ಸಾರಾಂಶ
ಮಾದಕ ದ್ರವ್ಯ ಸೇವಿಸುವುದರಿಂದ ಉಂಟಾಗುವ ದೀರ್ಘಕಾಲೀನ ಸಮಸ್ಯೆಗಳು ಹದಿಹರೆಯದವರ ಜೀವನದ ವಿವಿಧ ಅಂಶಗಳ ಮೇಲೆ ತೀವ್ರ ಪರಿಣಾಮ ಬೀರುತ್ತವೆ.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಹದಿಹರೆಯದರಲ್ಲಿ ಮಾನವನ ಮೆದುಳು ಇನ್ನೂ ಬೆಳವಣಿಗೆಯ ಹಂತದಲ್ಲಿರುವುದರಿಂದ ಮಾದಕ ದ್ರವ್ಯ ಸೇವನೆಗೆ ಹೆಚ್ಚು ಮುಂದಾದರೆ ಹಾನಿಕಾರಕ ಪರಿಣಾಮಗಳಿಗೆ ನಾವೇ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಸಿ ಶ್ರೀಕಾಂತ್ ತಿಳಿಸಿದರು.ಅವರು ಪಟ್ಟಣದ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಶ್ರೀ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವರ ಸಹಯೋಗದಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ಹದಿಹರೆಯದವರಲ್ಲಿ ಮಾದಕ ದ್ರವ್ಯ ಸೇವನೆಯು ಪೋಷಕರು ಮತ್ತು ಆರೋಗ್ಯ ವೃತ್ತಿಪರರಲ್ಲಿ ಕಳವಳವನ್ನು ಹುಟ್ಟುಹಾಕುವ ಒಂದು ತುರ್ತು ವಿಷಯವಾಗಿದೆ. ಹಾಗಾಗಿ ಈ ಕುರಿತು ಪೋಷಕರು ಜಾಗೃತಿ ವಹಿಸಬೇಕು, ಮಾದಕ ವ್ಯಸನಕ್ಕೆ ಯುವ ಪೀಳಿಗೆ ಆಕರ್ಷಿತರಾಗದೆ ಉನ್ನತ ವ್ಯಾಸಂಗಕ್ಕೆ ಹೆಚ್ಚು ತೊಡಗಿಸಿಕೊಂಡು ಸಾರ್ಥಕ ಜೀವನ ನಡೆಸಿ, ಕಾನೂನು ಅರಿತು ಗೌರವಿಸಿ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶೆ ಸುನಿತಾ ಮಾತನಾಡಿ, ಮಾದಕ ದ್ರವ್ಯ ಸೇವಿಸುವುದರಿಂದ ಉಂಟಾಗುವ ದೀರ್ಘಕಾಲೀನ ಸಮಸ್ಯೆಗಳು ಹದಿಹರೆಯದವರ ಜೀವನದ ವಿವಿಧ ಅಂಶಗಳ ಮೇಲೆ ತೀವ್ರ ಪರಿಣಾಮ ಬೀರುತ್ತವೆ. ಇವುಗಳಲ್ಲಿ ಮಾನಸಿಕ ಆರೋಗ್ಯ ಕ್ಷೀಣಿಸುವುದು, ಸ್ಮರಣಾ ಶಕ್ತಿಯ ಕೊರತೆಯಂತಹ ದುರ್ಬಲಗೊಂಡ ಅರಿವಿನ ಕಾರ್ಯಗಳು, ಸಾಮಾನ್ಯ ಬೆಳವಣಿಗೆಯಲ್ಲಿ ಅಡಚಣೆಗಳು ಮತ್ತು ಪ್ರೌಢಾವಸ್ಥೆ ವಿಳಂಬವೂ ಆಗಲಿದೆ, ಈ ಹಿನ್ನೆಲೆ ಯುವ ಪೀಳಿಗೆ ಉತ್ತಮ ಅಭ್ಯಾಸ ರೂಢಿಸಿಕೊಳ್ಳಿ, ಕಾನೂನಿನ ಬಗ್ಗೆ ಹೆಚ್ಚು ತಿಳಿವಳಿಕೆ ಹೊಂದಿ, ಕ್ರಿಯಾಶೀಲರಾಗಿ ಸಾಧಕರಾಗಿ ಎಂದರು. ಕಾರ್ಯಕ್ರಮದಲ್ಲಿ ಅಪರ ಸಿವಿಲ್ ನ್ಯಾಯಾಧೀಶ ಎಂ. ರಂಜಿತ್ ಕುಮಾರ್, ವಕೀಲರ ಸಂಘದ ಅಧ್ಯಕ್ಷ ಸಿ ರವಿ, ಕಾರ್ಯದರ್ಶಿ ಸಿ.ಬಿ ಮಹೇಶ್ ಕುಮಾರ್, ಚಿನ್ನರಾಜು, ಪ್ರಾಂಶುಪಾಲೆ ಜಯಲಕ್ಷ್ಮೀ ಇನ್ನಿತರಿದ್ದರು.