ಸಾರಾಂಶ
ಹನೂರು ತಾಲೂಕಿನ ಪೊನ್ನಾಚಿ ಗ್ರಾಮದಲ್ಲಿ ಕುರುಕುರೆ ವ್ಯಾಪಾರ ಮಾಡಿ ವಾಪಸ್ ಬರುವ ವೇಳೆಯಲ್ಲಿ ಚಿರತೆ ಕಂಡು ವಾಹನ ನಿಯಂತ್ರಿಸಲಾಗದೆ ಕಂದಕಕ್ಕೆ ಪಲ್ಟಿ ಹೊಡೆದಿರುವುದು.
ಕನ್ನಡಪ್ರಭವಾರ್ತೆ ಹನೂರು
ಚಿರತೆ ಅಡ್ಡಬಂದ ಕಾರಣ ನಿಯಂತ್ರಣ ತಪ್ಪಿ ಕಂದಕಕ್ಕೆ ವಾಹನವೊಂದು ಬಿದ್ದಿದ್ದು, ವಾಹನ ಚಾಲಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಜರುಗಿದೆ.ತಾಲೂಕಿನ ಕೌದಳ್ಳಿ ಗ್ರಾಮದ ಅಬ್ದುಲ್ಲಾ ಲತವುಲ ಓಮಿನಿ ವಾಹನದಲ್ಲಿ ತಾಲೂಕಿನ ಕೌದಳ್ಳಿ ಗ್ರಾಮದಿಂದ ಪೊನ್ನಾಚಿ ಗ್ರಾಮಕ್ಕೆ ತೆರಳಿ ಕುರುಕುರೆ ವ್ಯಾಪಾರ ಮಾಡಿ ಕೌದಳ್ಳಿ ಗ್ರಾಮಕ್ಕೆ ವಾಪಸ್ ತೆರಳುತ್ತಿದ್ದಾಗ ಮಾರ್ಗಮಧ್ಯದಲ್ಲಿ ದಟ್ಟ ಅರಣ್ಯ ಪ್ರದೇಶದಲ್ಲಿ ದಿಢೀರನೆ ಚಿರತೆ ರಸ್ತೆಯಲ್ಲಿ ಅಡ್ಡ ಬಂದ ಕಾರಣ ಚಾಲಕ ಗಾಬರಿಗೊಂಡು ವಾಹನವನ್ನು ನಿಯಂತ್ರಿಸಲಾಗದೆ ರಸ್ತೆ ಬದಿಗೆ ವಾಹನ ಚಲಿಸಿದಾಗ ವಾಹನ ಪಲ್ಟಿ ಹೊಡೆದು ನಂತರ ವಾಹನ ಕಂದಕಕ್ಕೆ ಬಿದ್ದಿದೆ.
ಈ ಸಂದರ್ಭದಲ್ಲಿ ಚಾಲಕ ಅಬ್ದುಲ್ಲ ಲತಾ ಉಲ್ಲ ಪ್ರಾಣಾಪಯದಿಂದ ಪಾರಾಗಿದ್ದು ಸ್ಥಳೀಯರ ಸಹಾಯದಿಂದ ಜೆಸಿಬಿಯನ್ನು ಘಟನಾ ಸ್ಥಳಕ್ಕೆ ತರಿಸಿ ಕಂದಕದಲ್ಲಿ ಬಿದ್ದಿದ್ದ ವಾಹನವನ್ನು ಮೇಲೆತ್ತುವಲ್ಲಿ ಸ್ಥಳೀಯರು ಸಹಕಾರ ನೀಡಿದರು.ಭಯಭೀತರಾದ ಗ್ರಾಮಸ್ಥರು: ಪೊನ್ನಾಚಿ ಸೇರಿದಂತೆ ವಿವಿಧ ಗ್ರಾಮಗಳಿಂದ ಈ ರಸ್ತೆಯಲ್ಲಿಯೇ ಜನರು ದಿನನಿತ್ಯ ಸಂಚರಿಸುತ್ತಿದ್ದು ದ್ವಿಚಕ್ರ ವಾಹನಗಳು ಈ ಭಾಗದಲ್ಲಿ ಹೆಚ್ಚಾಗಿ ಓಡಾಡುವುದರಿಂದ ಓಮಿನಿ ವಾಹನಕ್ಕೆ ಚಿರತೆ ಅಡ್ಡಲಾಗಿ ಬಂದಿದ್ದು, ಈ ಭಾಗದಲ್ಲಿ ಇರುವ ಪೊನ್ನಾಚಿ, ಆತೂರು ಹಾಗೂ ವಿವಿಧ ಗ್ರಾಮಗಳ ಜನತೆಯನ್ನು ಭಯಭೀತರನ್ನಾಗಿಸಿದೆ. ಈ ಘಟನೆಯಿಂದ ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಗಮನ ಹರಿಸಿ ಈ ರಸ್ತೆಯಲ್ಲಿ ಸಂಚರಿಸುವ ವೇಳೆಯಲ್ಲಿ ನಾಗರಿಕರಿಗೆ ಚಿರತೆ ತೊಂದರೆ ಉಂಟು ಮಾಡುವ ಮುನ್ನ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ./