ಭಾರತದಲ್ಲಿ ಸುಮಾರು ಆರು ಕೋಟಿ ಜನರು ಈ ವ್ಯಸನಕ್ಕೆ ಬಲಿಯಾಗಿದ್ದಾರೆ. ಪಂಜಾಬ್‌ ಹಾಗೂ ಮಣಿಪುರ ರಾಜ್ಯಗಳಲ್ಲಿ ಅತೀ ಹೆಚ್ಚು ಮಾದಕ ವಸ್ತು ಸೇವನೆ ವ್ಯಸನಿಗಳಿದ್ದಾರೆ. ಈ ಸೇವನೆ ಪ್ರಾರಂಭದಲ್ಲಿ ಖುಷಿ ಎನಿಸಿದರೂ ಜೀವನ ಪೂರ್ತಿ ಕೊರಗುವಂತೆ ಮಾಡುತ್ತದೆ.

ಧಾರವಾಡ:

ಮಾದಕ ವಸ್ತು ಸೇವನೆ ಮನುಷ್ಯನನ್ನು ಭ್ರಮಾಲೋಕದಲ್ಲಿ ಬದುಕುವಂತೆ ಮಾಡಿ ದೇಹ ಹಾಗೂ ಮನಸ್ಸು ಸಮತೋಲನ ಕಳೆದುಕೊಳ್ಳುವಂತೆ ಮಾಡುತ್ತವೆ ಎಂದು ಡಿಮ್ಹಾನ್ಸ್ ಮನೋವೈದ್ಯಕೀಯ ಸಮಾಜ ಕಾರ್ಯಕರ್ತ ಪ್ರಶಾಂತ ಪಾಟೀಲ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ಹುಬ್ಬಳ್ಳಿಯ ಪತ್ರಕರ್ತ ನಗರದ ಸರ್ಕಾರಿ ಕಾಲೇಜಿನಲ್ಲಿ ಆಯೋಜಿಸಿದ್ದ `ಮಾದಕ ವಸ್ತುಗಳು ದುರ್ವ್ಯಸನ ತಡೆಗಟ್ಟುವಲ್ಲಿ ಯುವ ವಿದ್ಯಾರ್ಥಿಗಳ ಪಾತ್ರ’ ಕುರಿತು ಮಾತನಾಡಿದ ಅವರು, ಭಾರತದಲ್ಲಿ ಸುಮಾರು ಆರು ಕೋಟಿ ಜನರು ಈ ವ್ಯಸನಕ್ಕೆ ಬಲಿಯಾಗಿದ್ದಾರೆ. ಪಂಜಾಬ್‌ ಹಾಗೂ ಮಣಿಪುರ ರಾಜ್ಯಗಳಲ್ಲಿ ಅತೀ ಹೆಚ್ಚು ಮಾದಕ ವಸ್ತು ಸೇವನೆ ವ್ಯಸನಿಗಳಿದ್ದಾರೆ. ಈ ಸೇವನೆ ಪ್ರಾರಂಭದಲ್ಲಿ ಖುಷಿ ಎನಿಸಿದರೂ ಜೀವನ ಪೂರ್ತಿ ಕೊರಗುವಂತೆ ಮಾಡುತ್ತದೆ ಎಂದರು.

ಮೆದುಳು, ಜೀರ್ಣಕ್ರಿಯೆ, ನರಮಂಡಲವನ್ನು ಹಾಳು ಮಾಡುತ್ತದೆ. ಇದರ ಸೇವನೆಯಿಂದ ಅನೇಕ ಅಪರಾಧ ಕೃತ್ಯ, ಅಪಘಾತ ಸಂಭವಿಸುತ್ತವೆ. ಪರಕೀಯ ಪ್ರಜ್ಞೆ ಹಾಗೂ ಸಮ ವಯಸ್ಕರ ಸಹವಾಸ ದೋಷದಿಂದ ಯುವಕರು ದುರ್ವ್ಯಸನಿಗಳಾಗುತ್ತಿದ್ದಾರೆ. ಒಳ್ಳೆಯ ಯುವಕರ ಸಹವಾಸದೊಂದಿಗೆ ವಿದ್ಯಾರ್ಥಿಗಳು ಆರೋಗ್ಯದ ಕಡೆ ಗಮನ ಕೊಡಬೇಕೆಂದು ಹೇಳಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ವಿದ್ಯಾರ್ಥಿಗಳು ಈ ನಾಡಿನ ಜೀವಂತ ಆಸ್ತಿ. ಓದುವ ಸಮಯದಲ್ಲಿ ಕೆಟ್ಟ ಹವ್ಯಾಸಗಳಿಗೆ ಬಲಿಯಾಗಬಾರದು. ತಂದೆ-ತಾಯಿ ಏನೆಲ್ಲ ಕಷ್ಟಪಡುತ್ತಿದ್ದಾರೆಂದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ರಮೇಶ ರಟಗೇರಿ ಮಾತನಾಡಿದರು. ಡಾ. ಶ್ರೀಪಾಲ ಕುರಕುರಿ ಸ್ವಾಗತಿಸಿದರು. ಡಾ. ವಿದ್ಯಾ ಹಡಗಲಿ ಪರಿಚಯಿಸಿದರು. ಸಂಚಾಲಕ ವೀರಣ್ಣ ಒಡ್ಡೀನ ಪ್ರಾಸ್ತಾವಿಕ ಮಾತನಾಡಿದರು. ಪ್ರೊ. ಮಂಜುನಾಥ ಕುರಿ ನಿರೂಪಿಸಿದರು. ಕಿರಣ ರೇವಣಕರ ವಂದಿಸಿದರು.