಲಿ ಬಡವರಿಗಾಗಿ ಕೇವಲ ಒಂದು ರು.ಗೆ ನಾಲ್ಕು ಲೀ ನೀರು, 5 ರು.ಗೆ ಇಪ್ಪತ್ತು ಲೀಟರ್ ನೀರು ದೊರಕುವಂತಾಗಿದೆ. ಇಲ್ಲಿ ಈ ಘಟಕ ಸ್ಥಾಪನೆಯಾಗಿರುವುದರಿಂದ ಸುತ್ತಮುತ್ತಲ ಅನೇಕ ಬಡಜನರಿಗೆ ಇದು ತುಂಬಾ ಉಪಯುಕ್ತವಾಗಿದೆ.ಇನ್ನೋರ್ವ ಸದಸ್ಯ ಬಿ.ಕೆ.ಶಶಿಧರ್ ಮಾತನಾಡಿ, ಬಿಸಿಲ ಬೇಗೆ ನಡುವೆಯೇ ಆರೋಗ್ಯ ರಕ್ಷ ಣೆ ದೃಷ್ಟಿಯಿಂದ ಶುದ್ಧ ನೀರು ಕುಡಿಯುವುದು ಉತ್ತಮ, ಸದ್ಯ ಬೀರೂರು ಪಟ್ಟಣದಲ್ಲಿ 5-6 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಭದ್ರ ಕುಡಿಯುವ ನೀರಿನ ಸರಬರಾಜಲ್ಲಿ ವ್ಯತ್ಯಯವಾದಾಗ ನಾಗರಿಕರಿಗೆ ಪುರಸಭೆ ಬೋರ್ ನೀರು ಒದಗಿಸಲಾಗುತ್ತದೆ. ಇದರಿಂದ ಕೆಲವರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದ್ದು ಶುದ್ಧ ಕುಡಿಯುವ ನೀರು ಮನುಷ್ಯನಿಗೆ ಅತ್ಯವಶ್ಯಕ ವಾಗಿದ್ದು, ಶಾಸಕರೊಂದಿಗೆ ಚರ್ಚಿಸಿ ಯಾವ ವಾರ್ಡ ಗಳಿಗೆ ಅವಶ್ಯವಿದೆಯೊ ಅಂತಹ ಕಡೆ ಶುದ್ಧ ಕುಡಿಯುವ ನೀರು ಘಟಕ ಸ್ಥಾಪನೆಗೆ ಒತ್ತಾಯಿಸಲಾಗುವುದು ಎಂದರು.ಸದಸ್ಯ ಲಕ್ಷ್ಮಣ್ ಮಾತನಾಡಿ, 14ನೇ ವಾರ್ಡ್ ಸುತ್ತಮುತ್ತ ಇರುವ ವಾರ್ಡ ಗಳಲ್ಲಿ ಅತೀ ಹೆಚ್ಚು ಪರಿಶಿಷ್ಟ ಜಾತಿ ಮತ್ತು ಪಂಗಡದವರೆ ಹೆಚ್ಚಿದ್ದು ಅವರಿಗೆ ಈ ಶುದ್ಧ ನೀರಿನ ಘಟಕ ಹೆಚ್ಚು ಅನುಕೂಲವಾಗುವ ಜೊತೆ ಶನಿವಾರ ಸಂತೆ ನಡೆಸುವ ವ್ಯಾಪಾರಿ ಮತ್ತು ವರ್ತಕರಿಗೆ ಸಹಕಾರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ, ಮಾನಿಕ್ ಭಾಷ, ಲೋಕೇಶಪ್ಪ, ನಾಗರಾಜ್, ಚೆಲುವರಾಜ್, ಬೀರಪ್ಪ ಶುದ್ದಗಂಗಾ ಘಟಕ ನಿರ್ವಾಹಕ ರಂಜನ್, ಪುನೀತ್ ಕುಮಾರ್ ಸೇರಿದಂತೆ ಸಾರ್ವಜನಿಕರು ಇದ್ದರು.19 ಬೀರೂರು1ಬೀರೂರಿನ ಸಂತೆ ಮೈದಾನ ರಸ್ತೆ ಭಾರತಿ ಶಿಶುವಿಹಾರದ ಮುಂಭಾಗದಲ್ಲಿ ನೂತನವಾಗಿ ನಿರ್ಮಾಣವಾಗಿದ್ದ ಶುದ್ಧಗಂಗಾ ಕುಡಿಯುವ ನೀರಿನ ಘಟಕವನ್ನು ಸೋಮವಾರ ಪುರಸಭಾ ಸದಸ್ಯರು ಉದ್ಘಾಟಿಸಿದರು. ಬಿ.ಆರ್.ಮೋಹನ್ ಕುಮಾರ್, ಬಿ.ಕೆ.ಶಶಿಧರ್, ಲೋಕೇಶಪ್ಪ, ನಾಗರಾಜ್ ಸೇರಿದಂತೆ ಮತ್ತಿತರಿದ್ದರು.