ಸಾರಾಂಶ
ಎಂ.ಅಫ್ರೋಜ್ ಖಾನ್
ಕನ್ನಡಪ್ರಭ ವಾರ್ತೆ ರಾಮನಗರಜಿಟಿ ಜಿಟಿ ಮಳೆ, ಮಂಜು ಹೊತ್ತ ಬೆಟ್ಟಗಳ ಸಾಲು, ಹಸಿರಿನಿಂದ ಕಂಗೊಳಿಸುತ್ತಿರುವ ಭೂರಾಶಿ, ವಿರಳ ಜನಸಂಚಾರ... ಇದ್ಯಾವುದೋ ಮಲೆನಾಡಿನ ವರ್ಣನೆ ಇರಬೇಕು ಎಂದುಕೊಂಡರೆ ನಿಮ್ಮ ಊಹೆ ತಪ್ಪು. ಇದು ಬಿಸಿಲಿಗೆ ಹೆಸರುವಾಸಿಯಾದ ರೇಷ್ಮೆನಗರಿ ಜಿಲ್ಲೆ ರಾಮನಗರದ ವರ್ಣನೆ.
ಅರೇ ಇದೇನಿದು ರಾಮನಗರ ಜಿಲ್ಲೆ ಹೀಗಾಗಿದೆಯೇ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡುವುದು ಸಹಜ. ಹೌದು. ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಬಯಲು ಸೀಮೆ ಜಿಲ್ಲೆಯಾದ ರಾಮನಗರ ಮಲೆನಾಡಿನ ಸೊಬಗು ಪಡೆದುಕೊಂಡಿದೆ.ರಾಮನಗರ, ಚನ್ನಪಟ್ಟಣ, ಕನಕಪುರ, ಹಾರೋಹಳ್ಳಿ ಹಾಗೂ ಮಾಗಡಿ ತಾಲೂಕಿನ ಬಹುತೇಕ ಕಡೆ ತುಂತುರು ಮಳೆಯ ಜೊತೆಗೆ ಚುಮು ಚುಮು ಚಳಿಗಾಳಿಯ ವಾತಾವರಣ ಮನೆ ಮಾಡಿದೆ.
ಅಬ್ಬರದ ಮಳೆ ಆಗದಿದ್ದರೂ ನಗರ, ತಾಲೂಕು ಹಾಗೂ ಹೋಬಳಿ ಕೇಂದ್ರಗಳ ರಸ್ತೆಗಳಲ್ಲಿ ಜನರ ಹಾಗೂ ವಾಹನಗಳ ಸಂಚಾರ ಸಹ ವಿರಳವಾಗಿತ್ತು. ವಿಜಯದಶಮಿ ಹಬ್ಬದ ಬಳಿಕ ಅಂಗಡಿ ಮುಂಗಟ್ಟುಗಳನ್ನು ಉತ್ಸಾಹದಿಂದ ತೆರೆದ ವರ್ತಕರು ಮಳೆಯ ಕಾರಣ ಹೆಚ್ಚಿನ ವಹಿವಾಟು ನಡೆಯಲಿಲ್ಲ. ಮಾರುಕಟ್ಟೆಯಲ್ಲಿ ವ್ಯಾಪಾರ ತುಸು ಕಡಿಮೆಯಾಗಿದೆ.ಸತತವಾಗಿ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ನಗರದ ಸುತ್ತಲಿನ ಬೆಟ್ಟ, ಗುಡ್ಡಗಳು ಮಂಜಿನಿಂದ ಆವೃತ್ತವಾಗಿವೆ. ಜಿಲ್ಲೆಯ ಬಹುತೇಕ ಕಡೆ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಜಲಾಶಯಗಳು ಹಾಗೂ ಕೆರೆಕಟ್ಟೆಗಳಲ್ಲಿ ನೀರಿನ ಒಳ ಹರಿವಿನ ಪ್ರಮಾಣವೂ ಹೆಚ್ಚಾಗಿದೆ. ಜಮೀನುಗಳಲ್ಲೂ ನೀರು ನಿಂತಿದೆ. ರೈತರು ಸಹ ತಮ್ಮ ಕೃಷಿ ಚಟುವಟಿಕೆಗಳಿಂದ ತುಸು ಬಿಡುವು ಪಡೆದುಕೊಂಡಿದ್ದಾರೆ.
ಸಂಜೆ, ರಾತ್ರಿ, ಮಧ್ಯರಾತ್ರಿ, ಬೆಳಗಿನ ಸಮಯ ಅಥವಾ ಮಧ್ಯಾಹ್ನ ಎನ್ನದೆ ಆಗಾಗ್ಗೆ ಮಳೆರಾಯ ದರ್ಶನ ನೀಡಿ ತೆರಳುತ್ತಿದ್ದಾನೆ. ಕೆಲವೆಡೆ ತಡರಾತ್ರಿಯಿಂದ ಆರಂಭಗೊಂಡು ಬೆಳಗ್ಗೆವರೆಗೆ ಮಳೆ ಅಬ್ಬರಿಸಿದರೆ, ಮತ್ತೆ ಕೆಲವೆಡೆ ಬೆಳಿಗ್ಗೆ 9 ಕ್ಕೆ ಆರಂಭಗೊಂಡು ಮಧ್ಯಾಹ್ನ 1 ಗಂಟೆವರೆಗೂ ಹನಿಯಿತ್ತು. ಮಧ್ಯಾಹ್ನ ಒಂದಿಷ್ಟು ಹೊತ್ತು ಬಿಸಿಲು ಬಂತಾದರೂ ಸಂಜೆ 4 ರ ಬಳಿಕ ಮತ್ತೆ ಕಪ್ಪನೆಯ ಮೋಡಗಳು ಕವಿದು ಆಗಾಗ್ಗೆ ಮಳೆ ಆಗುತ್ತಲೇ ಇದೆ.ಸತತ ಸುರಿಯುತ್ತಿರುವ ಮಳೆಯಿಂದಾಗಿ ಬೆಟ್ಟದ ಸುತ್ತಲೂ ಹಾಗೂ ಇಳಿಜಾರು ಪ್ರದೇಶದಲ್ಲಿ ಹಸಿರು ಹೊದ್ದಂತೆ ಸಸ್ಯರಾಶಿ ಕಾಣಿಸುತ್ತಿದೆ. ಇದು ನೋಡುಗರಿಗೆ ಹಿತಕರ ಅನುಭವ ನೀಡುತ್ತಿದೆ.
ಗುಡುಗು - ಸಿಡಿಲಿನ ಅಬ್ಬರವಿಲ್ಲದೇ ಸುರಿಯುತ್ತಿದ್ದ ಮಳೆಯಲ್ಲಿ ಜನ ಅತ್ತಿಂದಿತ್ತ ಓಡಾಡಲು ಪ್ರಯಾಸಪಟ್ಟರು.ಬೆಳಗ್ಗೆ ವಾಕಿಂಗ್ , ಜಾಗಿಂಗ್ ಹೋಗುವವರು ಈ ಹಿತಕರ ವಾತಾವರಣವನ್ನು ಆಸ್ವಾದಿಸುತ್ತಿದ್ದಾರೆ. ಹಾಲು , ತರಕಾರಿ ತರಲು ಹೊರಟವರು ಛತ್ರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಉಷ್ಣಾಂಶ ಇಳಿಕೆ :ಕಳೆದ ಎರಡು ದಿನಗಳಿಂದ ನಿರಂತರ ಮಳೆಯಿಂದಾಗಿ ಪರಿಸರದಲ್ಲಿನ ತಾಪಮಾನದ ಪ್ರಮಾಣವೂ ತೀವ್ರ ಇಳಿಕೆ ಆಗಿದೆ. ಎರಡು ವಾರದ ಹಿಂದಷ್ಟೇ ಗರಿಷ್ಠ 31 ಡಿಗ್ರಿ ಸೆಲ್ಸಿಯಸ್ ನಷ್ಟು ಉಷ್ಣಾಂಶ ದಾಖಲಿಸಿ ಬಿಸಿಲ ನಗರಿಯಾಗಿದ್ದ ರಾಮನಗರದಲ್ಲಿ ಮಂಗಳವಾರ ಗರಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಗೆ ಇಳಿಕೆ ಆಗಿತ್ತು. ಬುಧವಾರದವರೆಗೂ ಇದೇ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸರ್ಕಾರಿ ಕಚೇರಿಗಳು ತೆರೆದರೂ ಜನರ ದಟ್ಟಣೆ ಕಂಡು ಬರಲಿಲ್ಲ. ಮಳೆ ನಿಲ್ಲುವ ಲಕ್ಷಣ ಕಾಣದಿದ್ದಾಗ ಮಳೆಯಲ್ಲೇ ಜನ ಓಡಾಡಬೇಕಾಯಿತು. ಮಳೆ ಜೊತೆಗೆ ಚರಂಡಿಯ ನೀರು ತುಂಬಿ ನಗರದ ರಸ್ತೆಗಳಲ್ಲಿ ಹರಿಯಿತು.24 ಗಂಟೆಯಲ್ಲಿ ಶೇ.104ರಷ್ಟು ಹೆಚ್ಚಿನ ಮಳೆ:
ಸೆಪ್ಟೆಂಬರ್ ನಲ್ಲಿ ವಾಡಿಕೆ 175.7ಮಿಮೀ.ನಲ್ಲಿ 47.9 ರಷ್ಟು ವಾಸ್ತವ ಮಳೆಯಾಗಿದ್ದು, ಶೇಕಡ 73ರಷ್ಟು ಕೊರತೆಯಾಗಿದೆ. ಜೂನ್ 1ರಿಂದ ಸೆಪ್ಟೆಂಬರ್ 30ರವರೆಗೆ ವಾಡಿಕೆ 436 ಮಿಮೀ ಪೈಕಿ 375 ಮಿಮೀ ವಾಸ್ತವ ಮಳೆಯಾಗಿದ್ದು, ಶೇ.14ರಷ್ಟು ಕೊರತೆಯಾಗಿದೆ. ಕಳೆದ 24 ಗಂಟೆಯಲ್ಲಿ 5.2 ಮಿಮೀ ವಾಡಿಕೆ ಮಳೆಯಲ್ಲಿ 10.6 ಮಿಮೀ ವಾಸ್ತವ ಮಳೆಯಾಗಿದ್ದು, ಶೇಕಡ 104ರಷ್ಟು ಹೆಚ್ಚಿನ ಮಳೆಯಾಗಿದೆ. ಕಳೆದ 7 ದಿನಗಳಲ್ಲಿ ಅಂದರೆ ಅ.9 ರಿಂದ 15ರವರೆಗೆ ವಾಡಿಕೆ 36.5 ಮಿಮೀ ಪೈಕಿ 39.9 ಮಿಮೀ ವಾಸ್ತವ ಮಳೆಯಾಗಿದ್ದು, ಶೇಕಡ 9ರಷ್ಟು ಹೆಚ್ಚುವರಿ ಮಳೆಯಾಗಿದೆ. ಅಕ್ಟೋಬರ್ 1 ರಿಂದ 15ರವರೆಗೆ ವಾಡಿಕೆ 89.9 ಮಿಮೀ ಪೈಕಿ 127.9 ಮಿಮೀ ವಾಸ್ತವ ಮಳೆಯಾಗಿದ್ದು, ಶೇಕಡ 42 ರಷ್ಟು ಹೆಚ್ಚುವರಿ ಮಳೆ ಸುರಿದಿದೆ. ಜನವರಿ 1 ರಿಂದ ಅಕ್ಟೋಬರ್ 15ರವರೆಗೆ ವಾಡಿಕೆ 704 ಮಿಮೀ ಪೈಕಿ 647 ಮಿಮೀ ವಾಸ್ತವ ಮಳೆಯಾಗಿದ್ದು, ಶೇಕಡ 8 ರಷ್ಟು ಮಳೆ ಕೊರತೆಯಾಗಿದೆ.---------------------------
ಅಕ್ಟೋಬರ್ 1 ರಿಂದ 15ರವರೆಗಿನ ಮಳೆ ವಿವರತಾಲೂಕು, ವಾಡಿಕೆ ಮಳೆ, ವಾಸ್ತವ ಮಳೆ, ಶೇಕಡ ಚನ್ನಪಟ್ಟಣ, 99.6, 110.3, 11 ಕನಕಪುರ,, 85, 149.4, 76ಮಾಗಡಿ, 102.1, 118.3, 16ರಾಮನಗರ, 98.8, 114.3, 16ಹಾರೋಹಳ್ಳಿ, 9.7, 133.6, 47,