ನರಸಿಂಹರಾಜಪುರ ಡ್ರೈವಿಂಗ್ ಲೈಸನ್ಸ್ ಹಾಗೂ ವಿಮೆ ಇಲ್ಲದೆ ವಾಹನ ಚಾಲನೆ ಮಾಡುವುದು ಅಪರಾಧ ಎಂದು ಜೆಎಂಎಫ್.ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಟಿ.ರಘುನಾಥ ಗೌಡ ತಿಳಿಸಿದರು.
- ಬಿ.ಎಚ್.ಕೈಮರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ರಾಷ್ಟೀಯ ಗ್ರಾಹಕರ ದಿನ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಡ್ರೈವಿಂಗ್ ಲೈಸನ್ಸ್ ಹಾಗೂ ವಿಮೆ ಇಲ್ಲದೆ ವಾಹನ ಚಾಲನೆ ಮಾಡುವುದು ಅಪರಾಧ ಎಂದು ಜೆಎಂಎಫ್.ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಟಿ.ರಘುನಾಥ ಗೌಡ ತಿಳಿಸಿದರು.
ಮಂಗಳವಾರ ಬಿ.ಎಚ್.ಕೈಮರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ,ಸಹಾಯಕ ಸರ್ಕಾರಿ ಅಭಿಯೋಜನಾ ಇಲಾಖೆ ಹಾಗೂ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಗ್ರಾಹಕರ ದಿನ ಉದ್ಘಾಟಿಸಿ ಮಾತನಾಡಿದರು. ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಓಡಿಸ ಬಾರದು. ಬ್ಯಾಂಕ್ ಖಾತೆ ಚೆಕ್ ಬುಕ್ ಕಳೆದು ಹೋದರೆ, ಬ್ಯಾಂಕಿನ ಚೆಕ್ ಗಳಲ್ಲಿ ಮೋಸ ನಡೆದರೆ ಸಿವಿಲ್ ನ್ಯಾಯಾಲಯಕ್ಕೆ ದೂರು ಸಲ್ಲಿಸಬಹುದು ಎಂದರು.ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಸಿವಿಲ್ ನ್ಯಾಯಾಧೀಶ ಆರ್.ಎಸ್. ಜೀತು ಮಾತನಾಡಿ, ಕಂಜುಮರ್ ಪ್ರೊಟೆಕ್ಷನ್ ಆ್ಯಕ್ಟ್ ರಾಷ್ಟ್ರೀಯ ಗ್ರಾಹಕರ ಪರಿಹಾರ ಅಧಿನಿಯಮ 1986 ರ ಡಿ. 24 ರಂದು ಜಾರಿಯಾಗಿದೆ. ಈಗ ತ್ವರಿತ ಗತಿಯಲ್ಲಿ ಗ್ರಾಹಕರಿಗೆ ಪರಿಹಾರ ಸಿಗಲಿದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ವಕೀಲ ಎಂ.ದೇವೇಂದ್ರ ಉಪನ್ಯಾಸ ನೀಡಿ, ದಿನನಿತ್ಯ ಯಾವುದೇ ವಸ್ತುಗಳನ್ನು ಕೊಂಡು ಕೊಂಡಾಗ ಮತ್ತು ಪಡೆದಾಗ ಗ್ರಾಹಕರಾಗುತ್ತಾರೆ. ಗ್ರಾಹಕರ ಸಂರಕ್ಷಣಾ ಕಾಯ್ದೆ ಸೆಕ್ಷನ್ 34,41,51 ಮತ್ತು 67 ರ ಪ್ರಕಾರ ಎಲ್ಲಾ ಗ್ರಾಹಕರಿಗೂ ಸೇವಾ ನ್ಯೂನ್ಯತೆ ಅಥವಾ ವಸ್ತುಗಳಲ್ಲಿ ದೋಷ, ಅನ್ಯಾಯ, ಮೋಸ, ಸುಳ್ಳುಗಳು ಕಂಡು ಬಂದಲ್ಲಿ ಜಿಲ್ಲಾ ಗ್ರಾಹಕ ಪರಿಹಾರ ಕಮೀಷನ್ ಅವರಿಗೆ ದೂರು ಸಲ್ಲಿಸಬಹುದು. ಅಲ್ಲೂ ಸೂಕ್ತ ನ್ಯಾಯ ಸಿಗದಿದ್ದರೆ ರಾಜ್ಯ ಗ್ರಾಹಕ ಪರಿಹಾರ ಕಮೀಷನರ್ ಅವರಿಗೂ ದೂರು ನೀಡಬಹುದು. ಕೊನೆಗೆ ಸರ್ವೋಚ್ಚ ನ್ಯಾಯಾಲಯದ ಮುಖಾಂತರ ತಮಗೆ ಆದ ಅನ್ಯಾಯಗಳ ಬಗ್ಗೆ ದೂರು ಸಲ್ಲಿಸಿ ನ್ಯಾಯ ಪಡೆದುಕೊಳ್ಳಬಹುದು ಎಂದರು.ಅತಿಥಿಗಳಾಗಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಜಯಪ್ರಕಾಶ್ ಗ್ರಾಹಕರ ಸಂರಕ್ಷಣಾ ಕಾಯ್ದೆ, ಗ್ರಾಹಕರು ಮೋಸ ಹೋದಾಗ ಅನುಸರಿಸಬೇಕಾದ ಕಾನೂನು ಅಂಶಗಳನ್ನು ವಿವರಿಸಿದರು. ಸಹಾಯಕ ಸರ್ಕಾರಿ ಅಭಿಯೋಜಕ ಜಿ.ಬಿ. ನೇಕಾರ್ ಪೋಕ್ಸೋ ಕಾಯ್ದೆ, ಸೈಬರ್ ಕ್ರೈಂ ಬಗ್ಗೆ ವಿವರಿಸಿದರು.
ಸಭೆಯಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕಚೇರಿ ಅಧೀಕ್ಷಕ ಕಿರಣ್ ಬೇಂದ್ರೆ, ತರಬೇತಿ ಅಧಿಕಾರಿ ರವಿರಾಜ್ ಹೆಗಡೆ ಉಪಸ್ಥಿತರಿದ್ದರು. ಕಿರಿಯ ತರಬೇತಿ ಅಧಿಕಾರಿ ಸುಮ ಸ್ವಾಗತಿಸಿದರು. ಕಿರಿಯ ತರಬೇತಿ ಅಧಿಕಾರಿ ನಾಗವೇಣಿ ಕಾರ್ಯಕ್ರಮ ನಿರೂಪಿಸಿದರು. ಕಿರಿಯ ತರಬೇತಿ ಅಧಿಕಾರಿ ವಾಣಿ ವಂದಿಸಿದರು.