ಲಕ್ಷ್ಮೇಶ್ವರ ಪಟ್ಟಣಕ್ಕೆ ಕಳೆದ 20 ದಿನಗಳಿಂದ ಕುಡಿಯುವ ನೀರು ಸರಬರಾಜಾಗುತ್ತಿಲ್ಲ. ಕುಡಿಯುವ ನೀರಿನ ಪೈಪ್ ಒಡೆದಿದೆ, ಮೇವುಂಡಿಯಲ್ಲಿ ಕರೆಂಟ್ ಇಲ್ಲ, ನೀರು ಎತ್ತುವ ಮೋಟಾರ್ ಕೆಟ್ಟಿದೆ, ಹೀಗೆ ಒಂದಿಲ್ಲೊಂದು ಕಾರಣ ಹೇಳಲಾಗುತ್ತಿದೆ.

ಲಕ್ಷ್ಮೇಶ್ವರ: ಪಟ್ಟಣಕ್ಕೆ ಕಳೆದ 20 ದಿನಗಳಿಂದ ಕುಡಿಯುವ ನೀರು ಸರಬರಾಜಾಗುತ್ತಿಲ್ಲ. ಕುಡಿಯುವ ನೀರಿನ ಪೈಪ್ ಒಡೆದಿದೆ, ಮೇವುಂಡಿಯಲ್ಲಿ ಕರೆಂಟ್ ಇಲ್ಲ, ನೀರು ಎತ್ತುವ ಮೋಟಾರ್ ಕೆಟ್ಟಿದೆ, ಹೀಗೆ ಒಂದಿಲ್ಲೊಂದು ಕಾರಣ ಹೇಳಲಾಗುತ್ತಿದೆ.

ತುಂಗಭದ್ರಾ ನದಿಯಲ್ಲಿ ನೀರಿದ್ದರೂ ಪಟ್ಟಣದ ಜನತೆಗೆ 20-25 ದಿನಗಳಿಗೊಮ್ಮೆ ಕುಡಿಯುವ ನೀರು ದೊರೆಯುತ್ತಿರುವುದು ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಪಟ್ಟಣದ ಹಳೆಯ ಬಸ್ ನಿಲ್ದಾಣದ ಪಕ್ಕದಲ್ಲಿನ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಅವರ ನಿವಾಸದ ಅಕ್ಕಪಕ್ಕದಲ್ಲಿನ ಜನತೆಗೆ ಕುಡಿಯುವ ನೀರು ಕಳೆದ 20 ದಿನಗಳಿಂದ ಸಿಗುತ್ತಿಲ್ಲ. ಯಾಕೆ ನೀರು ಬರುತ್ತಿಲ್ಲ ಎಂದು ಕೇಳಿದರೆ, ಇಲ್ಲದ ಸುಳ್ಳಿನ ಸರಮಾಲೆಯನ್ನು ನಮ್ಮ ಮುಂದೆ ತೆರದಿಡುತ್ತಾರೆ. ಯಾವುದನ್ನು ನಂಬಬೇಕು ಯಾವುದನ್ನು ಬಿಡಬೇಕು ಎನ್ನುವ ಗೊಂದಲ್ಲಿ ಬೀಳುವಂತೆ ಮಾಡಿ ಪಾರಾಗುವ ಚಾಣಾಕ್ಷ ಕಲೆ ಇಲ್ಲಿನ ನೀರು ಸರಬರಾಜು ವಿಭಾಗಕ್ಕೆ ಕರಗತವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಕುರಿತು ಶಿವಯೋಗಿ ಗಡ್ಡದೇವರಮಠ ಮಾತನಾಡಿ, ಹಳೆಯ ಬಸ್ ನಿಲ್ದಾಣದ ಸುತ್ತಮುತ್ತಲಿನ ಜನತೆಗೆ 20 ದಿನಗಳಿಂದ ಕುಡಿಯುವ ನೀರು ಬರುತ್ತಿಲ್ಲ. ಆಗ ಬರುತ್ತದೆ, ಈಗ ಬರುತ್ತದೆ ಎಂದು ನಳದ ಮುಖ ನೋಡುವುದೇ ಕಾಯಕವಾಗಿದೆ. ಕುಡಿಯುವ ನೀರು ತುಂಗಭದ್ರಾ ನದಿಯಲ್ಲಿ ಲಭ್ಯವಿದ್ದರೂ ನಮಗೆ ಬರುತ್ತಿಲ್ಲ ಎಂಬುದು ತಿಳಿಯದ ಸಂಗತಿಯಾಗಿದೆ. ಅಲ್ಲಿ ಪೈಪ್ ಸೋರುತ್ತಿವೆ, ಇಲ್ಲಿ ಪೈಪ್ ಒಡೆದಿದೆ ಎನ್ನುವ ಕಾರಣ ಹೇಳುತ್ತಾರೆ ಎಂದರು.

ಉಮಾ ಮುತಗೊಂಡ, ಮುರಗಯ್ಯ ಅಕಳಂಡಸ್ವಾಮಿಮಠ, ಜ್ಯೋತಿ ಕೂಸನೂರಮಠ, ಶೈಲಾ ಗಡ್ಡದೇವರಮಠ, ಮಲ್ಲಯ್ಯ ಗಡ್ಡದೇವರಮಠ, ಬಸನಗೌಡ ಮನ್ನಂಗಿ, ಕೊಟ್ರೇಶ ಕೆಸರಳ್ಳಿಮಠ, ಮಂಜುಳಾ ಕೂಸನೂರಮಠ ಇದ್ದರು.