ಬಸ್‌ನಲ್ಲಿ ನಮಾಜ್‌ ಮಾಡಿದ್ದ ಡ್ರೈವರ್‌ ಅಮಾನತು

| N/A | Published : May 02 2025, 12:17 AM IST / Updated: May 02 2025, 05:20 AM IST

Namaz in Bus Karnataka

ಸಾರಾಂಶ

ಏ. 29ರಂದು ಹಾನಗಲ್ಲಿನಿಂದ ವಿಶಾಲಗಡಕ್ಕೆ ತೆರಳುವ ಮಾರ್ಗದಲ್ಲಿ ಹುಬ್ಬಳ್ಳಿ ಹೊರವಲಯದ ಗಬ್ಬೂರ ಕ್ರಾಸ್‌ ಬಳಿ ಬಸ್‌ನ್ನು ರಸ್ತೆ ಬದಿಗೆ ನಿಲ್ಲಿಸಿ ಸಂಜೆ 5.30ಕ್ಕೆ ಬಸ್ಸಿನ ಸೀಟ್‌ನಲ್ಲಿಯೇ ಮುಲ್ಲಾ ನಮಾಜ್‌ ಸಲ್ಲಿಸಿದ್ದರು.

ಹಾವೇರಿ: ಮಾರ್ಗಮಧ್ಯದಲ್ಲಿಯೇ ಸಾರಿಗೆ ಸಂಸ್ಥೆಯ ಬಸ್ಸನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸಿ, ಬಸ್‌ನಲ್ಲಿ ಪ್ರಯಾಣಿಕರು ಇರುವಾಗಲೇ ನಮಾಜ್‌ ಮಾಡಿದ್ದ ಹಾನಗಲ್ಲ ಡಿಪೋದ ಚಾಲಕ ಕಂ ನಿರ್ವಾಹಕ ಎ.ಆರ್. ಮುಲ್ಲಾ ಅವರನ್ನು ಅಮಾನತು ಮಾಡಿ ಹಾವೇರಿ ವಾಕರಸಾ ಸಂಸ್ಥೆಯ ವಿಭಾಗೀಯ ನಿಯಂತ್ರಕ ಜಿ. ವಿಜಯಕುಮಾರ ಗುರುವಾರ ಆದೇಶಿಸಿದ್ದಾರೆ.

ಸಾರಿಗೆ ಸೇವೆಯಲ್ಲಿನ ಶಿಸ್ತು ಮತ್ತು ನಿಯಮಾವಳಿಗಳ ಉಲ್ಲಂಘನೆ ಅಡಿಯಲ್ಲಿ ವಿಚಾರಣೆ ಕಾಯ್ದಿರಿಸಿ ಅಮಾನತು ಮಾಡಿ ಆದೇಶಿಸಲಾಗಿದೆ.

ಏ. 29ರಂದು ಹಾನಗಲ್ಲಿನಿಂದ ವಿಶಾಲಗಡಕ್ಕೆ ತೆರಳುವ ಮಾರ್ಗದಲ್ಲಿ ಹುಬ್ಬಳ್ಳಿ ಹೊರವಲಯದ ಗಬ್ಬೂರ ಕ್ರಾಸ್‌ ಬಳಿ ಬಸ್‌ನ್ನು ರಸ್ತೆ ಬದಿಗೆ ನಿಲ್ಲಿಸಿ ಸಂಜೆ 5.30ಕ್ಕೆ ಬಸ್ಸಿನ ಸೀಟ್‌ನಲ್ಲಿಯೇ ಮುಲ್ಲಾ ನಮಾಜ್‌ ಸಲ್ಲಿಸಿದ್ದರು. ಬಸ್‌ನಲ್ಲಿ ಪ್ರಯಾಣಿಕರು ಇದ್ದಾಗಲೇ ಪ್ರಾರ್ಥನೆ ಸಲ್ಲಿಸುತ್ತಿರುವುದನ್ನು ಪ್ರಯಾಣಿಕರೊಬ್ಬರು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಆ ವಿಡಿಯೋ ಭಾರೀ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿ ತಕ್ಷಣ ಶಿಸ್ತು ಕ್ರಮಕ್ಕೆ ಸೂಚನೆ ನೀಡಿದ್ದರು.ಇದೀಗ ಹಾವೇರಿ ವಾಕರಸಾ ಸಂಸ್ಥೆಯ ವಿಭಾಗೀಯ ನಿಯಂತ್ರಕ ಜಿ. ವಿಜಯಕುಮಾರ ಗುರುವಾರ ಹಾನಗಲ್ಲ ಡಿಪೋದ ಚಾಲಕ ಕಂ ನಿರ್ವಾಹಕ ಎ.ಆರ್. ಮುಲ್ಲಾ ಅವರನ್ನು ಸಾರಿಗೆ ಸೇವೆಯಲ್ಲಿನ ಶಿಸ್ತು ಮತ್ತು ನಿಯಮಾವಳಿಗಳ ಉಲ್ಲಂಘನೆ ಅಡಿಯಲ್ಲಿ ವಿಚಾರಣಾ ಕಾಯ್ದಿರಿಸಿ ಆದೇಶಿಸಿದ್ದಾರೆ.

ನಿಯಮಾವಳಿಗಳ ಉಲ್ಲಂಘನೆ: ಸಾರಿಗೆ ಬಸ್‌ನಲ್ಲಿ, ಸಾರಿಗೆ ಸೇವೆಯಲ್ಲಿನ ಶಿಸ್ತು ಮತ್ತು ನಿಯಮಾವಳಿಗಳ ಉಲ್ಲಂಘನೆ ಮಾಡಿ ಪ್ರಾರ್ಥನೆ ಸಲ್ಲಿಸಿದ ಹಿನ್ನೆಲೆ ಹಾನಗಲ್ಲ ಡಿಪೋದ ಎ.ಆರ್. ಮುಲ್ಲಾ ಅವರನ್ನು ವಿಚಾರಣಾ ಪೂರ್ವವಾಗಿ ಅಮಾನತು ಮಾಡಲಾಗಿದೆ. ಅವರು ಈ ಕುರಿತು ತಮ್ಮ ಸ್ಪಷ್ಟ ಉತ್ತರಗಳನ್ನು ನೀಡಬೇಕಿದೆ ಎಂದು ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿ ಜಿ. ವಿಜಯಕುಮಾರ ತಿಳಿಸಿದರು. 

4ರಂದು ಹಾನಗಲ್ಲಿನ ಇಂದಿರಾ ಕ್ಯಾಂಟೀನ್ ಉದ್ಘಾಟನೆ

ಹಾನಗಲ್ಲ: ಬಹುನಿರೀಕ್ಷಿತ ಇಂದಿರಾ ಕ್ಯಾಂಟೀನ್ ಮುಖ್ಯಮಂತ್ರಿಗಳಿಂದ ಮೇ 4ರಂದು ಉದ್ಘಾಟನೆಗೊಳ್ಳಲಿದ್ದು, ಅಂತಿಮ ಹಂತದ ಕಾಮಗಾರಿ ಭರದಿಂದ ಸಾಗಿ ಶೀಘ್ರ ಬಯಸಿದವರ ಹಸಿವು ನೀಗಿಸುವ ಕಾರ್ಯಕ್ಕೆ ಚಾಲನೆ ದೊರೆತಿದೆ.

ಗುರುವಾರ ಪುರಸಭೆ ಅಧ್ಯಕ್ಷ ಪರಶುರಾಮ ಖಂಡೂನವರ ಹಾಗೂ ಮುಖ್ಯಾಧಿಕಾರಿ ವೈ.ಕೆ. ಜಗದೀಶ ಖುದ್ದಾಗಿ ಇದ್ದು, ಇಂದಿರಾ ಕ್ಯಾಂಟೀನ್ ಕಾಮಗಾರಿಯನ್ನು ವೀಕ್ಷಿಸಿ ವೇಗದ ಚಾಲನೆಗೆ ಕಾಳಜಿ ವಹಿಸುತ್ತಿದ್ದಾರೆ.

₹87 ಲಕ್ಷ ವೆಚ್ಚದ ಈ ಇಂದಿರಾ ಕ್ಯಾಂಟೀನ್ ಪ್ರಾಥಮಿಕ ಹಂತದ ಕಾಮಗಾರಿ ಮುಗಿದು ಹಲವು ತಿಂಗಳುಗಳೇ ಮುಗಿದಿವೆ. ಆದರೆ ಮುಖ್ಯಮಂತ್ರಿಗಳೇ ತಾಲೂಕಿನ ವಿವಿಧ ಕಾಮಗಾರಿ ಉದ್ಘಾಟನೆಗೆ ಆಗಮಿಸಿದ ಸಂದರ್ಭದಲ್ಲಿಯೇ ಇದರ ಉದ್ಘಾಟನೆಯಾಗಬೇಕೆಂಬ ಚರ್ಚೆ ನಡೆಯುತ್ತಿತ್ತು. ಆ ಕಾರಣಕ್ಕಾಗಿಯೇ ಮೇ 4ರಂದು ಉದ್ಘಾಟನೆಗೊಳ್ಳಲಿದೆ.